ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಮುಸ್ಲಿಂ ಸಮುದಾಯವು ಇತ್ತೀಚಿನ ವರ್ಷಗಳಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧಿಸಿರುವ ಪ್ರಗತಿ ಗಮನಾರ್ಹವಾಗಿದೆ. ಮಂಗಳೂರು ಎಂ.ವಿ. ಶೆಟ್ಟಿ ಆಸ್ಪತ್ರೆಯಲ್ಲಿ ಬೆಳಗ್ಗಿನ ವೇಳೆಯಲ್ಲಿ ಕಂಡ ದೃಶ್ಯವೇ ಇದಕ್ಕೆ ಜೀವಂತ ಸಾಕ್ಷಿಯಾಗಿದೆ. ಡಾಕ್ಟರ್ ಯು.ಟಿ. ಇಫ್ತಿಕಾರ್ ಅಲಿ ಅವರ ಮಾರ್ಗದರ್ಶನಕ್ಕಾಗಿ ನೂರಾರು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಸೇರಿರುವುದು, ನಮ್ಮ ಸಮುದಾಯದ ಶೈಕ್ಷಣಿಕ ಚೈತನ್ಯವನ್ನು ಸ್ಪಷ್ಟವಾಗಿ ತೋರಿಸುತ್ತದೆ ಎಂದು ಎಸ್ಕೆಎಸ್ಎಸ್ಎಫ್ ರಾಜ್ಯ ಸಮಿತಿ ಉಪಾಧ್ಯಕ್ಷ ಇಕ್ಬಾಲ್ ಬಾಳಿಲ ಹೇಳಿದರು.

ಉತ್ತಮ ರ್ಯಾಂಕ್ ಪಡೆದ ಹಾಗೂ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ತಮ್ಮ ಮುಂದಿನ ವಿದ್ಯಾಭ್ಯಾಸಕ್ಕಾಗಿ ಉಚಿತ ಸೀಟುಗಳ ಬಗ್ಗೆ ಸಲಹೆ ಪಡೆಯಲು ಆಗಮಿಸಿರುವುದು ಒಂದು ಸಂತೋಷಕರ ಬೆಳವಣಿಗೆ. ವಿವಿಧ ಸಂಘ ಸಂಸ್ಥೆಗಳು ಮತ್ತು ದಾನಿಗಳ ಸಹಕಾರದಿಂದ ಈ ರೀತಿಯ ಶೈಕ್ಷಣಿಕ ನೆರವುಗಳು ನೀಡಲ್ಪಡುವುದು ಸಮುದಾಯದ ಉಜ್ವಲ ಭವಿಷ್ಯಕ್ಕೆ ಬುನಾದಿ ಹಾಕುತ್ತಿದೆ ಎಂದರು.

ಆದರೆ, ಈ ಪ್ರಗತಿಯ ನಡುವೆ ಮತ್ತೊಂದು ಮಹತ್ವದ ಪ್ರಶ್ನೆ ಎದುರಾಗುತ್ತದೆ. ವೈದ್ಯಕೀಯ, ಇಂಜಿನಿಯರಿಂಗ್ ಮುಂತಾದ ವೃತ್ತಿಪರ ಕ್ಷೇತ್ರಗಳಲ್ಲಿ ನಾವು ಮುಂದೆ ಸಾಗುತ್ತಿದ್ದರೂ, ಸಿವಿಲ್ ಸರ್ವೀಸ್ಗಳಾದ IAS, IPS, KAS, FDA, SDA ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ಕಡೆ ನಮ್ಮ ಯುವಕರ ಗಮನ ಕಡಿಮೆ ಇರುವುದೇ ವಿಷಾದನೀಯ. ಪ್ರತಿ ಕುಟುಂಬವೂ ಕನಿಷ್ಠ ಒಬ್ಬ ವಿದ್ಯಾರ್ಥಿಯನ್ನು ಸಿವಿಲ್ ಸರ್ವೀಸ್ ಗುರಿಯತ್ತ ದಾರಿತೋರುವ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು. ಮಕ್ಕಳಿಗೆ ಬಾಲ್ಯದಿಂದಲೇ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅರಿವು ಮೂಡಿಸಿ, ಸರಿಯಾದ ಮಾರ್ಗದರ್ಶನ ನೀಡುವುದು ಕಾಲದ ಅಗತ್ಯವಾಗಿದೆ. ಈಗಾಗಲೇ ಕೆಲವು ಸಂಸ್ಥೆಗಳು ಈ ದಿಕ್ಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ, ಇನ್ನಷ್ಟು ಸಮಗ್ರ ಮತ್ತು ವ್ಯವಸ್ಥಿತ ಪ್ರಯತ್ನಗಳು ಅಗತ್ಯವಿದೆ.

ಸಿವಿಲ್ ಸರ್ವೀಸ್ಗಳಲ್ಲಿ ಪ್ರವೇಶವು ಕೇವಲ ವೈಯಕ್ತಿಕ ಸಾಧನೆ ಮಾತ್ರವಲ್ಲ, ಅದು ಸಮುದಾಯದ ಗೌರವ ಮತ್ತು ದೇಶಸೇವೆಯ ಮಹತ್ತರ ಅವಕಾಶವೂ ಹೌದು. ಶಿಕ್ಷಣದ ಮೂಲಕ ಸಮಾಜವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಈ ದಾರಿ, ನಮ್ಮ ಯುವಜನತೆಗೆ ಹೊಸ ದಿಕ್ಕು ತೋರಿಸಲಿದೆ. ಇಂದಿನ ಶೈಕ್ಷಣಿಕ ಸಾಧನೆಗಳು ನಾಳೆಯ ಆಡಳಿತ ನಾಯಕತ್ವವಾಗಿ ರೂಪುಗೊಳ್ಳಬೇಕಾದರೆ, ಇಂದೇ ನಾವು ದಿಕ್ಕು ತಿದ್ದಿಕೊಳ್ಳಬೇಕು. “ಡಾಕ್ಟರ್, ಇಂಜಿನಿಯರ್” ಕನಸುಗಳ ಜೊತೆಗೆ “ಐಎಎಸ್, ಐಪಿಎಸ್” ಕನಸುಗಳನ್ನು ಬೆಳೆಸುವ ಸಮಯ ಬಂದಿದೆ.

ಸಮುದಾಯದ ಶಕ್ತಿ, ದಾನಿಗಳ ಸಹಕಾರ, ಮತ್ತು ಯುವಕರ ಪರಿಶ್ರಮ — ಈ ಮೂರೂ ಒಂದಾದರೆ, ದಕ್ಷಿಣ ಕನ್ನಡ ಜಿಲ್ಲೆಯಿಂದಲೂ ನೂರಾರು ಸಿವಿಲ್ ಸರ್ವಂಟ್ಗಳು ಹೊರಹೊಮ್ಮುವುದು ಅಸಾಧ್ಯವೇನಲ್ಲ ಎಂದು ತಿಳಿಸಿದರು.