‘ವಿಷನ್ 2030’ರ ಮೂಲಕ ಕ್ರೀಡಾ ಕ್ರಾಂತಿ- ಜೂಡೋ ಅಭಿವೃದ್ಧಿಗೆ ‘ಗ್ರಾಸ್‌ರೂಟ್ಸ್ ಟು ಗೋಲ್ಡ್’ ಯೋಜನೆ

ಮಂಗಳೂರು: “2030ರ ವೇಳೆಗೆ ಕರ್ನಾಟಕವನ್ನು ಭಾರತದ ಜೂಡೋ ಶಕ್ತಿ ಕೇಂದ್ರವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ನಾವು ಇಂದು ʻವಿಷನ್ 2030′ ನೀಲನಕ್ಷೆಯನ್ನು ಆರಂಭಿಸಿದ್ದೇವೆ” ಎಂದು ಕೆ.ಪಿ. ಮೊಂತೆರೋ ಅವರು ಹೇಳಿದರು.

ಮಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಸೇರಿದಂತೆ ರಾಜ್ಯದ ಜೂಡೋ ಕ್ರೀಡೆಯ ಗತವೈಭವವನ್ನು ಮರುಸ್ಥಾಪಿಸಲು ಈ ದೂರದೃಷ್ಟಿಯ ಮಾರ್ಗಸೂಚಿ ಸಿದ್ಧವಾಗಿದೆ. ಅಲ್ಲದೆ, 2030ರ ಕಾಮನ್‌ವೆಲ್ತ್ ಕ್ರೀಡಾಕೂಟವು ಭಾರತದ ನೆಲದಲ್ಲಿ ನಡೆಯಲಿದ್ದು, ಕರ್ನಾಟಕದ ಕ್ರೀಡಾಪಟುಗಳು ರಾಷ್ಟ್ರಕ್ಕೆ ಗರಿಷ್ಠ ಪದಕಗಳನ್ನು ಗಳಿಸಿಕೊಡುವ ಗುರಿಯನ್ನು ನಾವು ಹೊಂದಿದ್ದೇವೆ. ಇದಕ್ಕಾಗಿ ʻಗ್ರಾಸ್‌ರೂಟ್ಸ್ ಟು ಗೋಲ್ಡ್’ ಎಂಬ ವಿಶೇಷ ಕಾರ್ಯಕ್ರಮದ ಮೂಲಕ ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ, ಉಡುಪಿ, ಮಂಗಳೂರು ಮತ್ತು ಉತ್ತರ ಕರ್ನಾಟಕ ಭಾಗಗಳಲ್ಲಿ ಅತ್ಯಾಧುನಿಕ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದರು.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ⬇️

ಕ್ರೀಡಾ ಸಂಸ್ಥೆಗಳಲ್ಲಿನ ಸದ್ಯದ ಸ್ಥಿತಿಯ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, “ಪ್ರಸ್ತುತ ನಾಯಕತ್ವವು ಕ್ರೀಡಾಪಟುಗಳ ಪ್ರಗತಿಗಿಂತ ವೈಯಕ್ತಿಕ ಲಾಭಕ್ಕೆ ಆದ್ಯತೆ ನೀಡುತ್ತಿದೆ. ಇಂತಹ ಆಡಳಿತಾತ್ಮಕ ವೈಫಲ್ಯಗಳಿಂದ ಸಂಸ್ಥೆಗಳು ಹಾಳಾಗುತ್ತಿವೆ. ಇದನ್ನು ಸರಿಪಡಿಸಲು ಡಿಜಿಟಲ್ ಪೋರ್ಟಲ್ ಮೂಲಕ ಪಾರದರ್ಶಕ ನೋಂದಣಿ ಹಾಗೂ ಮೂರನೇ ವ್ಯಕ್ತಿಯಿಂದ ಹಣಕಾಸಿನ ಲೆಕ್ಕಪರಿಶೋಧನೆ ನಡೆಸುವ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಲಾಗುವುದು ಎಂದು ಅವರು ಘೋಷಿಸಿದರು.

ಶಾಲೆಗಳಲ್ಲಿ ಆತ್ಮರಕ್ಷಣೆಗಾಗಿ ಜೂಡೋವನ್ನು ಕಡ್ಡಾಯ ಆಯ್ಕೆಯಾಗಿ ಪರಿಚಯಿಸಲು ಮತ್ತು ಪದಕ ವಿಜೇತರಿಗೆ ಪೊಲೀಸ್ ಹಾಗೂ ಆಡಳಿತಾತ್ಮಕ ಸೇವೆಗಳಲ್ಲಿ ರದ್ದುಗೊಂಡಿರುವ ‘ಕ್ರೀಡಾ ಕೋಟಾ’ವನ್ನು ಪುನಃಸ್ಥಾಪಿಸಲು ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ಭ್ರಷ್ಟಾಚಾರದ ಯುಗ ಇಂದು ಕೊನೆಗೊಳ್ಳುತ್ತಿದೆ, ಕ್ರೀಡಾಪಟುವಿನ ಯುಗ ಈಗ ಪ್ರಾರಂಭವಾಗುತ್ತಿದೆ” ಎಂದವರು ಆಶಯ ವ್ಯಕ್ತಪಡಿಸಿದರು.


ಗೋಷ್ಠಿಯಲ್ಲಿ ಯತೀಶ್ ನಾರಾಯಣ್ ಬಂಗೇರ ಹಾಗೂ ಇತರರು ಉಪಸ್ಥಿತರಿದ್ದರು.

error: Content is protected !!