
ಬೆಂಗಳೂರು: ಕಾಮಗಾರಿ ಹಿನ್ನೆಲೆಯಲ್ಲಿ ಏ.13ರಂದು ಬೆಳಗ್ಗೆ 5 ಗಂಟೆಯಿಂದ ಏ.17ರಂದು ಬೆಳಗ್ಗೆ 11 ಗಂಟೆಯವರೆ ಪೀಣ್ಯ ಮೇಲ್ಸೇತುವೆ ಸಂಚಾರ ರದ್ದು ಮಾಡಲಾಗಿದೆ ಎಂದು ಸಂಚಾರ ವಿಭಾಗದ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ. ಪೀಣ್ಯ ಸಂಚಾರ ಪೊಲೀಸ್ ಠಾಣೆಯ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ-4 ರ ಪೀಣ್ಯ ಮೇಲ್ಸೇತುವೆ ಮೇಲೆ ಅಳವಡಿಸಲಾದ ಕೇಬಲ್ಗಳ ದುರಸ್ತಿ ಕಾಮಗಾರಿ ಪೂರ್ಣಗೊಂಡಿರುವುದರಿಂದ, ಅವುಗಳ ಸಮಗ್ರತೆಯನ್ನು ಪರಿಶೀಲಿಸುವ ಸಲುವಾಗಿ ಅಂತಿಮ ಲೋಡ್ ಟೆಸ್ಟಿಂಗ್ ನಡೆಸಬೇಕಾಗಿದೆ.

ಈ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಕೋರಿಕೆ ಬಂದಿರುವುದರಿಂದ ಏ.13ರಂದು ಬೆಳಗ್ಗೆ 5 ಗಂಟೆಯಿಂದ ಏ.17ರಂದು ಬೆಳಗ್ಗೆ 11 ಗಂಟೆಯವರೆಗೆ ಪೀಣ್ಯ ಎಲಿವೇಟೆಡ್ ಫ್ಲೈಓವರ್ ಮೇಲೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಪೀಣ್ಯ ಮೇಲ್ಸೇತುವೆ ಮೇಲೆ ಕೆನ್ನಮೆಟಲ್ ವಿಡಿಯಾ ಅಪ್ಪರ್ ರ್ಯಾಮ್ ಎಸ್. ಆರ್.ಎಸ್ ಡೌನ್ ರ್ಯಾಮ್ ವರೆಗೆ 2 ಕಡೆಯಲ್ಲಿ ಮೇಲ್ಸೇತುವೆ ಮೇಲೆ ನಿರ್ಬಂಧಿಸಲಾಗುತ್ತದೆ.

ಪರ್ಯಾಯ ಮಾರ್ಗಗಳು:
ನೆಲಮಂಗಲ-ಬೆಂಗಳೂರು: ನೆಲಮಂಗಲದಿಂದ ಬರುವ ವಾಹನಗಳು ಕನ್ನಮೆಟಲ್ ವಿಡಿಯಾ ಹತ್ತಿರ ಫ್ಲೈ ಒವರ್ ಏರುವಂತಿಲ್ಲ. ಬದಲಾಗಿ ಫ್ಲೈ ಓವರ್ ಕೆಳಭಾಗದ ಎನ್.ಎಚ್.-4 ರಸ್ತೆ ಹಾಗೂ ಸರ್ವಿಸ್ ರಸ್ತೆ ಮೂಲಕ 8ನೇ ಮೈಲಿ, ದಾಸರಹಳ್ಳಿ, ಜಾಲಹಳ್ಳಿ ಕ್ರಾಸ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್, ಎಸ್ಆರ್ ಎಸ್. ಜಂಕ್ಷನ್ ಮಾರ್ಗವಾಗಿ ಗೊರಗುಂಟೆಪಾಳ್ಯ ತಲುಪಬಹುದು.

ನಗರದಿಂದ ಹೊರ ಹೋಗುವ ವಾಹನಗಳು ಫ್ಲೈಓವರ್ ಕೆಳಭಾಗದ ಎನ್.ಎಚ್.-4 ರಸ್ತೆ ಹಾಗೂ ಸರ್ವಿಸ್ ರಸ್ತೆಯನ್ನು ಬಳಸಬಹುದು. ಎಸ್.ಆರ್.ಎಸ್. ಜಂಕ್ಷನ್, ಪೀಣ್ಯ ಪೊಲೀಸ್ ಠಾಣೆ ಜಂಕ್ಷನ್, ಜಳ್ಹಳ್ಳಿ ಕ್ರಾಸ್, ದಾಸರಹಳ್ಳಿ, 8ನೇ ಮೈಲಿ ದಾಟಿ ಪಾರ್ಲೆ ಜಿ. ಟೋಲ್ ಮೂಲಕ ನೆಲಮಂಗಲದ ಕಡೆ ಹೋಗಬಹುದು.