
ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದಂತೆ ರಿಕ್ಷಾವೊಂದು ಬೆಂಕಿಗಾಹುತಿಯಾದ ಘಟನೆ ಬಂಟ್ವಾಳದ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಮೂರ್ಜೆ ಎಂಬಲ್ಲಿ ನಡೆದಿದೆ.

ಬಾಂಬಿಲ ನಿವಾಸಿ ರೇವಣ್ಣ ಅವರ ಗ್ಯಾಸ್ ಸಂಪರ್ಕ ಹೊಂದಿದ ರಿಕ್ಷಾದಲ್ಲಿ ಗ್ಯಾಸ್ ಖಾಲಿಯಾಗಿದೆ ಎಂಬ ಕಾರಣಕ್ಕಾಗಿ ಪೆಟ್ರೋಲ್ ತುಂಬಿಸಲು ಹೋಗುತ್ತಿದ್ದ ವೇಳೆ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಗ್ಯಾಸ್ ಸೋರಿಕೆಯ ರೀತಿಯಲ್ಲಿ ವಾಸನೆ ಬರುತ್ತಿದೆ ಎಂದು ಚಾಲಕ ರೇವಣ್ಣ ಅವರು ರಿಕ್ಷಾವನ್ನು ನಿಲ್ಲಿಸುತ್ತಿದ್ದಂತೆ ಬೆಂಕಿ ಹತ್ತಿಕೊಂಡಿದ್ದು, ಅದೃಷ್ಟವಶಾತ್ ರಿಕ್ಷಾದಲ್ಲಿ ಪ್ರಯಾಣಿಕರು ಯಾರು ಇಲ್ಲದ ಕಾರಣದಿಂದ ಯಾವುದೇ ಅಪಾಯ ಸಂಭವಿಸಿಲ್ಲ.

ಚಾಲಕ ರೇವಣ್ಣ ಅವರು ಅಪಾಯವನ್ನರಿತು ಕೂಡಲೇ ರಿಕ್ಷಾದಿಂದ ಕೆಳಗೆ ಇಳಿದಿದ್ದಾರೆ. ನೋಡನೋಡುತ್ತಿದ್ದಂತೆಯೇ ಕ್ಷಣಾರ್ಧದಲ್ಲಿ ರಿಕ್ಷಾ ಸಂಪೂರ್ಣ ಬೆಂಕಿಗಾಹುತಿಯಾಗಿದೆ.
