ದ್ವಿತೀಯ ಪಿಯುಸಿ ಫಲಿತಾಂಶ: ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಆಳ್ವಾಸ್ ಕಾಲೇಜಿನ ದಿಶಾ; 600ಕ್ಕೆ 600 ಅಂಕ ಗಳಿಸಿ ದಾಖಲೆ!

ಮೂಡುಬಿದಿರೆ: ರಾಜ್ಯಾದ್ಯಂತ ಕುತೂಹಲ ಮೂಡಿಸಿದ್ದ 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಮೂಡುಬಿದಿರೆಯ ಆಳ್ವಾಸ್ ಪಿಯು ಕಾಲೇಜು ರಾಜ್ಯಮಟ್ಟದಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿದೆ. ವಾಣಿಜ್ಯ ವಿಭಾಗದಲ್ಲಿ ಕಾಲೇಜಿನ ವಿದ್ಯಾರ್ಥಿನಿ ದಿಶಾ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ನೂರಕ್ಕೆ ನೂರು ಅಂಕ: ಅಪ್ರತಿಮ ಸಾಧನೆ
ಮೂಡುಬಿದಿರೆ ಮೂಲದವರೇ ಆಗಿರುವ ದಿಶಾ ಅವರು ವಾಣಿಜ್ಯ ವಿಭಾಗದ ಆರೂ ವಿಷಯಗಳಲ್ಲಿ 600ಕ್ಕೆ 600 (ಶೇ. 100) ಅಂಕಗಳನ್ನು ಪಡೆಯುವ ಮೂಲಕ ಅಪ್ರತಿಮ ಸಾಧನೆ ಮಾಡಿದ್ದಾರೆ. ಯಾವುದೇ ವಿಷಯದಲ್ಲಿ ಒಂದು ಅಂಕವೂ ಕಡಿಮೆ ಆಗದಂತೆ ಪೂರ್ಣ ಅಂಕ ಗಳಿಸಿರುವುದು ಇಡೀ ರಾಜ್ಯದ ಗಮನ ಸೆಳೆದಿದೆ. ಇವರ ಈ ಶೈಕ್ಷಣಿಕ ಕೀರ್ತಿಯು ಜಿಲ್ಲೆಯ ಹಿರಿಮೆಯನ್ನು ಹೆಚ್ಚಿಸಿದೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

ಆಳ್ವಾಸ್ ಕ್ಯಾಂಪಸ್‌ನಲ್ಲಿ ಸಂಭ್ರಮದ ಅಲೆ
ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಹಬ್ಬದ ವಾತಾವರಣ ಮನೆಮಾಡಿದೆ. ವಿದ್ಯಾರ್ಥಿನಿಯ ಸಾಧನೆಯನ್ನು ಕಂಡು ಹರ್ಷ ವ್ಯಕ್ತಪಡಿಸಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವ ಅವರು, ದಿಶಾ ಅವರಿಗೆ ಅಭಿನಂದನೆ ಸಲ್ಲಿಸಿದರು. “ವಿದ್ಯಾರ್ಥಿಗಳ ಶ್ರಮ ಮತ್ತು ಶಿಕ್ಷಕರ ಮಾರ್ಗದರ್ಶನದಿಂದ ಈ ಸಾಧನೆ ಸಾಧ್ಯವಾಗಿದೆ” ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಫಲಿತಾಂಶ ವೀಕ್ಷಣೆ ಮತ್ತು ಡಿಜಿಟಲ್ ಸೌಲಭ್ಯ
ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಅಧಿಕೃತ ಜಾಲತಾಣ  ಅಥವಾ KarnatakaOne ಮೊಬೈಲ್ ಆಪ್ ಮೂಲಕ ವೀಕ್ಷಿಸಬಹುದಾಗಿದೆ. ಮಂಡಳಿಯು ಈಗಾಗಲೇ ವಿದ್ಯಾರ್ಥಿಗಳ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಮೂಲಕ ಫಲಿತಾಂಶವನ್ನು ಕಳುಹಿಸಿದೆ. ಅಂಕಪಟ್ಟಿಯನ್ನು ಡಿಜಿಲಾಕರ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಲು ಸೌಲಭ್ಯ ಕಲ್ಪಿಸಲಾಗಿದ್ದು, ಅದರ ಪ್ರಕ್ರಿಯೆಯನ್ನು ತಿಳಿದುಕೊಳ್ಳಲು ಇಲಾಖೆಯ ವೀಡಿಯೋ ಲಿಂಕ್ ಸಹ ಲಭ್ಯವಿದೆ.

ಅಮ್ಮ ಇಲ್ಲದೆಯೇ ಬರೆದಿದ್ದರು 3 ಪರೀಕ್ಷೆ!
ಈ ಬಾರಿಯ ಪಿಯುಸಿ ಪರೀಕ್ಷೆಗಳು ನಡೆಯುತ್ತಿದ್ದ ಸಂದರ್ಭದಲ್ಲೇ ದಿಶಾ ಅವರ ಜೀವನದಲ್ಲಿ ದೊಡ್ಡ ದುರಂತ ಸಂಭವಿಸಿತ್ತು. ಮೂರು ಪರೀಕ್ಷೆಗಳು ಮುಗಿದ ಬೆನ್ನಲ್ಲೇ ಅವರ ತಾಯಿ ಅನಾರೋಗ್ಯದಿಂದ ನಿಧನರಾಗಿದ್ದರು. ಅಮ್ಮನ ಸಾವಿನಿಂದ ದಿಶಾ ತೀವ್ರ ಆಘಾತಕ್ಕೊಳಗಾಗಿದ್ದರು. ಮನೆಯಲ್ಲಿ ಸೂತಕದ ಛಾಯೆ, ಮನಸ್ಸಿನಲ್ಲಿ ಅಮ್ಮನನ್ನು ಕಳೆದುಕೊಂಡ ಅತೀವ ನೋವು. ಇಂತಹ ಸ್ಥಿತಿಯಲ್ಲಿ ಯಾವುದೇ ವಿದ್ಯಾರ್ಥಿ ಧೃತಿಗೆಡುವುದು ಸಹಜ. ಆದರೆ, ದಿಶಾ ತನ್ನ ಅಮ್ಮನ ಕನಸನ್ನು ನನಸು ಮಾಡಲು ನಿರ್ಧರಿಸಿದರು. ತಾಯಿ ನಿಧನರಾದ ದುಃಖದ ನಡುವೆಯೇ ದಿಶಾ ಧೈರ್ಯ ತಂದುಕೊಂಡು ಉಳಿದ ಮೂರು ಪರೀಕ್ಷೆಗಳಿಗೆ ಹಾಜರಾಗಿದ್ದರು. ಕಣ್ಣೀರು ಸುರಿಸುತ್ತಲೇ ಪರೀಕ್ಷೆ ಬರೆದಿದ್ದ ಅವರು, ಇಂದು ಫಲಿತಾಂಶ ಬಂದಾಗ ರಾಜ್ಯಕ್ಕೇ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

error: Content is protected !!