ಮಂಗಳೂರು: ಗುರುಪುರ ಫಲ್ಗುಣಿ ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರೆನ್ನಲಾದ ಕಜೆ ಪಡ್ಡಾಯಿಬೆಟ್ಟು ನಿವಾಸಿ ಕೌಶಿಕ್ ಬೆಲ್ಚಡ (30) ಅವರ ಮೃತದೇಹ ಗುರುವಾರ ಮಧ್ಯಾಹ್ನ ಪತ್ತೆಯಾಗಿದೆ.

ಬುಧವಾರ ಸಂಜೆ ಸುಮಾರು 6:30ರ ವೇಳೆಗೆ ಕೌಶಿಕ್ ಅವರು ತನ್ನ ಸ್ಕೂಟರ್ನಲ್ಲಿ ಗುರುಪುರ ಸೇತುವೆಯತ್ತ ಬಂದಿದ್ದರು. ಸೇತುವೆಯ ಮೇಲೆ ಸ್ಕೂಟರ್ ನಿಲ್ಲಿಸಿ, ನದಿಗೆ ಹಾರಿದ್ದರು ಎನ್ನಲಾಗಿದೆ. ಘಟನೆಯ ಸುದ್ದಿ ತಿಳಿದ ತಕ್ಷಣ ಸ್ಥಳೀಯರು ಮತ್ತು ಪೊಲೀಸರು ಆಗಮಿಸಿದ್ದರಾದರೂ, ಕತ್ತಲೆಯ ಕಾರಣದಿಂದ ಬುಧವಾರ ರಾತ್ರಿ ಕಾರ್ಯಾಚರಣೆ ನಡೆಸಲು ಅಗ್ನಿಶಾಮಕ ದಳಕ್ಕೆ ಸಾಧ್ಯವಾಗಿರಲಿಲ್ಲ.
ಗುರುವಾರ ಮುಂಜಾನೆಯಿಂದಲೇ ಮಂಗಳೂರು ಅಗ್ನಿಶಾಮಕ ದಳದ ಸಿಬ್ಬಂದಿ ನದಿಯಲ್ಲಿ ತೀವ್ರ ಶೋಧ ಆರಂಭಿಸಿದ್ದರು. ಕಾರ್ಯಾಚರಣೆಗೆ ಹೆಚ್ಚಿನ ಬಲ ನೀಡಲು ಪಾಣೆಮಂಗಳೂರಿನ ಖ್ಯಾತ ಮುಳುಗು ತಜ್ಞರನ್ನು ಕರೆಯಿಸಲಾಗಿತ್ತು. ನದಿಯ ಸೆಳೆತ ಮತ್ತು ಆಳದ ನಡುವೆಯೂ ಕಾರ್ಯಾಚರಣೆ ನಡೆಸಿದ ತಂಡವು, ಸೇತುವೆಯ ಕಂಬಗಳ ಬಳಿ ಕೌಶಿಕ್ ಅವರ ಮೃತದೇಹವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಜ್ಪೆ ಪೊಲೀಸರು, ಸೇತುವೆಯ ಮೇಲಿದ್ದ ಸ್ಕೂಟರ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬುದು ಇನ್ನು ತಿಳಿದುಬಂದಿಲ್ಲ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.