
ಕೊಲ್ಕತ್ತಾ: ಬಂಗಾಳಿ ಧಾರಾವಾಹಿಯ ‘ಭೋಲ್ ಬಾಬಾ ಪಾರ್ ಕರೇಗಾ’ ಎಂಬ ಧಾರಾವಾಹಿಯ ಶೂಟಿಂಗ್ ಗಾಗಿ ತೆರಳಿದ್ದ ಖ್ಯಾತ ಬಂಗಾಳಿ ನಟ ರಾಹುಲ್ ಅರುಣೋದಯ ಬ್ಯಾನರ್ಜಿ(43) ಅವರು ಭಾನುವಾರ ಒಡಿಶಾ-ಪಶ್ಚಿಮ ಬಂಗಾಳ ಗಡಿಯ ದಿಘಾ ಸಮೀಪದ ತಲ್ಸರಿ ಎಂಬಲ್ಲಿ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ.

ಭಾನುವಾರ ಬೆಳಿಗ್ಗೆ ಶೂಟಿಂಗ್ ನಡೆದಿತ್ತು, ಮಧ್ಯಾಹ್ನ ಬಳಿಕ ಚಿತ್ರೀಕರಣ ತಂಡ ಪ್ಯಾಕಪ್ ಮಾಡಿದ ಬಳಿಕ ಈ ದುರಂತ ಸಂಭವಿಸಿದೆ. ಶೂಟಿಂಗ್ ಮುಗಿದ ಬಳಿಕ ಆಳ ಸಮುದ್ರ ನೀರಿಗೆ ಬ್ಯಾನರ್ಜಿ ಏಕಾಂಗಿಯಾಗಿ ಇಳಿದಿದ್ದುರು ಎನ್ನಲಾಗಿದೆ.

ಅವರು ನಾಪತ್ತೆಯಾದ ತಕ್ಷಣವೇ ನಿರ್ಮಾಣ ಘಟಕದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ತಂತ್ರಜ್ಞರು ಮತ್ತು ನಿರ್ಮಾಣ ತಂಡದ ಸಿಬ್ಬಂದಿ ಅವರನ್ನು ನೀರಿನಿಂದ ಮೇಲಕೆತ್ತುವಲ್ಲಿ ಯಶಸ್ವಿಯಾದರು. ನೀರಿನಲ್ಲಿ ಮುಳುಗಿ ಸಾವು ಸಂಭವಿಸಿದೆ ಎಂದು ಆರಂಭಿಕ ವರದಿಗಳು ಹೇಳಿವೆ.

ತಕ್ಷಣವೇ ದಿಘಾ ಉಪವಿಭಾಗೀಯ ಆಸ್ಪತ್ರೆಗೆ ಅವರನ್ನು ಸಾಗಿಸಲಾಯಿತು. ಸಂಜೆ ಅವರು ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ.