ಮೂಡುಬಿದಿರೆ: ಮೂಡುಬಿದಿರೆ ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ ವಿರುದ್ಧ ಸಾಮಾಜಿಕ ಜಾಲತಾಣ ಹಾಗೂ ಕೆಲವು ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಆರೋಪಗಳ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ಇನ್ಸ್ಪೆಕ್ಟರ್ ವಿರುದ್ಧ ನೀಡಲಾಗಿದೆ ಎಂದು ಹೇಳಲಾಗಿರುವ ದೂರಿನ ಕುರಿತು ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಎಸಿಪಿ ಉತ್ತರ ವಲಯಕ್ಕೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಈವರೆಗೆ ಯಾವುದೇ ಮಹಿಳೆಯು ಇನ್ಸ್ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳದ ಕುರಿತು ಲಿಖಿತ ದೂರು ನೀಡಿಲ್ಲ ಎಂದು ಕಮಿಷನರ್ ಸ್ಪಷ್ಟಪಡಿಸಿದ್ದಾರೆ.

ಸುಮತಿ ನಾಯಕ್ ಮತ್ತು ಅವರ ಸಹೋದರಿಯ ನಡುವೆ ನಡೆಯುತ್ತಿರುವ ಕುಟುಂಬ ವಿವಾದದ ಪ್ರಕರಣದಲ್ಲಿ, ಇನ್ಸ್ಪೆಕ್ಟರ್ ಅವರು ಎದುರುಪಕ್ಷಕ್ಕೆ ಅನುಕೂಲ ಮಾಡಿದ್ದಾರೆ ಎಂಬ ಆರೋಪ ಮಾತ್ರ ಕೇಳಿಬಂದಿದ್ದು, ಈ ಪ್ರಕರಣ ಈಗಾಗಲೇ ನ್ಯಾಯಾಲಯದಲ್ಲಿದೆ. ಈ ಪ್ರಕರಣದ ಸಂಬಂಧ ಅಪ್ರಾಪ್ತ ಮಗುವನ್ನು ತಾಯಿಯ ವಶಕ್ಕೆ ಒಪ್ಪಿಸುವ ಕ್ರಮವನ್ನು ಇನ್ಸ್ಪೆಕ್ಟರ್ ಕೈಗೊಂಡಿದ್ದು, ಅದು ಕಾನೂನುಬದ್ಧ ಕ್ರಮವಾಗಿರುವುದರಿಂದ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ತಕ್ಷಣದ ಆಧಾರಗಳಿಲ್ಲ ಎಂದು ತಿಳಿಸಿದ್ದಾರೆ.

ಯಾವುದೇ ಸಂತ್ರಸ್ತರು ದೂರು ನೀಡಲು ಇಚ್ಛಿಸಿದರೆ ಅವರು ನೇರವಾಗಿ ಪೊಲೀಸ್ ಇಲಾಖೆಗೆ ದೂರು ನೀಡಬಹುದು. ಆಧಾರದ ಮೇಲೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಮಿಷನರ್ ಹೇಳಿದ್ದಾರೆ. ಸಂಬಂಧವಿಲ್ಲದ ವ್ಯಕ್ತಿಯೊಬ್ಬರು ನೀಡುವ ದೂರಿನ ಆಧಾರದ ಮೇಲೆ ಮಹಿಳೆಯ ವೈಯಕ್ತಿಕ ಸಂಬಂಧಗಳ ಬಗ್ಗೆ ವಿಚಾರಣೆ ನಡೆಸುವುದು ಕಾನೂನಾತ್ಮಕ ಹಾಗೂ ನೈತಿಕವಾಗಿ ಕಷ್ಟಕರವಾಗಿದೆ. ಪ್ರಸ್ತುತ ಎಸಿಪಿ ಮಟ್ಟದಲ್ಲಿ ತನಿಖೆ ನಡೆಯುತ್ತಿದ್ದು, ತನಿಖೆಯಲ್ಲಿ ಸತ್ಯಾಸತ್ಯತೆಗಳು ಹೊರಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಮಿಷನರ್ ತಿಳಿಸಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಇನ್ಸ್ಪೆಕ್ಟರ್ ವಿರುದ್ಧ ಯಾವುದೇ ಶಿಸ್ತು ಕ್ರಮಕ್ಕೆ ಅಗತ್ಯವಾದ ಸ್ಪಷ್ಟ ಆಧಾರಗಳು ಇಲ್ಲವೆಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.
