ಬಂಟ್ವಾಳ: ಚಲಿಸುವ ಬಸ್ನಲ್ಲಿ ಬ್ಯಾಗ್ ಒಳಗಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಅಂತಾರಾಜ್ಯ ಕಳ್ಳನನ್ನು ಬಂಟ್ವಾಳ ನಗರ ಪೊಲೀಸರು ಬಂಧಿಸಿದ್ದಾರೆ.

ಮಧ್ಯಪ್ರದೇಶ ರಾಜ್ಯದ ಧಾರಾ ಜಿಲ್ಲೆಯ ನಿವಾಸಿ ಸಮದ್ ಖಾನ್ (37) ಬಂಧಿತ ಆರೋಪಿ. ಈತನಿಂದ ಸುಮಾರು 20 ಲಕ್ಷ ರೂಪಾಯಿ ಮೌಲ್ಯದ 174 ಗ್ರಾಂ ತೂಕದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಳೆದ ನವೆಂಬರ್ 19, 2025 ರಂದು ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕಳವು ನಡೆದಿತ್ತು. ಪ್ರಯಾಣಿಕರೊಬ್ಬರು ಬಸ್ನಲ್ಲಿ ಬ್ಯಾಗ್ ಒಳಗೆ ಇರಿಸಿದ್ದ ಅಂದಾಜು 170 ರಿಂದ 180 ಗ್ರಾಂ ಚಿನ್ನಾಭರಣಗಳನ್ನು ಆರೋಪಿಯು ಚಾಣಾಕ್ಷತನದಿಂದ ಕಳವು ಮಾಡಿದ್ದನು. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ಗಂಭೀರತೆ ಅರಿತ ಪೊಲೀಸರು ತನಿಖೆ ಚುರುಕುಗೊಳಿಸಿ, ತಾಂತ್ರಿಕ ಮಾಹಿತಿ ಹಾಗೂ ಖಚಿತ ಮೇರೆಗೆ ಆರೋಪಿಯನ್ನು ದಸ್ತಗಿರಿ ಮಾಡಿದ್ದಾರೆ. ಬಂಧಿತನಿಂದ ಕಳವು ಮಾಡಲಾಗಿದ್ದ ಪೂರ್ತಿ ಚಿನ್ನಾಭರಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಂತಾರಾಜ್ಯ ಕಳ್ಳನ ಪತ್ತೆಯಾದ ಬೆನ್ನಲ್ಲೇ ಈತ ಇನ್ನುಳಿದ ಕಡೆಗಳಲ್ಲಿ ನಡೆಸಿರುವ ಕೃತ್ಯಗಳ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.