ಆಟೊಗೆ ಕಾರು ಡಿಕ್ಕಿ; ನಾಲ್ಕು ಮಂದಿಗೆ ಗಾಯ

ಚಿಂತಾಮಣಿ: ಆಟೊಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಆಟೊ ಪಲ್ಟಿಯಾಗಿ ನಾಲ್ಕು ಜನ ಗಾಯಗೊಂಡಿರುವ ಘಟನೆ ನಗರದ ಹೊರವಲಯದ ಗೋಪಸಂದ್ರದ ಬಳಿ ನಡೆದಿದೆ.

ಮಮತಾ, ಸರೋಜಾ, ಶಬನಾ ಹಾಗೂ ಆಟೊ ಚಾಲಕ ನವಾಜ್‌ ಗಾಯಾಳುಗಳು.

ಅವರು ಅಟೊದಲ್ಲಿ ನಗರದಿಂದ ಮಾಡಿಕೆರೆ ಕ್ರಾಸ್‌ಗೆ ಹೋಗುತ್ತಿದ್ದರು. ಎದುರುಗಡೆಯಿಂದ ವೇಗವಾಗಿ ಬಂದ ಕಾರು ಚಾಲಕನ ಅಜಾಗರೂಕತೆಯಿಂದ ಡಿಕ್ಕಿ ಹೊಡೆದಿದೆ. ಸಾರ್ವಜನಿಕರು ಗಾಯಾಳುಗಳನ್ನು ಅಂಬುಲೆನ್ಸ್‌ ಮೂಲಕ ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರು ಗಾಯಾಳುಗಳಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡದೆ ವಿಳಂಬ ಮಾಡಿದರು. ಆಸ್ಪತ್ರೆಗೆ ಬಂದ ಗಾಯಾಳುಗಳಿಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ನೀಡಿದೆ ವಿಳಂಬ ಮಾಡುತ್ತಿರುವುದನ್ನು ಪ್ರಶ್ನೆ ಮಾಡಿದ್ದಕ್ಕೆ ಗಾಯಾಳುಗಳನ್ನು ಚಿಕ್ಕಬಳ್ಳಾಪುರ ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದರು. ಆಸ್ಪತ್ರೆಯಲ್ಲಿ ರಾತ್ರಿ ವೇಳೆ ಎಕ್ಸ್ ರೇ ಮಾಡುವವರು ಇಲ್ಲ ಎಂದು ವೈದ್ಯರು ಉತ್ತರ ನೀಡಿದರು ಎಂದು ಗಾಯಾಳುಗಳು ಆಕ್ರೋಶ ವ್ಯಕ್ತಪಡಿಸಿದರು.

ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗಿದೆ. ಆಸ್ಪತ್ರೆಯಲ್ಲಿ ರಾತ್ರಿ ವೇಳೆ ಎಕ್ಸ್ ರೇ ಸಿಬ್ಬಂದಿ ಲಭ್ಯವಿಲ್ಲದ ಕಾರಣಕ್ಕೆ ಚಿಕ್ಕಬಳ್ಳಾಪುರಕ್ಕೆ ಹೋಗಿ ಎಂದು ಹೇಳಿದ್ದೇವೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ಗ್ರಾಮಾಂತರ ಠಾಣೆ ಪೊಲೀಸರು ಆಸ್ಪತ್ರೆ ಹಾಗೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

error: Content is protected !!