ಬೆಂಗಳೂರು: ಅದೊಂದು ಗ್ಲಾಮರ್ ಪ್ರಪಂಚ. ಅಲ್ಲಿ ಬಣ್ಣದ ಲೇಪನವಿದೆ, ಸೆಲೆಬ್ರಿಟಿಗಳ ಲೈಟ್ಸ್ ಇದೆ, ಸಾವಿರಾರು ಅಭಿಮಾನಿಗಳ ಶಿಳ್ಳೆ-ಚಪ್ಪಾಳೆಗಳಿವೆ. ಆದರೆ ಈ ಬೆಳ್ಳಿತೆರೆಯ ಹೊಳಪಿನ ಹಿಂದೆ ಎಷ್ಟು ಕತ್ತಲೆ ಅಡಗಿದೆ ಅನ್ನೋದಕ್ಕೆ ಈಗ ಚೆನ್ನೈನಲ್ಲಿ ನಡೆದ ಆ ʻಹೈ-ಪ್ರೊಫೈಲ್’ ಡ್ರಗ್ಸ್ ದಾಳಿಯೇ ಸಾಕ್ಷಿ. ಮಲಯಾಳಂ ಮತ್ತು ತಮಿಳು ಚಿತ್ರರಂಗದಲ್ಲಿ ಉದಯೋನ್ಮುಖ ನಟಿಯಾಗಿ ಮಿಂಚುತ್ತಿದ್ದ ಅಂಜು ಕೃಷ್ಣ, ಈಗ ಪೊಲೀಸರ ಲಾಕಪ್ನಲ್ಲಿ ಕಂಬಿ ಎಣಿಸುತ್ತಿದ್ದಾಳೆ!

ಈ ಚೆನ್ನೈ ಪೊಲೀಸರು ಹಾಕಿದ ಸ್ಕೆಚ್ ಇದೆಯಲ್ಲ, ಅದು ಯಾವುದೋ ತೆಲುಗು ಮಸಾಲಾ ಸಿನಿಮಾಕ್ಕಿಂತಲೂ ರೋಚಕವಾಗಿತ್ತು. ಮೊದಲು ವಿಘ್ನೇಶ್ವರನ್ ಅನ್ನೋ ಅಸಾಮಿಯನ್ನ ಹಿಡಿದ ಪೊಲೀಸರು, ಆತನ ಮೂಲಕ ಈ ಡ್ರಗ್ಸ್ ಮಾಫಿಯಾದ ಕಿಂಗ್ಪಿನ್ ವೆಂಕಟೇಶ್ ಕುಮಾರ್ನ ಬುಡಕ್ಕೆ ಕೈ ಹಾಕಿದರು. ಅಸಲಿ ಮಜಾ ಇರೋದೇ ಅಲ್ಲಿ. ಪೊಲೀಸರು ಗ್ರಾಹಕರ ಸೋಗಿನಲ್ಲಿ ವೆಂಕಟೇಶನಿಗೆ ಫೋನ್ ಮಾಡಿ ʻಮಾಲು’ ಬೇಕು ಅಂದಾಗ, ಆತ ತನ್ನ ಕಾರಿನಲ್ಲಿ ಗತ್ತು ತೋರಿಸುತ್ತಾ ಬಂದಿದ್ದ. ಆದರೆ ಅವನ ಜೊತೆ ಬಂದಿದ್ದ ಆ ನಟಿ ಅಂಜು ಕೃಷ್ಣ ಮತ್ತು ಅಸಿಸ್ಟೆಂಟ್ ಡೈರೆಕ್ಟರ್ ವಿನ್ಸಿ ನಿವೇತಾಗೆ ಗೊತ್ತಿರಲಿಲ್ಲ, ತಾವು ಹೋಗುತ್ತಿರೋದು ಶೂಟಿಂಗ್ಗಲ್ಲ ಬದಲಾಗಿ ಸ್ಟೇಷನ್ಗೆ ಅಂತ…!

ವಲಸರವಕ್ಕಂನಲ್ಲಿ ಪೊಲೀಸರು ಈ ಗ್ಯಾಂಗ್ ಅನ್ನು ಸುತ್ತುವರಿದಾಗ ಇವರ ಬಳಿ ಇದ್ದಿದ್ದು ಕೇವಲ ಗಾಂಜಾ ಮಾತ್ರವಲ್ಲ , ಅಲ್ಲಿ ಮೆಟಾಂಫೆಟಮೈನ್ ಇತ್ತು, ಎಲ್ಎಸ್ಡಿ ಸ್ಟ್ಯಾಂಪ್ಗಳಿದ್ದವು. ಇವರೆಲ್ಲರೂ ಸೇರಿ ಸಿನಿಮಾ ರಂಗದ ಗಣ್ಯರನ್ನು ಮತ್ತು ಕೈತುಂಬಾ ಹಣ ಇರೋ ಯುವಕರನ್ನು ಗುರಿಯಾಗಿಸಿಕೊಂಡು ಈ ವಿಷದ ದಂಧೆ ನಡೆಸುತ್ತಿದ್ದರು. ಅಂಜು ಕೃಷ್ಣ ಅನ್ನೋ ಈ ನಟಿ, ʻಳ್ಳಿಮಲೈ’ ಮತ್ತು ʻಆರೋ’ ಸಿನಿಮಾಗಳಲ್ಲಿ ನಟಿಸಿ ಭರವಸೆಯ ನಟಿ ಅನ್ನಿಸಿಕೊಂಡಿದ್ದವಳು. ಆದರೆ ಈಗ ಡ್ರಗ್ಸ್ ನಶೆಯಲ್ಲಿ ತನ್ನ ಕೆರಿಯರ್ ಅನ್ನೇ ಸುಟ್ಟುಕೊಂಡಿದ್ದಾಳೆ.

ಹಗಲಿನಲ್ಲಿ ಕ್ಯಾಮರಾ ಮುಂದೆ ಪೋಸ್ ಕೊಡುವ ಈ ಸುಂದರಿಯರು, ರಾತ್ರಿಯಾಗುತ್ತಿದ್ದಂತೆ ಇಂತಹ ಕರಾಳ ದಂಧೆಗಿಳಿಯುತ್ತಾರೆ ಅಂದರೆ ಈ ಸಿನಿಮಾ ರಂಗದ ನೈತಿಕತೆ ಎಲ್ಲಿಗೆ ಬಂದು ನಿಂತಿದೆ? ಪೊಲೀಸರು ಈಗ ಒಂಬತ್ತು ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ. ಆ ಫೋನ್ಗಳಲ್ಲಿರೋ ಕಾಂಟ್ಯಾಕ್ಟ್ ಲಿಸ್ಟ್ ಇಡೀ ಸೌತ್ ಇಂಡಸ್ಟ್ರಿಯ ದೊಡ್ಡ ದೊಡ್ಡ ತಲೆಗಳ ನಿದ್ದೆ ಗೆಡಿಸಿರೋದಂತೂ ಸತ್ಯ. ಆ ಕಾಂಟ್ಯಾಕ್ಟ್ಗಳ ಲಿಸ್ಟ್ ಓಪನ್ ಆದ್ರೆ ಇನ್ಯಾವ ಸ್ಟಾರ್ ನಟ-ನಟಿಯರ ಮುಖವಾಡ ಕಳಚುತ್ತೋ ಕಾದು ನೋಡಬೇಕು.
ಹತ್ತು ಸಾವಿರ ಜನರ ಮುಂದೆ ಕೈ ಮುಗಿದು ನಿಲ್ಲುವ ಈ ನಟಿಯರು, ಕತ್ತಲೆಯಲ್ಲಿ ವಿಷದ ವ್ಯಾಪಾರ ಮಾಡೋಕೆ ಹೋಗಿ ಇಂದು ನಡುಬೀದಿಯಲ್ಲಿ ನಿಂತಿದ್ದಾರೆ.
