ಎನ್‌ಎಂಪಿಎಯಲ್ಲಿ ಗಣರಾಜ್ಯೋತ್ಸವದ ಸಂಭ್ರಮ: 40 ಮಿಲಿಯನ್‌ ಮಿಟ್ರಿಕ್‌ ಟನ್‌ ಸರಕು ಸಾಗಣೆ ಸಾಧನೆಗೆ ಅಭಿನಂದನೆ

ಮಂಗಳೂರು: ಭಾರತದ 77ನೇ ಗಣರಾಜ್ಯೋತ್ಸವವನ್ನು ಇಂದು ಪಣಂಬೂರುದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ, ನವ ಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ) ವತಿಯಿಂದ ಅತ್ಯಂತ ಹೆಮ್ಮೆಯೊಂದಿಗೆ ಹಾಗೂ ದೇಶಭಕ್ತಿಯ ಉತ್ಸಾಹದಲ್ಲಿ ಆಚರಿಸಲಾಯಿತು. ಅಲ್ಲದೆ ಬಂದರಿನಲ್ಲಿ 40 ಮಿಲಿಯನ್ ಮೆಟ್ರಿಕ್ ಟನ್ ಸರಕು ಸಂಚಾರ ಗುರಿ ತಲುಪಿರುವ ಸಾಧನೆಯ ಹಿಂದಿರುವ ನೌಕರರನ್ನು ಅಭಿನಂದಿಸಲಾಯಿತು.

ಸಮಾರಂಭದ ಮುಖ್ಯ ಅತಿಥಿಯಾಗಿ ಕ್ಯಾಪ್ಟನ್ ಮನೋಜ್ ಜೋಶಿ, ಉಪ ಸಂರಕ್ಷಣಾಧಿಕಾರಿ ಹಾಗೂ ಉಪಾಧ್ಯಕ್ಷರು (ಪ್ರಭಾರ), ಎನ್‌ಎಂಪಿಎ ಅವರು ಭಾಗವಹಿಸಿ ಕಾರ್ಯಕ್ರಮವನ್ನು ಮುನ್ನಡೆಸಿದರು. ಈ ಸಂದರ್ಭದಲ್ಲಿ ಹಿರಿಯ ಅಧಿಕಾರಿಗಳು, ವಿಭಾಗಾಧ್ಯಕ್ಷರು, ನೌಕರರು, ಮಂಡಳಿ ಸದಸ್ಯರು, ಸಿಐಎಸ್‌ಎಫ್ ಸಿಬ್ಬಂದಿ, ಭದ್ರತಾ ಸಿಬ್ಬಂದಿ ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಏಕತೆ ಮತ್ತು ರಾಷ್ಟ್ರಭಕ್ತಿಯ ಸಾಮೂಹಿಕ ಭಾವವನ್ನು ಪ್ರತಿಬಿಂಬಿಸಿದರು.

ಕಾರ್ಯಕ್ರಮವು ಮಹಾತ್ಮ ಗಾಂಧೀಜಿ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಯು.ಎಸ್. ಮಲ್ಯಾ ಅವರ ಪ್ರತಿಮೆಗಳ ಪುಷ್ಪಾರ್ಚನೆಯೊಂದಿಗೆ ಆರಂಭಗೊಂಡು, ರಾಷ್ಟ್ರದ ಮಹಾನ್ ನಾಯಕರ ಆದರ್ಶಗಳಿಗೆ ಗೌರವ ಸಲ್ಲಿಸಲಾಯಿತು. ನಂತರ ಕ್ಯಾಪ್ಟನ್ ಮನೋಜ್ ಜೋಶಿ ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಪಣಂಬೂರು ಕೆಂದ್ರಿಯ ವಿದ್ಯಾಲಯ ನಂ.1ರ ವಿದ್ಯಾರ್ಥಿಗಳು ರಾಷ್ಟ್ರಗೀತೆ ಗಾಯನ ಮಾಡಿದರು.

ಸಿಐಎಸ್‌ಎಫ್ ಸಿಬ್ಬಂದಿ, ಎನ್‌ಎಂಪಿಎ ಅಗ್ನಿಶಾಮಕ ದಳ, ಖಾಸಗಿ ಭದ್ರತಾ ಸಿಬ್ಬಂದಿ ಹಾಗೂ ಕೆಂದ್ರಿಯ ವಿದ್ಯಾಲಯ ಮತ್ತು ಎನ್‌ಎಂಪಿಎ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳನ್ನು ಒಳಗೊಂಡ ಪರೇಡ್ ಪಡೆ ಸಂಪ್ರದಾಯಬದ್ಧ ಮಾರ್ಚ್ ಪಾಸ್ಟ್ ನಡೆಸಿತು. ಗಣರಾಜ್ಯೋತ್ಸವದ ಸಂಪ್ರದಾಯದಂತೆ ಮುಖ್ಯ ಅತಿಥಿಗಳು ಪರೇಡ್ ಪರಿಶೀಲನೆ ನಡೆಸಿದರು.

ಈ ಸಂದರ್ಭ ‘ವಂದೇ ಮಾತರಂ’ ಹಾಡಿನ 150ನೇ ವರ್ಷದ ಸ್ಮರಣಾರ್ಥ, ಅದರ ಐತಿಹಾಸಿಕ ಪರಂಪರೆಯನ್ನು ಗೌರವಿಸುವ ಸಲುವಾಗಿ ಬಂದರು ನೌಕರರಿಂದ ವಿಶೇಷ ಸಮೂಹ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಮುಖ್ಯ ಅತಿಥಿಗಳು, ಭಾರತದ ಸಂವಿಧಾನ ಜಾರಿಗೆ ಬಂದ ಮಹತ್ವ ಹಾಗೂ ಗಣರಾಜ್ಯೋತ್ಸವದ ನಿಜವಾದ ಅರ್ಥವನ್ನು ವಿವರಿಸಿದರು. ದೇಶದ ಅಭಿವೃದ್ಧಿಯಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಹೊಣೆಗಾರಿಕೆ ಇರುವುದನ್ನು ಅವರು ಒತ್ತಿ ಹೇಳಿದರು. ರಾಷ್ಟ್ರ ನಿರ್ಮಾಣವು ಸಮೂಹ ಪ್ರಯತ್ನದಿಂದಲೇ ಸಾಧ್ಯವೆಂದು ತಿಳಿಸಿದರು.

ಇತಿಹಾಸ ಮತ್ತು ತಂತ್ರಜ್ಞಾನ ಕ್ಷೇತ್ರಗಳಿಂದ ಉದಾಹರಣೆಗಳನ್ನು ನೀಡಿದ ಅವರು, ಸಣ್ಣ ನಿರ್ಲಕ್ಷ್ಯವೂ ದೊಡ್ಡ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಸಿದರು. ಮುಂಚಿತ ಚಿಂತನೆ, ಜವಾಬ್ದಾರಿ ಮತ್ತು ಸಮರ್ಪಣೆಯ ಅಗತ್ಯವನ್ನು ಅವರು ಪ್ರತಿಪಾದಿಸಿದರು. ಅಧಿಕಾರಿಗಳು ಹಾಗೂ ನೌಕರರು ದಿನನಿತ್ಯದ ಸಾಧನೆಗಳಲ್ಲೇ ಸೀಮಿತವಾಗದೆ, ಭವಿಷ್ಯಮುಖಿ ದೃಷ್ಟಿಕೋನದಿಂದ ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು.

ಇತ್ತೀಚೆಗೆ ಬಂದರು 40 ಮಿಲಿಯನ್ ಮೆಟ್ರಿಕ್ ಟನ್ ಸರಕು ಸಂಚಾರ ಗುರಿ ತಲುಪಿರುವ ಸಾಧನೆಯನ್ನು ಉಲ್ಲೇಖಿಸಿದ ಅವರು, ನೌಕರರನ್ನು ಅಭಿನಂದಿಸಿ, ಉತ್ತಮ ಯೋಜನೆ, ನವೀನತೆ ಮತ್ತು ಸಾಮೂಹಿಕ ಶ್ರಮದ ಮೂಲಕ ಇನ್ನೂ ಎತ್ತರದ ಗುರಿಗಳನ್ನು ಸಾಧಿಸಬೇಕೆಂದು ಪ್ರೇರೇಪಿಸಿದರು. 2047ರ ವೇಳೆಗೆ ಸಮೃದ್ಧ, ಶಕ್ತಿಶಾಲಿ ಹಾಗೂ ಅಭಿವೃದ್ಧಿಗೊಂಡ ಭಾರತ ನಿರ್ಮಾಣದ ದೃಷ್ಟಿಕೋನಕ್ಕೆ ಎಲ್ಲರೂ ತಮ್ಮ ಸಲಹೆ ಮತ್ತು ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಉತ್ಸವದ ಅಂಗವಾಗಿ, ಶೈಕ್ಷಣಿಕ ಸಾಧನೆಗಾಗಿ ಸ್ಥಳಾಂತರಿತ ಸಮುದಾಯದ ವಿದ್ಯಾರ್ಥಿಗಳಿಗೆ, ಜೊತೆಗೆ ಎನ್‌ಎಂಪಿಎ ಅಧಿಕಾರಿಗಳು, ನೌಕರರು, ಸಿಐಎಸ್‌ಎಫ್ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ ಹಾಗೂ ಹೋಮ್ ಗಾರ್ಡ್‌ಗಳ ಅತ್ಯುತ್ತಮ ಸೇವೆಯನ್ನು ಗುರುತಿಸಿ ಪ್ರಶಸ್ತಿಪತ್ರಗಳು ಹಾಗೂ ನಗದು ಬಹುಮಾನಗಳನ್ನು ಪ್ರದಾನಿಸಲಾಯಿತು.

ಡಿ.ಕೆ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ, ಎನ್‌ಎಂಪಿಎ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆ ಹಾಗೂ ಪಣಂಬೂರು ಕೆಂದ್ರಿಯ ವಿದ್ಯಾಲಯ ನಂ.1ರ ವಿದ್ಯಾರ್ಥಿಗಳ ದೇಶಭಕ್ತಿಯ ಸಾಂಸ್ಕೃತಿಕ ಕಾರ್ಯಕ್ರಮಗಳು ಸಮಾರಂಭಕ್ಕೆ ವಿಶೇಷ ಕಳೆ ನೀಡಿದವು. ಯುವ ಪ್ರತಿಭೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಬಹುಮಾನಗಳನ್ನೂ ವಿತರಿಸಲಾಯಿತು.

ಈ ವೇಳೆ ಸಿಐಎಸ್‌ಎಫ್ ಘಟಕದಿಂದ ಶಿಸ್ತು, ಸನ್ನದ್ಧತೆ ಹಾಗೂ ತುರ್ತು ಪ್ರತಿಕ್ರಿಯೆಯ ಪ್ರದರ್ಶನಗಳು ನಡೆಯಿತು. ಕಾರ್ಯಕ್ರಮವು ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯತ್ತ ಎನ್‌ಎಂಪಿಎಯ ನಿರಂತರ ಬದ್ಧತೆಯನ್ನು ಸಾರುತ್ತಾ ಸಮಾರೋಪಗೊಂಡಿತು.

error: Content is protected !!