ಮೀಡಿಯಾಕಾನ್–2026: ಜನಪ್ರಿಯತೆ, ಅಧಿಕಾರ ಮತ್ತು ಮಾಧ್ಯಮಗಳ ಕುರಿತು ಗಂಭೀರ ಚರ್ಚೆ

ಬೆಂಗಳೂರು: ಬೆಂಗಳೂರಿನ ಸೇಂಟ್ ಜೋಸೆಫ್ ವಿಶ್ವವಿದ್ಯಾಲಯದ (SJU) ಸಂವಹನ ಮತ್ತು ಮಾಧ್ಯಮ ಅಧ್ಯಯನ ಶಾಲೆ (SCMS) ಆಶ್ರಯದಲ್ಲಿ ಹತ್ತನೇ ಆವೃತ್ತಿಯ ‘ಮೀಡಿಯಾಕಾನ್–2026’ ಅಂತರಾಷ್ಟ್ರೀಯ ಸಮ್ಮೇಳನ ಹಾಗೂ ಸಂಘದ ಉತ್ಸವಗಳಿಗೆ ಜನವರಿ 23ರಂದು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಅದ್ಧೂರಿಯಾಗಿ ಚಾಲನೆ ನೀಡಲಾಯಿತು.

 ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಖ್ಯಾತ ಚಲನಚಿತ್ರ ನಿರ್ದೇಶಕ ದಿಬಾಕರ್ ಬ್ಯಾನರ್ಜಿ ಅವರು, ಅಧಿಕಾರ ಮತ್ತು ಪ್ರಬಲ ನಿರೂಪಣೆಗಳ (Dominant Narratives) ಕುರಿತಂತೆ ವಿದ್ಯಾರ್ಥಿಗಳಿಗೆ ಗಂಭೀರ ಚಿಂತನೆಗೆ ದಾರಿ ತೋರಿದರು. ಜನಪ್ರಿಯತೆ (Populism) ಮತ್ತು ಸರ್ವಾಧಿಕಾರತ್ವದಂತಹ ಶಕ್ತಿಗಳು ಇನ್ನು ಮುಂದೆ ಕೇವಲ ರಾಜಕೀಯ ಸಿದ್ಧಾಂತಗಳಲ್ಲ; ಅವು ದೈನಂದಿನ ನಿರ್ಧಾರಗಳ ಮೇಲೂ ನೇರವಾಗಿ ಪ್ರಭಾವ ಬೀರುತ್ತಿವೆ ಎಂದು ಅವರು ಹೇಳಿದರು. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಬೌದ್ಧಿಕವಾಗಿ ಸಜ್ಜಾಗಬೇಕು ಎಂದು ಕರೆ ನೀಡಿದರು. ಮುಂಬರುವ ಸಾಮಾಜಿಕ-ರಾಜಕೀಯ ಸವಾಲುಗಳನ್ನು ಎದುರಿಸಲು ಪ್ರತಿಕ್ಷಣವೂ ಕಲಿಕೆ, ಚಿಂತನೆ ಮತ್ತು ಕನಸುಗಳ ಸಾಕಾರಕ್ಕೆ ಶ್ರಮಿಸಬೇಕೆಂದು ಯುವಜನತೆಗೆ ಸಂದೇಶ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಿಶ್ವವಿದ್ಯಾಲಯದ ಕುಲಪತಿಗಳಾದ ವಂ| ಡಾ. ವಿಕ್ಟರ್ ಲೋಬೋ ಎಸ್‌ಜೆ ವಹಿಸಿದ್ದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಾಧ್ಯಮ ವೃತ್ತಿಪರರ ನೈತಿಕ ಜವಾಬ್ದಾರಿಯ ಕುರಿತು ಒತ್ತಿಹೇಳಿದ ಅವರು, “ಮಾಧ್ಯಮ ಎನ್ನುವುದು ಅಪಾರ ಶಕ್ತಿಯ ಸಾಧನ. ಅದನ್ನು ಜಾಗರೂಕತೆಯಿಂದ ಬಳಸಬೇಕು. ನೀವು ಸೃಷ್ಟಿಸುವ ವಿಷಯವು ಸಮಾಜವನ್ನು ವಿಭಜಿಸಬಹುದೂ, ಒಗ್ಗೂಡಿಸಬಹುದೂ,” ಎಂದು ಎಚ್ಚರಿಸಿದರು. ಸಿನಿಮಾ, ಜಾಹೀರಾತು ಮತ್ತು ಅನಿಮೇಷನ್‌ಗಳಂತಹ ಮಾಧ್ಯಮ ರೂಪಗಳು ಸಾರ್ವಜನಿಕ ಸಂವಾದದ ಮೇಲೆ ಬೀರುವ ಪರಿಣಾಮವನ್ನು ಉಲ್ಲೇಖಿಸಿ, ಸೃಜನಶೀಲತೆಯು ಜವಾಬ್ದಾರಿಯುತವಾಗಿರಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಕುಲಸಚಿವ ಡಾ. ವಾಜೀದ್ ಸೈಯದ್, ಎಸ್‌ಸಿಎಂಎಸ್ ಡೀನ್ ಡಾ. ಮೆಲ್ವಿನ್ ಪಿಂಟೋ, ವಿಭಾಗದ ಮುಖ್ಯಸ್ಥ ಡಾ. ಮರುದು ಪಾಂಡಿಯನ್ ಹಾಗೂ ಸಂಯೋಜಕರಾದ ಶಾಬಿನ್ ಪಿ.ಕೆ., ಡಾ. ರೂಪಾ ಪೀಟರ್, ಅಜಯ್ ಚಂದ್ರನ್, ಜೆನಿಲ್ ಜಾರ್ಜ್ ಮತ್ತು ಸುಹಾಸ್ ಶ್ರೀನಿವಾಸ್ ಉಪಸ್ಥಿತರಿದ್ದರು.

ಈ ವರ್ಷದ ಮೀಡಿಯಾಕಾನ್‌ ‘ಜನಪ್ರಿಯತೆ ಮತ್ತು ಮಾಧ್ಯಮ’ (Populism and Media) ಎಂಬ ವಿಷಯದ ಅಡಿಯಲ್ಲಿ ನಡೆಯುತ್ತಿದ್ದು, ಡಿಜಿಟಲ್ ವೇದಿಕೆಗಳು ಹಾಗೂ ಸಾಂಪ್ರದಾಯಿಕ ಮಾಧ್ಯಮಗಳು ರಾಜಕೀಯ ಸಂವಾದ ಮತ್ತು ಸಾರ್ವಜನಿಕ ಅಭಿಪ್ರಾಯವನ್ನು ಹೇಗೆ ರೂಪಿಸುತ್ತವೆ ಎಂಬುದರ ಕುರಿತು ಚರ್ಚೆ ನಡೆಯಿತು. “ನಾವು ಇಂದು ಜನಪ್ರಿಯತೆಯ ಯುಗದಲ್ಲಿ ಬದುಕುತ್ತಿದ್ದೇವೆ” ಎಂದು ಡಾ. ಮೆಲ್ವಿನ್ ಪಿಂಟೋ ಅಭಿಪ್ರಾಯಪಟ್ಟರು. ಅನೇಕ ದೇಶಗಳಲ್ಲಿ ಪ್ರಜಾಪ್ರಭುತ್ವವು ಜನಪ್ರಿಯ ನಾಯಕರ ಕೈಯಲ್ಲಿ ನಾಟಕೀಯ ರೂಪ ಪಡೆಯುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಅವರು ಹೇಳಿದರು.

ಉದ್ಘಾಟನಾ ಸಮಾರಂಭದ ನಂತರ ‘ಗೇಟ್‌ಕೀಪರ್‌ಗಳಿಂದ ಆಲ್ಗಾರಿದಮ್‌ಗಳವರೆಗೆ’ (From Gatekeepers to Algorithms) ಎಂಬ ವಿಷಯದ ಕುರಿತು ಪ್ಯಾನಲ್ ಚರ್ಚೆ ನಡೆಯಿತು. ಕ್ರೈಸ್ಟ್ (ಪರಿಗಣಿತ ವಿಶ್ವವಿದ್ಯಾಲಯ)ದ ಪ್ರೊಫೆಸರ್ ಡಾ. ನರೇಶ್ ರಾವ್ ಸಂವಾದವನ್ನು ನಡೆಸಿಕೊಟ್ಟರು. ದಿ ಹಿಂದೂ ಪತ್ರಿಕೆಯ ಡಿಜಿಟಲ್ ಎಡಿಟರ್ ಸುಭಾಷ್ ರೈ, ಪತ್ರಕರ್ತೆ ಹಾಗೂ ಲೇಖಕಿ ಅಮ್ಮು ಜೋಸೆಫ್ ಮತ್ತು ಸೆಂಟರ್ ಫಾರ್ ಇಂಟರ್ನೆಟ್ ಅಂಡ್ ಸೊಸೈಟಿ (CIS)ನ ಕಮ್ಯುನಿಕೇಷನ್ ಲೀಡ್ ಪ್ರಣವ್ ಎಂ.ಬಿ. ಅವರು ಪ್ಯಾನಲಿಸ್ಟ್‌ಗಳಾಗಿ ಭಾಗವಹಿಸಿದ್ದರು.

ಡಿಜಿಟಲ್ ವೇದಿಕೆಗಳು ಜನಪ್ರಿಯತೆಯನ್ನು ಹೇಗೆ ಉತ್ತೇಜಿಸುತ್ತವೆ ಎಂಬುದರ ಕುರಿತು ಮಾತನಾಡಿದ ಸುಭಾಷ್ ರೈ, ಸಂಪಾದಕೀಯ ವಿವೇಚನೆಯ ಬದಲಿಗೆ ಆಲ್ಗಾರಿದಮ್ ಆಧಾರಿತ ಉದ್ಯಮ ಮಾದರಿಗಳು ದ್ವೇಷ ಮತ್ತು ವಿಭಜಕ ವಿಷಯಗಳ ಪ್ರಸಾರಕ್ಕೆ ಕಾರಣವಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ಮೀಡಿಯಾಕಾನ್–2026ರ ಮೊದಲ ದಿನವು ವಿದ್ಯಾರ್ಥಿಗಳು, ಶಿಕ್ಷಣ ತಜ್ಞರು ಹಾಗೂ ಮಾಧ್ಯಮ ವೃತ್ತಿಪರರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಯಶಸ್ವಿಯಾಗಿ ಮುಕ್ತಾಯಗೊಂಡಿತು.

error: Content is protected !!