ಮಂಗಳೂರು: ಮೀನುಗಾರಿಕಾ ಬೋಟ್ಗೆ ಲಂಗರು ಹಾಕುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ನದಿಗೆ ಬಿದ್ದು ಮೀನುಗಾರನೊಬ್ಬ ಮೃತಪಟ್ಟ ಘಟನೆ ಸೋಮವಾರ ರಾತ್ರಿ ಹಳೆ ಬಂದರ್ ಪ್ರದೇಶದಲ್ಲಿ ನಡೆದಿದೆ.

ಚತ್ತೀಸ್ಗಢ ರಾಜ್ಯದ ಜಸ್ಪುರ್ ಜಿಲ್ಲೆಯ ಬರ್ಖಾಸ್ ಪಾಲಿ ಗ್ರಾಮದ ನಿವಾಸಿ ಪ್ರಹ್ಲಾದ್ ಚೌಹಾನ್ (33) ಮೃತ ಮೀನುಗಾರ. ಸುಮಾರು ಒಂದು ವರ್ಷದ ಹಿಂದೆ ಮಂಗಳೂರಿಗೆ ಆಗಮಿಸಿ ಮೀನುಗಾರಿಕಾ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದ ಎಂದು ತಿಳಿದುಬಂದಿದೆ.
ಸೋಮವಾರ ರಾತ್ರಿ ಸುಮಾರು ೧೧ ಗಂಟೆ ವೇಳೆಗೆ ಹಳೆ ಬಂದರ್ ಉಪ್ಪುಧಕ್ಕೆಯಲ್ಲಿ ಲಂಗರು ಹಾಕಲಾಗಿದ್ದ ‘ಹಸನ್ ಅಲ್ ಬಹಾರ್’ ಪರ್ಸಿನ್ ಬೋಟ್ಗೆ ಹಗ್ಗ ಕಟ್ಟುತ್ತಿದ್ದ ಸಂದರ್ಭದಲ್ಲಿ ಪ್ರಹ್ಲಾದ್ ಚೌಹಾನ್ ನಿಯಂತ್ರಣ ತಪ್ಪಿ ನದಿಗೆ ಬಿದ್ದಿದ್ದಾರೆ. ತಕ್ಷಣವೇ ಬೋಟ್ನಲ್ಲಿದ್ದ ಇತರ ಮೀನುಗಾರರು ರಕ್ಷಣಾ ಕಾರ್ಯಾಚರಣೆ ನಡೆಸಿ ಅವರನ್ನು ನೀರಿನಿಂದ ಮೇಲಕ್ಕೆ ಎತ್ತಿದರೂ, ಆಗಲೇ ಅವರು ಮೃತಪಟ್ಟಿರುವುದು ದೃಢಪಟ್ಟಿದೆ.
ಮೃತದೇಹದ ಶವಪರೀಕ್ಷೆಯನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ನಡೆಸಲಾಗಿದ್ದು, ನಂತರ ವಿಮಾನದ ಮೂಲಕ ಮೃತರ ತವರೂರಿಗೆ ಕಳುಹಿಸಿಕೊಡಲಾಗಿದೆ. ಈ ಕುರಿತು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.