ಹೈದರಾಬಾದ್: ಹೈದರಾಬಾದ್ನ ಜುಬಿಲಿ ಹಿಲ್ಸ್ನಲ್ಲಿ ನಡೆದದ್ದು ಒಂದು ಘಟನೆ ಅಲ್ಲ; ಅದು ನಮ್ಮ ಸಮಾಜದ ಮನಸ್ಥಿತಿಗೆ ಹಿಡಿದ ಕನ್ನಡಿಯಂತೆ. ನಟಿ ಸಮಂತಾ ರುತ್ ಪ್ರಭು ಸಾರ್ವಜನಿಕ ಕಾರ್ಯಕ್ರಮವೊಂದಕ್ಕೆ ಬಂದಿದ್ದಷ್ಟೇ ಅಪರಾಧವೇ? ಅವರ ಒಂದು ಹೆಜ್ಜೆ ಮುಂದೆ ಸಾಗಿದರೆ ಸಾಕು, ನೂರಾರು ಜನರ ಗುಂಪು ಆಕೆಯ ಮೇಲೆ ಮುಗಿಬಿದ್ದಂತೆ ವರ್ತಿಸುವುದು ಯಾವ ಸಂಸ್ಕೃತಿ? ಇದಕ್ಕೆ ‘ಅಭಿಮಾನ’ ಎಂಬ ಶಬ್ದ ಬಳಸದಿರಿ. ಇದು ಅಭಿಮಾನವಲ್ಲ, ಅನಾಗರಿಕತೆ.

ಅಂಧಾಭಿಮಾನಿಗಳ ಅನಾಗರೀಕ ವರ್ತನೆ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಆಕ್ರೋಶಕ್ಕೆ ಕಾರಣವಾಗಿದೆ
ಸಿರಿಮಲ್ಲೆ ಸೀರೆಗಳ ಉದ್ಘಾಟನೆಗೆ ಬಂದ ನಟಿ, ಕಾರ್ಯಕ್ರಮ ಮುಗಿಸಿ ಕಾರಿನತ್ತ ಹೋಗುವಾಗ ಜನಸಂದಣಿ ಏಕಾಏಕಿ ಆವರಿಸಿಕೊಂಡಿತು. ಸೆಲ್ಫಿ, ವಿಡಿಯೋ, ವಿಕೃತ ಸ್ಪರ್ಶ—ಎಲ್ಲವೂ ಒಂದೇ ಹೊತ್ತಿಗೆ ನಡೆದಿದೆ. ಭದ್ರತಾ ಸಿಬ್ಬಂದಿ ಇದ್ದರೂ ಬ್ಯಾರಿಕೇಡ್ ದಾಟಿ ನುಗ್ಗಿದ ಗುಂಪು, ನಟಿಯನ್ನು ಮನುಷ್ಯಳಂತೆ ಅಲ್ಲ, ವಸ್ತುವಿನಂತೆ ನೋಡಿದ ಮನಸ್ಥಿತಿಯ ಬಗ್ಗೆ ಸಾರ್ವಜನಿಕವಾಗಿ ಅಸಹ್ಯ ಹುಟ್ಟಿಸಿದೆ.
)
ಇದೇ ಹೈದರಾಬಾದ್ನಲ್ಲಿ ಕೆಲವೇ ದಿನಗಳ ಹಿಂದೆ ನಟಿ ನಿಧಿ ಅಗರ್ವಾಲ್ಗೂ ಇದೇ ಗತಿ ಆಗಿತ್ತು. ಅಂದೂ ಲುಲು ಮಾಲ್, ಇಂದು ಜುಬಿಲಿ ಹಿಲ್ಸ್. ಸ್ಥಳ ಬದಲಾಗಿದೆ, ಸಮಸ್ಯೆ ಬದಲಾಗಿಲ್ಲ. ಅಂದರೆ ಅಲ್ಲಿನ ಅಂಧಾಭಿಮಾನಿಗಳ ಚಳಿ ಬಿಡಿಸುವ ಕೆಲಸವನ್ನು ಅಲ್ಲಿನ ಖಾಕಿ ಪಡೆ ಇನ್ನೂ ಮಾಡಿಲ್ಲವೇ ಎಂಬ ಪ್ರಶ್ನೆ ಉದ್ಭವಿಸಿದೆ.

ಸಿನಿಮಾ ನಟಿ ಎಂದರೆ ಸಾರ್ವಜನಿಕ ಆಸ್ತಿ ಆಗಿಬಿಡುತ್ತಾರಾ?, ಸೆಲ್ಫಿಗಾಗಿ ಮಹಿಳೆಯ ಸುರಕ್ಷತೆ ತ್ಯಾಗ ಮಾಡಬೇಕೆ? ಹಾಗೂ ಭದ್ರತೆ ಇಲ್ಲದೆ ಕಾರ್ಯಕ್ರಮ ಆಯೋಜಿಸುವುದು ಯಾರು ಹೊಣೆ? ಎಂಬ ಪ್ರಶ್ನೆಗಳನ್ನು ನೆಟಿಜಿನ್ಸ್ ಸೋಷಿಯಲ್ ಮೀಡಿಯಾ ಮೂಲಕ ಕೇಳಲಾರಂಭಿಸಿದ್ದಾರೆ.
ಇಲ್ಲಿ ತಪ್ಪು ಕೇವಲ ಅಂಧಾಭಿಮಾನಿಗಳದ್ದು ಮಾತ್ರವಲ್ಲದೆ ಅನುಮತಿ ಇಲ್ಲದೆ ಕಾರ್ಯಕ್ರಮ ಆಯೋಜಿಸುವ ಆಯೋಜಕರು, ಜನ ನಿಯಂತ್ರಣ ಮಾಡದ ಆಡಳಿತ, ಹಾಗೂ “ನೋಡೋಣ, ಆಗೋಣ” ಎನ್ನುವ ನಿರ್ಲಕ್ಷ್ಯ — ಎಲ್ಲರೂ ಸಹಪಾಲುದಾರರು ಎನ್ನುವ ಆರೋಪ ಕೇಳಿಬಂದಿದೆ.
ನಟಿಯೊಬ್ಬಳು ಸಾರ್ವಜನಿಕವಾಗಿ ಕಾಣಿಸಿಕೊಂಡರೆ, ಅವಳ ಸುತ್ತ ಮುತ್ತಿಗೆ ಹಾಕುವ ಸಂಸ್ಕೃತಿ ಮುಂದುವರಿದರೆ, ನಾಳೆ ಯಾವ ಮಹಿಳೆ ಸುರಕ್ಷಿತ? ಇದು ಸಿನಿಮಾ ಲೋಕದ ಸಮಸ್ಯೆಯಲ್ಲ; ಇದು ಸಮಾಜದ ಸಂಸ್ಕೃತಿಯ ಸಮಸ್ಯೆ. ಅಭಿಮಾನ ಮಿತಿಯಲ್ಲಿದ್ದರೆ ಗೌರವ. ಮಿತಿ ಮೀರಿದರೆ ಅದೇ ಅಪಾಯ. ಸಮಂತಾ ಹೊರಬಂದಳು, ತಪ್ಪಿಸಿಕೊಂಡಳು. ಆದರೆ ಮುಂದಿನ ಬಾರಿ ಮತ್ತೊಬ್ಬಳು ಹೆಣ್ಣಿಗೂ ಇದೇ ಗತಿ ಆಗಬಾರದು ಎಂದು ಪ್ರಜ್ಞಾವಂತರು ಒತ್ತಾಯಿಸುತ್ತಿದ್ದಾರೆ.