ರೊಜಾರಿಯೊ ಕ್ಯಾಥೆಡ್ರಲ್ ಚರ್ಚ್‌ನಲ್ಲಿ ಕ್ರಿಸ್ಮಸ್ ಸೌಹಾರ್ದ ಸಹಮಿಲನ

ಮಂಗಳೂರು: ರೊಜಾರಿಯೊ ಕ್ಯಾಥೆಡ್ರಲ್ ಚರ್ಚ್ ಬೋಳಾರ ವತಿಯಿಂದ ಮಂಗಳವಾರ(ಡಿ.16) ಕ್ರಿಸ್ಮಸ್ ಹಬ್ಬದ ಅಂಗವಾಗಿ ಕ್ರಿಸ್ಮಸ್ ಸೌಹಾರ್ದ ಸಹಮಿಲನವನ್ನು ಆತ್ಮೀಯತೆ ಮತ್ತು ಸೌಹಾರ್ದತೆಯೊಂದಿಗೆ ಆಯೋಜಿಸಲಾಯಿತು. ಈ ಕಾರ್ಯಕ್ರಮದ ಮುಖ್ಯ ಉದ್ದೇಶವು ಎಲ್ಲಾ ಧರ್ಮಗಳ ನಡುವೆ ಸಹಬಾಳ್ವೆ, ಪ್ರೀತಿ ಮತ್ತು ಶಾಂತಿಯ ಸಂದೇಶವನ್ನು ಹಂಚಿಕೊಳ್ಳುವುದಾಗಿತ್ತು.

ಈ ಸಹಮಿಲನಕ್ಕೆ ರೊಜಾರಿಯೊ ಕ್ಯಾಥೆಡ್ರಲ್ ನ 14 ವಾರ್ಡ್‌ಗಳಿಂದ ಕ್ಯಾಥೋಲಿಕ್ ಅಲ್ಲದ 14 ಕುಟುಂಬಗಳು ಭಾಗವಹಿಸಿದ್ದು, ಕಾರ್ಯಕ್ರಮಕ್ಕೆ ವಿಶೇಷ ಅರ್ಥ ಮತ್ತು ವೈಶಿಷ್ಟ್ಯತೆಯನ್ನು ನೀಡಿತು. ವಿವಿಧ ಧರ್ಮಗಳ ಅತಿಥಿಗಳ ಉಪಸ್ಥಿತಿ ಕಾರ್ಯಕ್ರಮಕ್ಕೆ ಸೌಹಾರ್ದತೆಯ ಸೊಗಡನ್ನು ಇನ್ನಷ್ಟು ಹೆಚ್ಚಿಸಿದೆ.

ಕಾರ್ಯಕ್ರಮವನ್ನು ರೊಜಾರಿಯೊ ಕ್ಯಾಥೆಡ್ರಲ್ ನ ಧರ್ಮಗುರುಗಳಾದ ಫಾ. ವಲೇರಿಯನ್ ಡಿಸೋಜಾ ಅವರು ಅತಿಥಿಗಳಾದ ಕಾಂತಿ ಚರ್ಚ್ ನ ಪಾಸ್ಟಾರ್ ಗೇಬ್ರಿಯಲ್ ರೋನಿತ್, ಮಹಾಲಿಂಗೇಶ್ವರ ದೇವಸ್ಥಾನದ ಟ್ರಸ್ಟಿ ಮಹೇಶ್ ರಾವ್ ಅವರೊಂದಿಗೆ ಕೇಕ್ ಕತ್ತರಿಸುವ ಮೂಲಕ ಉದ್ಘಾಟಿಸಿದರು.

ICYM ರೊಸಾರಿಯೋ ಯುವ ಸಂಘಟನೆಯಿಂದ ಪ್ರಸ್ತುತಗೊಂಡ ಕ್ಯಾರೋಲ್ ಗಾಯನ ಮತ್ತು ಆಟಗಳು ಕ್ರಿಸ್ಮಸ್ ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿತು. ಈ ಸಂದರ್ಭದಲ್ಲಿ ಭಾರತಿ ಬೋಳಾರ ಅವರು ಕ್ರಿಸ್ಮಸ್ ಸಂದೇಶವನ್ನು ನೀಡಿ ಎಲ್ಲರಿಗೂ ಹಬ್ಬದ ಶುಭಾಶಯಗಳನ್ನು ಕೋರಿದರು. ಕಾರ್ಪೊರೇಟರ್ ಲತೀಫ್ ಅವರು ಬಹುಮಾನಗಳನ್ನು ವಿತರಿಸಿದರು.

ಫಾ. ವಲೇರಿಯನ್ ಫೆರ್ನಾಂಡಿಸ್, ಫಾ. ಜೇಸನ್ ಲೋಬೊ, ಜಾನ್ ಡಿ’ಸಿಲ್ವಾ, ಸಿರಿಲ್ ರೊಸಾರಿಯೊ, ಧಾರ್ಮಿಕ ಭಗಿನಿಯರು ಮತ್ತು ಚರ್ಚ್ ಪಾಲನಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

ಹೇಝಲ್ ಮಿನೇಜಸ್ ಅವರು ಧನ್ಯವಾದಗಳನ್ನು ಅರ್ಪಿಸಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಮೇಬಲ್ ಡಿಸೋಜಾ ನಿರ್ವಹಿಸಿದರು.

error: Content is protected !!