ಉಡುಪಿ: ಕಾಂಕ್ರೀಟ್ ಕೆಲಸಕ್ಕಾಗಿ ಸಾಗುತ್ತಿದ್ದ ಟೆಂಪೋವೊಂದರ ಟಯರ್ ಸ್ಫೋಟಗೊಂಡು ಮಗುಚಿ ಬಿದ್ದು ಓರ್ವ ಮಹಿಳೆ ಮೃತಪಟ್ಟಿದ್ದು, ಏಳು ಜನರು ಗಾಯಗೊಂಡ ಘಟನೆ ಹೆಜಮಾಡಿ ಕನ್ನಂಗಾರು ಬ್ರಹ್ಮಬೈದರ್ಕಳ ಗರಡಿ ಎದುರು ರಾ.ಹೆ.66ರಲ್ಲಿ ಇಂದು(ಡಿ.11) ಬೆಳಗ್ಗೆ ನಡೆದಿದೆ.

ಪಾರ್ವತಿ (30) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ಸಾವಿತ್ರಮ್ಮ, ಮಹಂತೇಶ್ ಸಹಿತ 7 ಜನರು ಗಾಯಗೊಂಡಿದ್ದಾರೆ.
ಮುಲ್ಕಿಯಿಂದ ಉಡುಪಿ ಕಡೆಗೆ ಸಾಗುತ್ತಿದ್ದ ಟೆಂಪೋದಲ್ಲಿ ಕಾಂಕ್ರೀಟ್ ಮಿಕ್ಸಿಂಗ್ ಯಂತ್ರ ಮತ್ತು ಪರಿಕರಗಳ ಸಹಿತ ಪುರುಷರು ಮತ್ತು ಮಹಿಳೆಯರಿದ್ದರು. ವೇಗವಾಗಿ ಸಾಗುತ್ತಿದ್ದ ವಾಹನದ ಟಯರ್ ಏಕಾಏಕಿ ಸ್ಫೋಟಗೊಂಡಿದೆ. ಇದರಿಂದ ಟೆಂಪೋ ಚಾಲಕ ತನ್ನ ನಿಯಂತ್ರಣ ಕಳೆದುಕೊಂಡ ಪರಿಣಾಮ ಮುಗುಚಿ ಬಿದ್ದಿದೆ. ಈಗಟನೆಯಿಂದ ಕ್ಷಣ ಮಾತ್ರದಲ್ಲಿ ಎದುರಿಗೆ ಸಾಗುತ್ತಿದ್ದ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಮುಗುಚಿಬಿದ್ದ ಟೆಂಪೋದ ಅಡಿಯಲ್ಲಿ ಹಲವಾರು ಮಂದಿ ಸಿಲುಕಿದ್ದು, ಅವರನ್ನು ಸ್ಥಳೀಯರ ಸಹಾಯದಿಂದ ಹೊರ ತೆಗೆಯಲಾಗಿದೆ. ಮಹಿಳೆಯೋರ್ವರು ಮಿಲ್ಲರ್ ನ ಅಡಿಗೆ ಸಿಲುಕಿ ಅವರನ್ನು ಹೊರತೆಗೆಯಲು ಸಾರ್ವಜನಿಕರು ಮತ್ತು ಟೋಲ್ ಸಿಬ್ಬಂದಿ ಹರಸಾಹಸಪಟ್ಟರು. ತೀವ್ರ ಗಾಯಗೊಂಡಿದ್ದ ಅವರನ್ನು ಟೋಲ್ ಅಂಬುಲೆನ್ಸ್ ಮೂಲಕ ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಚಿಕಿತ್ಸೆ ಫಲಕಾರಿ ಆಗದೆ ಮೃತಪಟ್ಟಿದ್ದಾರೆ.

ಪಡುಬಿದ್ರಿ ಪೋಲಿಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.