ಮಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಓಲೈಕೆ ರಾಜಕಾರಣಕ್ಕಾಗಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಹಾಗೂ ಸಂರಕ್ಷಣಾ ಕಾಯ್ದೆ 2020ಕ್ಕೆ ತಿದ್ದುಪಡಿ ಮಾಡಲು ಹೊರಟಿರುವುದಾಗಿ ಮಾಹಿತಿಯಿದ್ದು ಅಂತಹ ಪ್ರಯತ್ನ ಖಂಡನೀಯವೆಂದು ಶಾಸಕ ವೇದವ್ಯಾಸ ಕಾಮತ್ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಅವರು, ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಗೋಹತ್ಯಾ ನಿಷೇಧ ಕಾಯ್ದೆಯ ಪ್ರಕಾರ, ಅಕ್ರಮ ಗೋಸಾಗಾಟದ ವಾಹನವನ್ನು ಮುಟ್ಟುಗೋಲು ಹಾಕಿ ಕೊಳ್ಳಲಾಗುತ್ತಿತ್ತು. ಆನಂತರ ವಾಹನದ ಮೌಲ್ಯದ ಬ್ಯಾಂಕ್ ಗ್ಯಾರಂಟಿ ನೀಡಿದರಷ್ಟೇ ವಾಹನ ಮರಳಿ ಪಡೆಯಬಹುದಾಗಿದ್ದರಿಂದ ಗೋಕಳ್ಳರಿಗೆ ದೊಡ್ಡ ಸಮಸ್ಯೆಯಾಗಿ ಬಹುತೇಕ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿತ್ತು. ಇದೀಗ ಉದ್ದೇಶಿತ ರಾಜ್ಯ ಸರ್ಕಾರದ ತಿದ್ದುಪಡಿಯು, ಗೋಕಳ್ಳಕರಿಗೆ ಇನ್ನಷ್ಟು ಬೆಂಬಲ ಹಾಗೂ ಪ್ರೋತ್ಸಾಹ ನೀಡಿದಂತಾಗಲಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಅಷ್ಟಕ್ಕೂ ಈ ಸರ್ಕಾರಕ್ಕೆ ಗೋಕಳ್ಳರ ಮೇಲೆ ಯಾಕಿಷ್ಟು ಪ್ರೀತಿ, ಅನುಕಂಪ? ಎಂದು ಶಾಸಕರು ಪ್ರಶ್ನಿಸಿದರು. ಕರಾವಳಿ ಭಾಗದ ಜಿಲ್ಲೆಗಳಲ್ಲಿ ರಾತ್ರಿ ವೇಳೆಯಲ್ಲಿ ತಲವಾರು ಹಿಡಿದುಕೊಂಡು, ಮನೆಗಳಿಂದ ಗೋವುಗಳನ್ನು ಕದ್ದು ರಾಜಾರೋಷವಾಗಿ ಓಡಿ ಹೋಗುವ ತಂಡಗಳು ಸಕ್ರಿಯವಾಗಿವೆ. ಇನ್ನು ಮೇಲೆ ಅವರ ಉಪಟಳ ಹೆಚ್ಚಾದರೆ, ಸಮಾಜದಲ್ಲಿ ಶಾಂತಿ ಕದಡಿದರೆ, ಜಾನುವಾರು ಸಾಕುವವರಿಗೆ ತೀವ್ರ ತೊಂದರೆಯಾದರೆ ಎಲ್ಲದರ ಜವಾಬ್ದಾರಿ ಕಾಂಗ್ರೆಸ್ ಸರ್ಕಾರವೇ ಹೊರಬೇಕಾಗುತ್ತದೆ ಎಂದು ವೇದವ್ಯಾಸ ಕಾಮತ್ ಎಚ್ಚರಿಸಿದರು.
