ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟ ಇದರ 29ನೇ ವಾರ್ಷಿಕ ಮಹಾಸಭೆ ಬಹಿರಂಗ ಅಧಿವೇಶನ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಬಂಟ್ಸ್ ಹಾಸ್ಟೆಲ್ ಬಳಿಯ ಬಂಟರ ಯಾನೆ ನಾಡವರ ಮಾತೃ ಸಂಘದ ಮೈದಾನದಲ್ಲಿ ಜರುಗಿತು. ಕಾರ್ಯಕ್ರಮವನ್ನು ಅತಿಥಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಬಳಿಕ ಮಾತಾಡಿದ ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಅವರು, “ಸುಸಂಸ್ಕೃತ ಸಮಾಜಕ್ಕೆ ಇನ್ನೊಂದು ಹೆಸರೇ ನಮ್ಮ ಬಂಟ ಸಮಾಜ. ಲಕ್ಷ್ಮಿ, ಜ್ಞಾನ ಶಕ್ತಿ, ಕ್ರಿಯಾ ಶಕ್ತಿ ಎಲ್ಲವೂ ಒಗ್ಗೂಡಿದಾಗ ಸಮಾಜದ ಶ್ರೇಯಸ್ಸು ಸಾಧ್ಯ. ಬಂಟ ಸಮಾಜಕ್ಕೆ ರಾಜ್ಯವನ್ನು ಆಳುವ ಸಾಮರ್ಥ್ಯವಿದೆ. ನಮ್ಮ ಬಂಟರು ವಿಶ್ವದೆಲ್ಲೆಡೆ ಇದ್ದಾರೆ ಅವರೆಲ್ಲ ಒಗ್ಗೂಡಿದರೆ ರಾಷ್ಟ್ರ ಸುಭದ್ರವಾಗುತ್ತದೆ“ ಎಂದರು.

ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಮಾತಾಡಿ, “ಜಿಲ್ಲೆಯ ಬೇರೆಲ್ಲಾ ಸಂಘಗಳಿಗೆ ಮಾದರಿಯಾಗಿ ನಮ್ಮ ಜಿಲ್ಲೆಗೆ ಗೌರವ ತಂದ ಸಂಘ ಏನಾದರೂ ಇದ್ದರೆ ಅದು ಬಂಟರ ಸಂಘ. ಬಂಟ ಸಮಾಜದ ಜೊತೆಗೆ ಎಲ್ಲ ಸಮಾಜವನ್ನು ಜೊತೆಗೆ ಕೊಂಡೊಯ್ಯುವ ತಾಕತ್ತು ಈ ಸಂಘಕ್ಕಿದೆ. ಭಿನ್ನಾಭಿಪ್ರಾಯ ಇದ್ದಾಗ ಎಲ್ಲ ವರ್ಗದ ಜನರನ್ನು ಪ್ರೀತಿ ವಿಶ್ವಾಸದಿಂದ ಗೆಲ್ಲುವ ಮೂಲಕ ಸಾಮರಸ್ಯವನ್ನು ಸ್ಥಾಪಿಸುವ ಮಹತ್ತರ ಜವಾಬ್ದಾರಿ ಸಾಮಾಜಿಕ ಸಂಘಟನೆಗಳಿವೆ. ಅದನ್ನು ಎಲ್ಲ ಸಂಘ ಸಂಸ್ಥೆಗಳು ಪಾಲಿಸಬೇಕು” ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ, “ಜಾಗತಿಕ ಬಂಟರ ಸಂಘಗಳ ಒಕ್ಕೂಟ ನಿರಂತರವಾಗಿ ಬಡವರ ಕಣ್ಣೀರು ಒರೆಸುವ ಕೆಲಸವನ್ನು ಮಾಡುತ್ತಿದೆ. ಸಂಘ ಏನೇ ಸಾಧನೆ ಮಾಡಬೇಕಿದ್ರೂ ಅದಕ್ಕೆ ದಾನಿಗಳ ನೆರವು ಮತ್ತು ನಿರಂತರ ಪ್ರೋತ್ಸಾಹ ಅಗತ್ಯ. ನಮ್ಮ ಬೆನ್ನುತಟ್ಟುವ ದಾನಿಗಳು ಸದಾ ಜೊತೆಗಿರುವುದು ನಮ್ಮ ಯಶಸ್ಸಿನ ಸೂತ್ರಧಾರಿಗಳು“ ಎಂದರು.

ದುಬಾಯಿ ಯುಎಇ ಅಧ್ಯಕ್ಷರಾದ ವಕ್ವಾಡಿ ಪ್ರವೀಣ್ ಶೆಟ್ಟಿ ಮಾತಾಡಿ, “ನಾನು ಬಂಟರ ಸಂಘಕ್ಕೆ ಬರಲು ಐಕಳ ಹರೀಶ್ ಶೆಟ್ಟಿ ಅವರೇ ಕಾರಣ. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ನೂತನ ಪದಾಧಿಕಾರಿಗಳಿಗೆ ಅಭಿನಂದನೆಗಳು. ಹೊಸ ತಂಡ ಉತ್ಸಾಹದಿಂದ ಕಾರ್ಯ ನಿರ್ವಹಿಸುವ ಮೂಲಕ ಇಲ್ಲಿ ನಿರ್ಮಾಣ ಆಗಬೇಕಿರುವ ನೂತನ ಕಟ್ಟಡಕ್ಕೆ ಎಲ್ಲರೂ ಧನಸಹಾಯ ನೀಡಬೇಕು” ಎಂದರು.

ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಮಾತಾಡಿ, “ವಿಶ್ವದ ಎಲ್ಲ ಬಂಟರು ಬೇಧಭಾವ ಮರೆತು ಒಂದಾಗಬೇಕು. ಬಂಟ ಸಂಘಟನೆ ಮಾಡುವ ಸಾಮಾಜಿಕ ಕಾರ್ಯ ಚಟುವಟಿಕೆಗಳಲ್ಲಿ ಎಲ್ಲರೂ ಮುಕ್ತ ಮನಸ್ಸಿನಿಂದ ತೊಡಗಿಕೊಳ್ಳಬೇಕು” ಎಂದರು.
ಸಮಾರಂಭದಲ್ಲಿ ಕರ್ನಾಟಕ ರಾಜ್ಯೋತ್ಸವ, ಜಿಲ್ಲಾ ರಾಜ್ಯೋತ್ಸವ, ಪತ್ರಕರ್ತರಿಗೆ ಹಾಗೂ ಸಾಧಕರಿಗೆ ಸನ್ಮಾನ ಮಾಡಲಾಯಿತು.

ವೇದಿಕೆಯಲ್ಲಿ ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, ಮುಂಬೈ ಬಂಟರ ಸಂಘದ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ, ಅಶೋಕ್ ಶೆಟ್ಟಿ ಬಿಲ್ಲಾಡಿ, ಉಮಾ ಶೆಟ್ಟಿ, ಶಶಿಧರ್ ಶೆಟ್ಟಿ ಇನ್ನಂಜೆ, ಅಜಿತ್ ಶೆಟ್ಟಿ, ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಜಯಕರ ಶೆಟ್ಟಿ ಇಂದ್ರಾಳಿ, ಕೋಶಾಧಿಕಾರಿ ಮೋಹನ್ ದಾಸ್ ಶೆಟ್ಟಿ, ಜೊತೆ ಕಾರ್ಯದರ್ಶಿ ಚಂದ್ರಹಾಸ್ ಶೆಟ್ಟಿ ರಂಗೋಲಿ, ಮುನಿಯಾಲು ಉದಯ ಕುಮಾರ್ ಶೆಟ್ಟಿ, ಗಿರೀಶ್ ಶೆಟ್ಟಿ ತೆಳ್ಳಾರ್, ಪೃಥ್ವಿರಾಜ್ ರೈ, ಎಸಿ ಭಂಡಾರಿ, ಸುಧಾಕರ್ ಎಸ್ ಪೂಂಜಾ, ಮಂಜು ಕೊಡ್ಲಾಡಿ, ಆನಂದ್ ಶೆಟ್ಟಿ, ನಾಗೇಶ್ ಶೆಟ್ಟಿ, ಅನಿಲ್ ಶೆಟ್ಟಿ, ರಾಜೀವ್ ಭಂಡಾರಿ, ಒಕ್ಕೂಟದ ಸಂಚಾಲಕ ಬಾಲಕೃಷ್ಣ ರೈ ಕೊಲ್ಲಾಡಿ ಮತ್ತಿತರರು ಉಪಸ್ಥಿತರಿದ್ದರು.

ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಪ್ರಾಸ್ತಾವಿಕ ಮಾತನ್ನಾಡಿದರು. ನಿತೇಶ್ ಶೆಟ್ಟಿ ಎಕ್ಕಾರ್, ಪ್ರಿಯಾ ಹರೀಶ್ ಶೆಟ್ಟಿ, ರಾಜೇಶ್ವರಿ ಡಿ ಶೆಟ್ಟಿ ಸುರತ್ಕಲ್ ಕಾರ್ಯಕ್ರಮ ನಿರೂಪಿಸಿದರು.