ಮಂಗಳೂರು: ಸಂತಾ ಮದರ್ ತೆರೆಸಾ ವಿಚಾರ ವೇದಿಕೆ, ಮಂಗಳೂರು ಇವರ ಆಶ್ರಯದಲ್ಲಿ, ʻದೀಪಾವಳಿ – ಬೆಳಕಿನ ಹಬ್ಬ 2025ʼ ಅನ್ನು ಶನಿವಾರ, ಅಕ್ಟೋಬರ್ 25 ರಂದು ಸಂಜೆ 6 ಗಂಟೆಗೆ, ಸಂತ ಅಲೋಸಿ ಯಸ್ ಡೀಮ್ಡ್ ಟು ಬಿ ಯೂನಿವರ್ಸಿಟಿಯ ಸಹೋದಯ ಸಭಾಂಗಣದಲ್ಲಿ ಸಂಭ್ರಮದಿಂದ ಆಯೋಜಿಸಲಾಯಿತು. ಈ ವೇಖೆ “ಎಲ್ಲಾ ಧರ್ಮಗಳ ಹಬ್ಬಗಳು ಎಲ್ಲರ ಹಬ್ಬಗಳಾಗಬೇಕು” ಎಂಬ ಥೀಮ್ನೊಂದಿಗೆ ಜನರ ನಡುವೆ ಏಕತೆ ಮತ್ತು ಸಹೋದರತ್ವವನ್ನು ಸಾರಬೇಕು ಎಂಬ ಸಂದೇಶ ಸಾರಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ವಂದನೀಯ ಫಾ. ಜೆ. ಬಿ. ಸಲ್ದಾನ್ಹಾ, “ದೀಪಾವಳಿ ಒಂದು ಧರ್ಮಕ್ಕೆ ಸೀಮಿತವಾದ ಹಬ್ಬವಲ್ಲ, ಇದು ಧರ್ಮವನ್ನು ಮೀರಿಸಿ ಎಲ್ಲರನ್ನು ಒಗ್ಗೂಡಿಸುವ ಹಬ್ಬ” ಎಂದು ಹೇಳಿದರು. ಸಮಾಜದಲ್ಲಿ ಬೀರುವ ಅಂಧಕಾರಕ್ಕೆ ವಿರುದ್ಧವಾಗಿ ಪ್ರತಿಯೊಬ್ಬರೂ ದೀಪದಂತೆ ಪ್ರೀತಿ ಮತ್ತು ಭರವಸೆ ಹಂಚಿಕೊಳ್ಳಬೇಕೆಂದು ಒತ್ತಿ ಹೇಳಿದರು.

ಪ್ರಮುಖ ಅತಿಥಿಗಳಾಗಿ ಯೇನಪೋಯ ಶಿಕ್ಷಣ ಸಂಸ್ಥೆಗಳ ಪ್ರಾಚಾರ್ಯರು ಡಾ. ಜೀವನ ರಾಜ್ ಕುಟ್ಟರ್, ನಿವೃತ್ತ ಸಾಮಾಜಿಕ ಕಲ್ಯಾಣಾಧಿಕಾರಿ ಯೂಸುಫ್ ಅಖ್ತರ್, ಮತ್ತು ಸಂತಾ ಮದರ್ ತೆರೆಸಾ ವಿಚಾರ ವೇದಿಕೆಯ ಅಧ್ಯಕ್ಷ ರಾಯ್ ಕ್ಯಾಸ್ಟೆಲಿನೊ ಉಪಸ್ಥಿತರಿದ್ದರು. ಅ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಟೇನಿ ಆಲ್ವಾರೆಸ್ ಮತ್ತು ಸ್ಟೇನಿ ಲೋಬೊ ಸೇರಿದಂತೆ ಗಣ್ಯರು ಹಾಜರಿದ್ದರು. ಸುನಿಲ್ ಕುಮಾರ್ ಬಜಾಲ್ ಸ್ವಾಗತ ನೀಡಿದರು. ಮನೋಜ್ ಕುಮಾರ್ ಮತ್ತು ಡಾಲ್ಫಿ ಡಿಸೋಜಾ ನಿರ್ವಹಿಸಿದರು. ಮಂಜುಳಾ ನಾಯಕ್ ಧನ್ಯವಾದ ಗೈದರು.

ಕಾರ್ಯಕ್ರಮದಲ್ಲಿ ಉದಯೋನ್ಮುಖ ಗಾಯಕಿ ರಿಶಾಲ್ ಮೆಲ್ಬಾ ಕ್ರಾಸ್ಟಾ, ಅನಿವನ್ ಡಿಸೋಜಾ ಹಾಗೂ ಯೂಸುಫ್ ಅಖ್ತರ್ ಅವರನ್ನು ಸನ್ಮಾನಿಸಲಾಯಿತು. ರಿಶಾಲ್ ಮೆಲ್ಬಾ ಕ್ರಾಸ್ಟಾ ಮತ್ತು ರೋನಿ ಕ್ರಾಸ್ಟಾ ಗಾಯನ ಪ್ರಸ್ತುತಪಡಿಸಿದರು. ಅನಿವನ್ ಡಿಸೋಜಾ ನೃತ್ಯ ಪ್ರದರ್ಶಿಸಿ ಪ್ರೇಕ್ಷಕರನ್ನು ರಂಜಿಸಿದರು.
ಪಟಾಕಿ ಸಿಡಿತ ಮತ್ತು ದೀಪ ಪ್ರಜ್ವಲನೆ ಕಾರ್ಯಕ್ರಮದ ವಿಶೇಷತೆಯಾಗಿತ್ತು. ಹಬ್ಬಗಳನ್ನು ಒಂದು ಕುಟುಂಬದಂತೆ ಒಟ್ಟಿಗೆ ಆಚರಿಸುವುದರಿಂದ ಸಮಾಜದಲ್ಲಿ ಶಾಂತಿ, ಗೌರವ ಮತ್ತು ಸಹೋದರತ್ವ ಬೆಳೆಯುತ್ತದೆ ಎಂದು ಆಯೋಜಕರು ಅಭಿಪ್ರಾಯ ವ್ಯಕ್ತಪಡಿಸಿದರು. ಮಾನವತೆಗೆ ಸೇವೆಯ ಮೂಲಕ ಪ್ರೀತಿಯನ್ನು ಹರಡುವ ಸಂತಾ ಮದರ್ ತೆರೆಸಾ ಅವರ ಮೌಲ್ಯಗಳನ್ನು ವಿಚಾರ ವೇದಿಕೆ ಕಳೆದ ಒಂಬತ್ತು ವರ್ಷಗಳಿಂದ ನಿಷ್ಠೆಯಿಂದ ಅನುಸರಿಸುತ್ತಿದೆ.
