ಮಂಗಳೂರು: ವಿಧಾನಸಭೆಯ ಸಭಾಧ್ಯಕ್ಷರ ಕಚೇರಿಯಲ್ಲಿ ಆಡಳಿತಾತ್ಮಕ ಸುಧಾರಣೆಯ ಹೆಸರಿನಲ್ಲಿ ಕೋಟ್ಯಾಂತರ ರೂಪಾಯಿಗಳ ಭ್ರಷ್ಟಾಚಾರ ನಡೆದಿದ್ದಲ್ಲದೆ ಇದಕ್ಕಾಗಿ ದುಂದುವೆಚ್ಚ ಮಾಡಲಾಗಿದೆ. ಈ ಬಗ್ಗೆ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸುವಂತೆವ ಮಂಗಳೂರು ಉತ್ತರ ಶಾಸಕ ಡಾ.ವೈ. ಭರತ್ ಶೆಟ್ಟಿ ಒತ್ತಾಯಿಸಿದ್ದಾರೆ.

ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ಯುಟಿ ಖಾದರ್ ಅವರ ನೇತೃತ್ವದಲ್ಲಿ ವಿಧಾನಸಭೆಯ ಆಡಳಿತವು ಆಡಳಿತಾತ್ಮಕ ಸುಧಾರಣೆ ಹೆಸರಿನಲ್ಲಿ ಭಾರೀ ಅವ್ಯವಹಾರಗಳನ್ನು ನಡೆಸಿರುವ ಗಂಭೀರ ಆರೋಪಗಳು ಕೇಳಿಬಂದಿವೆ. ಸದನದ ಹಿರಿಮೆ ಗರಿಮೆಯನ್ನು ಕಾಪಾಡಬೇಕಾದ ಸಭಾಧ್ಯಕ್ಷರ ಕಚೇರಿಯೇ ಇಂದು ಭ್ರಷ್ಟಾಚಾರದ ಆರೋಪಗಳ ಮಸಿ ಮೆತ್ತಿಕೊಂಡಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ, ಸಭಾಧ್ಯಕ್ಷ ಸ್ಥಾನದ ಗೌರವಕ್ಕೂ ತೀವ್ರ ಧಕ್ಕೆಯುಂಟು ಮಾಡಿದೆ ಎಂದು ಆರೋಪಿಸಿದರು.

ವಿಧಾನಸೌಧಕ್ಕೆ ವಿದ್ಯುತ್ ಅಲಂಕಾರ, ಶಾಸಕರ ಭವನಕ್ಕೆ ಹಾಸಿಗೆ-ದಿಂಬುಗಳ ಖರೀದಿ, ದುಂದುವೆಚ್ಚದ ವಿದೇಶ ಅಧ್ಯಯನ ಪ್ರವಾಸ, ಮತ್ತು ವಿಧಾನಸೌಧದ ಮೊಗಸಾಲೆಯಲ್ಲಿ ಮಸಾಜ್ ಪಾರ್ಲರ್ ಮಾಡಿದ ಅಪಕೀರ್ತಿ ಹಾಗೂ ಉಚಿತ ಊಟ ತಿಂಡಿ ಸರಬರಾಜು ಮಾಡಿದ್ದು ಸೇರಿದಂತೆ ಹಲವು ಅಕ್ರಮಗಳ ಬಗ್ಗೆ ಸಂಶಯವಿದೆ. ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಮರದ ಬಾಗಿಲು ಮತ್ತು ಅನಗತ್ಯವಾದ ನೆಲಹಾಸು ಅಳವಡಿಕೆ, ವಿಧಾನಸೌಧದ ಆವರಣದಲ್ಲಿ ದುಂದುವೆಚ್ಚದ ಪುಸ್ತಕ ಮೇಳ, ವಿಧಾನಸಭೆಯ ಸಭಾಂಗಣದ ಒಳಗೆ ಎಐ ಕ್ಯಾಮರಾ ಅಳವಡಿಕೆ ಮತ್ತು ಹೊಸ ಟಿವಿಗಳ ಬೇಕಾಬಿಟ್ಟಿ ಖರೀದಿ ಮಾಡಿರುವುದು ಆರೋಪಕ್ಕೆ ಗುರಿಯಾಗಿದೆ ಎಂದರು.

ಶಾಸಕರ ಭವನಕ್ಕೆ ಸ್ಮಾರ್ಟ್ ಡೋರ್ ಲಾಕ್, ಸ್ಮಾರ್ಟ್ ಸೇಫ್ ಲಾಕರ್ಸ್, ಸ್ಮಾರ್ಟ್ ಎನರ್ಜಿ ಸಲ್ಯೂಷನ್ಸ್, ಸ್ಪೇನ್ಲೆಸ್ ಸ್ಟೀಲ್ ವಾಟರ್ ಪ್ಯೂರಿಫೈಯರ್ಗಳ ಖರೀದಿಯಲ್ಲೂ ಸಹ ಮಾರುಕಟ್ಟೆ ದರಕ್ಕೂ ಮತ್ತು ಸಚಿವಾಲಯದ ದರಕ್ಕೂ ಅಜಗಜಾಂತರ ವ್ಯತ್ಯಾಸ ಕಂಡುಬರುತ್ತಿದೆ ಎಂದು ಹೇಳಲಾಗಿದ್ದು, ಈ ಎಲ್ಲಾ ಖರೀದಿಗಳ ಗುತ್ತಿಗೆಯನ್ನು ಅನುಮಾನಾಸ್ಪದವಾಗಿ ಮಂಗಳೂರು ಮೂಲದ ಕಂಪನಿಗಳಿಗೆ ನೀಡಲಾಗಿದೆ ಎಂಬ ಆರೋಪವಿದೆ ಎಂದು ಭರತ್ ಆರೋಪಿಸಿದರು.

ಯಾವುದೇ ವಸ್ತು ಖರೀದಿಸಲು ಹಣಕಾನು ಇಲಾಖೆಯ ಅನುಮತಿ ಮತ್ತು ಟೆಂಡರ್ ಸೇರಿದಂತೆ ಹಲವು ನಿಯಮಗಳ ಪಾಲನೆಯಾಗಬೇಕು. ಆದರೆ, ಇಲ್ಲಿ ಹಲವು ವಸ್ತುಗಳ ಖರೀದಿಗೆ ಯಾವುದೇ ನಿಯಮ ಪಾಲನೆಯಾಗಿಲ್ಲ. ಹಣಕಾಸು ಇಲಾಖೆ ಅನುಮತಿ ನೀಡದಿದ್ದರೂ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗಿದೆ, ಎಲ್ಲಾ ವಸ್ತುಗಳಿಗೂ ಎರಡು-ಮೂರು ಪಟ್ಟು ಹೆಚ್ಚು ಖರ್ಚು ತೋರಿಸಿ ಹಣಕಾಸು ಇಲಾಖೆಯು ಅನುಮತಿ ನೀಡದಿದ್ದರೂ, ಮುಖ್ಯಮಂತ್ರಿಗಳ ಮೌಕಿಕ ಒತ್ತಡದಿಂದ ಹಣಕಾಸು ಇಲಾಖೆ ತುರ್ತಾಗಿ ಮಾಡಬೇಕಾದ ಕೆಲಸವೆಂದು 4ಜಿ ವಿನಾಯಿತಿ ನೀಡಿರುವುದು ಸಂಶಯಕ್ಕೆ ಎಡೆ ಮಾಡಿದೆ. ಇದರ ಜೊತೆಗೆ, ಬಿಜೆಪಿ ಶಾಸಕರನ್ನು ದುರ್ಬಲ ಕಾರಣಗಳಿಗಾಗಿ ಎರಡು ಬಾರಿ ಅಮಾನತುಗೊಳಿಸಿರುವ ಸಭಾಧ್ಯಕ್ಷರ ಪಕ್ಷವಾತಿ ನಿರ್ಣಯವೂ ಸಹ ಚರ್ಚೆಗೆ ಗ್ರಾಸವಾಗಿದೆ ಎಂದರು.

ರಾಜ್ಯದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಅಭಿವೃದ್ಧಿಗೆ ಹಣವಿಲ್ಲದ ಈ ಸಂದರ್ಭದಲ್ಲಿ ಇಷ್ಟೊಂದು ದುಂದುವೆಚ್ಚ ಮಾಡುವ ಅವಶ್ಯಕತೆ ಇರಲಿಲ್ಲ. ಈ ಕಾಂಗ್ರೆಸ್ ಸರ್ಕಾರಕ್ಕೆ ಹಗರಣ ಮಾಡಲು ಇರುವಷ್ಟು ತರಾತುರಿ ಅಭಿವೃದ್ಧಿ ಕಾರ್ಯಗಳಲ್ಲಿ ಕಂಡುಬರುತ್ತಿಲ್ಲ. ಆದ್ದರಿಂದ, ಈ ಎಲ್ಲಾ ಗಂಭೀರ ಆರೋಪಗಳ ಕುರಿತು ಹೈಕೋರ್ಟ್ನ ಹಾಲಿ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಕಾಲಮಿತಿಯಲ್ಲಿ ತನಿಖೆಯಾಗಬೇಕು ಮತ್ತು ಸಭಾಧ್ಯಕ್ಷರ ಕಚೇರಿಯ ಕಾರ್ಯ ಚಟುವಟಿಕೆಗಳು ಸಾರ್ವಜನಿಕ ಪಾರದರ್ಶಕತೆಗಾಗಿ ಮಾಹಿತಿ ಹಕ್ಕು ಕಾಯಿದೆ (RTI) ವ್ಯಾಪ್ತಿಗೆ ಬರಬೇಕು ಎಂದು ಒತ್ತಾಯಿಸಿದರು.
ಅಲ್ಲದೆ ಸಭಾಧ್ಯಕ್ಷರ ಪೀಠ ಗೌರವ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವ ಹಿನ್ನೆಲೆಯಲ್ಲಿ ಈ ಪ್ರಕರಣವನ್ನ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಕ ಮಾಡಿ ವರದಿ ಪಡೆದು ಆರೋಪ ಮುಕ್ತವಾಗಬೇಕೆಂದು ಭರತ್ ಶೆಟ್ಟಿ ಆಗ್ರಹಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ರವೀಂದ್ರ ಶೆಟ್ಟಿ ಉಳಿದೊಟ್ಟು, ವಕ್ತಾರ ರಾಜ್ಗೋಪಾಲ ರೈ, ಅರುಣ ಜಿ. ಶೇಟ್, ಪೂರ್ಣಿಮಾ ಎಂ. ಮತ್ತಿತರರಿದ್ದರು.
ಸಭಾಧ್ಯಕ್ಷ ಖಾದರ್ ವಿರುದ್ಧ ಪಕ್ಷಪಾತದ ಗಂಭೀರ ಆರೋಪ ಮಾಡಿದ ಭರತ್
ಜುಲೈ 2023ರಲ್ಲಿ ಉಪಸಭಾಧ್ಯಕ್ಷರು ಸದನ ನಡೆಸುತ್ತಿದ್ದ ವೇಳೆ ಬಿಜೆಪಿ ಶಾಸಕರು ಅಶಿಸ್ತು ತೋರಿಸಿ, ಸ್ಪೀಕರ್ ಪೀಠದ ಬಳಿ ಪೇಪರ್ ಹರಿದು ಎಸೆದ ಹಿನ್ನೆಲೆಯಲ್ಲಿ, ಖಾದರ್ ಅವರು 10 ಬಿಜೆಪಿ ಶಾಸಕರನ್ನು ಆ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸಿದರು. ಈ ಕ್ರಮಕ್ಕೆ ವಿರೋಧ ಪಕ್ಷಗಳು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿ, ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯದ ನೋಟಿಸ್ ನೀಡಿದವು ಎಂದು ಭರತ್ ನೆನಪಿಸಿದರು.
ಮಾರ್ಚ್ 2025ರಂದು ಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರಿದ ಆರೋಪದ ಮೇಲೆ, ಮತ್ತೊಮ್ಮೆ 18 ಬಿಜೆಪಿ ಶಾಸಕರು ಆರು ತಿಂಗಳ ಅವಧಿಗೆ ಅಮಾನತುಗೊಂಡರು. ಮಾರ್ಷಲ್ಗಳ ಮೂಲಕ ಅವರನ್ನು ಸದನದಿಂದ ಹೊರಹಾಕಲಾಯಿತು. ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಬಳಿಕ, ಮೇ 2025ರಲ್ಲಿ ಸ್ಪೀಕರ್, ಮುಖ್ಯಮಂತ್ರಿ ಮತ್ತು ವಿರೋಧ ಪಕ್ಷದ ನಾಯಕರ ಸಮಾಲೋಚನೆಯ ನಂತರ — ಶಾಸಕರು ವಿಷಾದ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಅಮಾನತು ಹಿಂಪಡೆಯಲಾಯಿತು ಎಂದು ಭರತ್ ಶೆಟ್ಟಿ ನೆನಪಿಸಿದರು.
ಖಾದರ್ ಅನೇಕ ಬಾರಿ ಪಕ್ಷಪಾತದ ನಡವಳಿಕೆಯನ್ನು ತೋರಿಸಿದ್ದು, ವಿರೋಧ ಪಕ್ಷದ ಸದಸ್ಯರಿಗೆ ಮಾತನಾಡಲು ಅವಕಾಶ ನಿರಾಕರಿಸಿದ್ದಾರೆ. ಸರ್ಕಾರದ ವಿರುದ್ಧದ ವಿಷಯಗಳನ್ನು ಬಗ್ಗೆ ಖಾದರ್ ಚರ್ಚೆಗೆ ಅವಕಾಶ ನೀಡಿಲ್ಲ ಎಂದು ಆರೋಪಿಸಿದರು.