ಮಂಗಳೂರು: ಸಂಸದ ಕ್ಯಾ| ಬ್ರಿಜೇಶ್ ಚೌಟ ನನ್ನ ಆತ್ಮೀಯ ಮಿತ್ರ ಮಾತ್ರವಲ್ಲದೆ, ವಿದ್ಯಾವಂತ ಸಂಸದ ಕೂಡ ಹೌದು. ಆದರೆ ಅವರು ತಮ್ಮ ವಿದ್ಯಾರ್ಹತೆಗೆ ಅಪಚಾರ ಆಗುವಂತೆ ಮಾಡಬಾರದು ಎಂದು ಕಾಂಗ್ರೆಸ್ ಮುಖಂಡ ಪದ್ಮರಾಜ್ ಆರ್. ಮನವಿ ಮಾಡಿದ್ದಾರೆ.
ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅವರು, ಸಿಎಂ ಸಿದ್ದರಾಮಯ್ಯ ಪುತ್ತೂರು ಕಾರ್ಯಕ್ರಮದಲ್ಲಿ ಭಾಗವಹಿಸಿ ನೀಡಿದ ಹೇಳಿಕೆ ಕುರಿತಂತೆ, ಸಂಸದ ಬ್ರಿಜೇಶ್ ಚೌಟ ಪ್ರಕಟಣೆಯಲ್ಲಿ ಕೈಲಾಗದವರು ಮೈ ಪರಚಿಕೊಂಡಂತೆ ಆಗಿದೆ. ಜಿಎಸ್ಟಿ ಕಡಿಮೆ ಸಂಭ್ರಮದ ಸಮಯದಲ್ಲಿ ಸಿಎಂ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಹೇಳಿದ್ದಾರೆ. ಕೇಂದ್ರ ಸರ್ಕಾರವೇ ಜಿಎಸ್ಟಿ ಏರಿಸಿ ಇದೀಗ ಕಡಿಮೆಗೊಳಿಸುವುದರಲ್ಲಿ ಸಂಭ್ರಮಪಡುವಂಥದ್ದು ಏನಿದೆ ಎಂದು ಸಿಎಂ ಪ್ರಶ್ನಿಸಿದ್ದಾರೆ. ಆದರೆ ಕಾಂಗ್ರೆಸ್ ಅವಧಿಯಲ್ಲಿ 10ರಿಂದ 12ರಷ್ಟು ವ್ಯಾಟ್ ಇತ್ತು. ಆದರೆ ಮೋದಿ ಜಿಎಸ್ಟಿ ಜಾರಿಗೊಳಿಸಿ ಶೇ.28ರವರೆಗೆ ತೆರಿಗೆ ವಿಧಿಸಿ ಇದೀಗ ಕಡಿಮೆಗೊಳಿಸಿದೆ. ಇದನ್ನು ವಿದ್ಯಾವಂಸ ಸಂಸದ ಬ್ರಿಜೇಶ್ ಚೌಟ ಅರ್ಥಮಾಡಿಕೊಳ್ಳಬೇಕು ಎಂದು ಟಾಂಗ್ ನೀಡಿದರು.
ಜಿಎಸ್ಟಿ ಅವರೇ ಹೆಚ್ಚಿಸಿ ಅವರೇ ಕಡಿಮೆಗೊಳಿಸಿ ಇದೀಗ ಶೋರೂಂ ಮುಂದೆ ಮೋದಿ ಫೋಟೋ ಅಂಟಿಸಿ ಸಂಭ್ರಮ ಪಡುವಂಥದ್ದು ಯಾವ ರೀತಿಯ ನಾಟಕ? ಆರೋಗ್ಯ ವಿಮೆಗೆ ಟ್ಯಾಕ್ಸ್ ತೆಗೆಯಲಾಗಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ ಗ್ರೂಪ್ ಹೆಲ್ತ್ ಇನ್ಷ್ಯರೆನ್ಸ್ನಿಂದ ತೆರಿಗೆ ತೆಗೆದುಹಾಕಿಲ್ಲ. ಸಂಸದ ಬ್ರಿಜೇಶ್ ಈ ಬಗ್ಗೆ ನೀವು ಮಾತಾಡಿ. ತಪ್ಪುಗಳನ್ನು ಸರಿಪಡಿಸಿ. ನಿಮಗೆ ಸಿಎಂ ಸಿದ್ದರಾಮಯ್ಯ 15 ಸಲ ಬಜೆಟ್ ಮಂಡಿಸಿದ್ದಾರೆ ಎನ್ನುವ ವಿಷ ಗೊತ್ತಿರಲಿ ಎಂದರು.
ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿ ಆಗುತ್ತೆ ಅಂದ್ರಿ, ಆದರೆ ದಿವಾಳಿಯಾಯ್ತಾ? ಬಿಹಾರದಲ್ಲಿಯೂ ಗ್ಯಾರಂಟಿ ಘೋಷಿಸಿದ್ದೀರಿ. ನಾವು ಮಾಡಿದ್ರೆ ದಿವಾಳಿ ಆಗುತ್ತದೆ, ನೀವು ಮಾಡಿದ್ರೆ ದಿವಾಳಿ ಆಗುವುದಿಲ್ಲವಾ ಎಂದು ಪ್ರಶ್ನಿಸಿದ ಪದ್ಮರಾಹ್, ರಾಜ್ಯದಲ್ಲಿ ಸ್ಕೀಂ ಮುಂದುವರೆಯುತ್ತದೆ ಎಂದು ಭರವಸೆ ನೀಡಿದರು. ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿದ್ದರೂ ಪೆರ್ಕ್ಯಾಪಿಟ ಇನ್ಕಮ್ನಲ್ಲಿ ರಾಜ್ಯ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ ಎಂದರು.
ಕರ್ನಾಟಕ ಪಬ್ಲಿಕ್ ಸ್ಕೂಲ್ ಆರಂಭಿಸಿ ರಾಜ್ಯ ಸರ್ಕಾರ ಶಿಕ್ಷಣ ಕ್ರಾಂತಿಗೆ ಮುಂದಾಗಿದೆ. ದಕ್ಷಿಣ ಕನ್ನಡದಲ್ಲಿ 17 ಕರ್ನಾಟಕ ಪಬ್ಲಿಕ್ ಸ್ಕೂಲ್ಗಳು ಆರಂಭಗೊಳ್ಳಲಿದೆ. ಈ ಬಗ್ಗೆ ಬಿಜೆಪಿಗರು ಸಂಭ್ರಮಿಸುವ, ಸ್ವಾಗತಿಸುವ ಮನೋಭಾವ ಇಲ್ಲ ಎಂದು ಆರೋಪಿಸಿದರು. ರಾಜ್ಯದಲ್ಲಿ ಮಹಿಳೆಯರಿಗಾಗಿ ಋತುಚಕ್ರ ರಜೆ ತಂದ್ರೂ, ಮಹಿಳೆಯರ ಪರ ಕಾಳಜಿ ವಹಸಿದ್ದೇವೆ ಎನ್ನುವು ಬಿಜೆಪಿ ಅಭಿನಂದಿಸುತ್ತಿಲ್ಲ. ಒಳ್ಳೆ ಕೆಲಸ ಮಾಡಿದ್ರೆ ಅವ ಯಾವ ಪಕ್ಷವೂ ಇರಲಿ ಅದನ್ನು ಸ್ವಾಗಿತಿಸಬೇಕು ಎಂದು ಪದ್ಮರಾಜ್ ಕಿವಿಮಾತು ಹೇಳಿದರು.
ರಾಜ್ಯದಲ್ಲಿ 135 ಕೋ. ವೆಚ್ಚದಲ್ಲಿ ಟೆಕ್ ಪಾರ್ಕ್ ಅನುಮೋದನೆ ಸಿಕ್ಕಿದ್ದು, 3500ಕ್ಕೂ ಅಧಿಕ ಮಂದಿಗೆ ಉದ್ಯೋಗ ಲಭಿಸಲಿದೆ. ವೆನ್ಲಾಕ್ನಲ್ಲಿ ಕಾರ್ಡಿಯೋಲಜಿ ವಿಭಾಗ ಆರಂಭಗೊಂಡಿದೆ. ಆರೋಗ್ಯ ಸಚಿವ ಗುಂಡೂರಾವ್ ಮುತುವರ್ಜಿಯಿಂದ ವೆನ್ಲಾಕ್ ಆಸ್ಪತ್ರೆ ಉತ್ತಮ ಗುಣಮಟ್ಟದ ಚಿಕಿತ್ಸೆ ಲಭಿಸುತ್ತದೆ. ಆದರೆ ಬಿಜಿಪಿಯವರು ಇಲ್ಲಿ ಐಸಿಯೂ ಕಡಿಮೆಯಾಗಿದೆ ಎಂದು ಸುಳ್ಳು ಹಬ್ಬಿಸುತ್ತಿದ್ದಾರೆ. ವೆನ್ಲಾಕ್ನಲ್ಲಿ ಐಸಿಯೂ ಕಡಿಮೆಯಾಗಿಲ್ಲ, ಆದರೆ ಬೇರೆ ರಾಜ್ಯಗಳಿಂದಲೂ ರೋಗಿಗಳು ದಾಖಲಾಗಿರುವುದರಿಂದ ಐಸಿಯೂ ಭರ್ತಿಯಾಗುತ್ತಿದೆ ಎಂದು ಸಮಜಾಯಿಷಿ ನೀಡಿದರು.
ಪುತ್ತೂರು ಶಾಸಕ ಅಶೋಲ್ ಅಶೋಕ್ ಜನಮನ ಯಶಸ್ವಿಯಾಗಿದ್ದು, ಲಕ್ಷಾಂತರ ಜನರನ್ನು ಕಂಡು ಸಿಎಂ ಸಿದ್ದು ಸಂಭ್ರಮಿಸಿದ್ದಾರೆ. ಆದರೆ ಹಠಾತ್ ಮಳೆ ಬಂದಿದ್ದರಿಂದ ನೂಕುನುಗ್ಗಲು ಉಂಟಾಗಿದೆ. ಆದರೆ ಆಸ್ಪತ್ರೆ ಖರ್ಚುಗಳನ್ನು ಸ್ವತಃ ಅಶೋಕ್ ಅವರೇ ನೋಡಿದ್ದಾರೆ. ಅವರ ಜನಪರ ಕಾರ್ಯಕ್ರಮವನ್ನು ನೋಡಿ ಬಿಜೆಪಿಗರು ಸಂಭ್ರಮಿಸುವುದು ಬಿಟ್ಟು ಜಾಲತಾಣಗಳ ಮೂಲಕ ಟ್ರೋಲ್ ಮಾಡುತ್ತಿದ್ದಾರೆ. ದೇವರು ನಮಗೂ ಕೂಡ ಇದೇ ರೀತಿ ಉಡುಗೊರೆ ಕೊಡುವ ಶಕ್ತಿಯನ್ನು ಒದಗಿಸಲಿ ಎಂದು ಪ್ರಾರ್ಥಿಸಬೇಕು ಎಂದರು.
2014ರ ಮೇಯವರೆಗೆ 10 ಗ್ರಾಂ ಚಿನ್ನಕ್ಕೆ 28006 ರೂ ಇತ್ತು. ಇದೀಗ ಅದೇ ಚಿನ್ನಕ್ಕೆ 1 ಲಕ್ಷ 32 ಸಾವಿರ ಆಗಿದೆ. ಆದರೆ ಕ್ರೂಡ್ ಆಯಿಲ್ ದರ ಬ್ಯಾರಲ್ಗೆ 58ರಿಂದ 65 ಡಾಲರ್ ಆದರೂ ತೈಲ ಬೆಲೆ ಕಡಿಮೆಯಾಗಿಲ್ಲ. ರಾಜ್ಯದ 1 ರೂ. ಜಿಎಸ್ಟಿಗೆ ಕೇಂದ್ರದಿಂದ 15 ಪೈಸೆ ಮಾತ್ರ ಮರುಪಾವತಿಯಾಗುತ್ತಿದೆ. ನನ್ನ ಆತ್ಮೀಯ ಮಿತ್ರ ಬ್ರಿಜೇಶ್ ಚೌಟರೇ ನೀವು ಜನರ ನಂಬಿಕೆ ಉಳಿಸಿ ಆದರೆ ನಂಬಿಕೆ ದ್ರೋಹ ಎಸಗಬೇಡಿ. ಕೇಂದ್ರದ ಸವಲತ್ತುಗಳನ್ನು ಕೊಡಿಸಿ. ಸುರತ್ಕಲ್ ನಂತೂರು ರಸ್ತೆ ಗುಂಡಿ ಬಿದ್ದಿದ್ದು ಅದಕ್ಕೆ 28 ಕೋಟಿ ರೂ ಹಣ ಬಿಡುಗಡೆಯಾದ್ರೂ ಕೆಲಸ ಆಗಿಲ್ಲ. ಮೊದಲು ಅದನ್ನು ಸರಿಪಡಿಸಿ. ಅದು ಬಿಟ್ಟು 15 ಸಲ ಬಜೆಟ್ ಮಂಡಿಸಿದ ಸಿಎಂ ಬಗ್ಗೆ ಜೋಕರ್ ತರ ಮಾತಾಡ್ಬೇಡಿ ಎಂದು ತಿರುಗೇಟು ನೀಡಿದರು.
ಪತ್ರಿಕಾ ಗೋಷ್ಠಿಯಲ್ಲಿ ಮುಖಂಡರಾದ ನವೀನ್ ಅಶ್ರಫ್, ಅಪ್ಪಿ, ಕೇಶವ ಮರೋಳಿ, ಲಾರೆನ್ಸ್, ಬಿ.ಎಲ್. ಪದ್ಮನಾಭ, ಸುಭೋದ್ ಆಳ್ವ ಮತ್ತಿತರರಿದ್ದರು.