ಪಾಟ್ನಾ: ‘ಕೇಂದ್ರದ ಎಲ್ಲಾ ಯೋಜನೆಗಳ ಲಾಭವನ್ನು ಮುಸ್ಲಿಮರು ಪಡೆಯುತ್ತಾರೆ. ಆದರೆ, ವೋಟ್ ಮಾತ್ರ ಹಾಕುವುದಿಲ್ಲ. ಇಂಥ ಜನರನ್ನು ನಮಕ್ ಹರಾಮ್ ಎಂದು ಕರೆಯಲಾಗುತ್ತದೆ. ನಾನು ಆ ಮೌಲ್ವಿ ಸಾಹೇಬರಿಗೆ ಹೇಳಿದೆ, ನಮಗೆ ನಮಕ್ ಹರಾಮ್ಗಳ ಮತ ಬೇಕಿಲ್ಲ’ ಹೀಗೆಂದು ವಾಗ್ದಾಳಿಗಳಿಗೆ ಹೆಸರಾಗಿರುವ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಬಿಹಾರ ಚುನಾವಣಾ ಪ್ರಚಾರದ ವೇಳೆ ವಿವಾದಾತ್ಮಕ ಎನಿಸುವ ಹೇಳಿಕೆ ನೀಡಿದ್ದಾರೆ.
‘ನಿಮಗೆ ಆಯುಷ್ಮಾನ್ ಭಾರತ್ ಕಾರ್ಡ್ ಇದೆಯಾ ಎಂದು ಮೌಲ್ವಿಯೊಬ್ಬರನ್ನು (ಮುಸ್ಲಿಂ ಧರ್ಮಗುರು) ಒಮ್ಮೆ ಕೇಳಿದೆ. ಅದಕ್ಕೆ ಅವರು ಹೌದೆಂದರು. ಈ ಕಾರ್ಡ್ಗಳನ್ನು ಹಿಂದೂ ಮತ್ತು ಮುಸ್ಲಿಮ್ ಎಂದು ನೋಡಿ ಕೊಡಲಾಯಿತೆ ಎಂದು ಕೇಳಿದೆ. ಇಲ್ಲ ಎಂದರು. ನೀವು ನನಗೆ ಮತ ಹಾಕಿದ್ದೀರಾ ಎಂದು ಕೇಳಿದೆ. ಹೌದು ಎಂದರು. ಖುದಾ (ದೇವರು) ಮೇಲೆ ಆಣೆ ಮಾಡಿ ಹೇಳಲು ತಿಳಿಸಿದೆ. ಅದಕ್ಕೆ ಅವರು ಇಲ್ಲ ಎಂದರು’ ಎಂದು ಬಿಹಾರದ ಬೇಗುಸರಾಯ್ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿರುವ ಗಿರಿರಾಜ್ ಸಿಂಗ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
‘ಬಿಹಾರದಲ್ಲಿ ಸಮಗ್ರ ಅಭಿವೃದ್ಧಿಗಾಗಿ ಎನ್ಡಿಎ ವ್ಯಾಪಕ ಮೂಲಸೌಕರ್ಯ ಯೋಜನೆಗಳನ್ನು ಹಮ್ಮಿಕೊಂಡರೂ ಮುಸ್ಲಿಮರು ಬಿಜೆಪಿಗೆ ಮತ ಹಾಕುವುದಿಲ್ಲ. ಈ ಅಭಿವೃದ್ಧಿ ಕಾರ್ಯಗಳನ್ನು ಎನ್ಡಿಎ ನಾಯಕರಿಗೆ ಮತ್ತು ಕಾರ್ಯಕರ್ತರಿಗೆ ಮಾತ್ರ ಅಲ್ಲ, ಸರ್ವಜನರಿಗೂ ಲಾಭವಾಗುವಂತೆ ಮಾಡಲಾಗುತ್ತದೆ. ಎನ್ಡಿಎ ಸರ್ಕಾರ ಸಮಾಜದ ಪ್ರತಿಯೊಂದು ಕ್ಷೇತ್ರಕ್ಕೂ ಕೆಲಸ ಮಾಡುತ್ತದೆ. ಆದರೆ ಮುಸ್ಲಿಮರು ಮಾತ್ರ ಬಿಜೆಪಿಗೆ ಮತ ಹಾಕುವುದಿಲ್ಲ’ ಎಂದು ಕೇಂದ್ರ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಹಾರ ರಾಜ್ಯದಲ್ಲಿ ಈ ವರ್ಷ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ನವೆಂಬರ್ 6 ಮತ್ತು 11ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ. ನವೆಂಬರ್ 14ರಂದು ಫಲಿತಾಂಶ ಪ್ರಕಟವಾಗಲಿದೆ. 243 ಸದಸ್ಯಬಲದ ಬಿಹಾರ ವಿಧಾನಸಭೆಯ ಅಧಿಕಾರ ಗದ್ದುಗೆ ಹಿಡಿಯಲು 122 ಸ್ಥಾನಗಳ ಅಗತ್ಯ ಇದೆ. ಸದ್ಯ ಅಲ್ಲಿ ಜೆಡಿಯು ಮತ್ತು ಬಿಜೆಪಿ ನೇತೃತ್ವದ ಸರ್ಕಾರ ಇದೆ. ಆರ್ಜೆಡಿ, ಕಾಂಗ್ರೆಸ್ ಮೊದಲಾದ ಪಕ್ಷಗಳು ಒಟ್ಟುಗೂಡಿ ಬಿಹಾರದಲ್ಲಿ ಅಧಿಕಾರದ ಗದ್ದುಗೆ ಹಿಡಿಯಲು ಪ್ರಯತ್ನಿಸುತ್ತಿವೆ.