ಹುಣಸೂರು: ಮೈಸೂರು – ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಜಡಗನಕೊಪ್ಪಲು ಗೇಟ್ ಬಳಿ ಸಿಮೆಂಟ್ ತುಂಬಿದ್ದ ಲಾರಿಗೆ ಕೇರಳ ಬಸ್ ಮುಖಾಮುಖಿ ಢಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು (ಅ.10) ಮುಂಜಾನೆ ನಡೆದಿದೆ.
ಕ್ಯಾಲಿಕಟ್ ನಿಂದ ಬೆಂಗಳೂರಿಗೆ ತೆರಳುತಿದ್ದ ಖಾಸಗಿ ಬಸ್ ಚಾಲಕ ಜಡಗನ ಕೊಪ್ಪಲು ಗೇಟ್ ಬಳಿಯ ಹೆದ್ದಾರಿಯಲ್ಲಿ ಬಿದ್ದಿದ್ದ ಮರದ ತುಂಡಿಗೆ ಢಿಕ್ಕಿ ಆಗುವುದನ್ನು ತಪ್ಪಿಸಲು ಹೋಗುವ ಭರದಲ್ಲಿ ಎದುರಿಗೆ ಬರುತ್ತಿದ್ದ ಸಿಮೆಂಟ್ ತುಂಬಿದ ಲಾರಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಲಾರಿಯಲ್ಲಿದ್ದ ಸಿಮೆಂಟ್ ಮೂಟೆಗಳು ರಸ್ತೆ ಮೇಲೆ ಬಿದ್ದಿದೆ. ಬಸ್ಸಿನ ಅರ್ಧ ಭಾಗ ನಜ್ಜುಗುಜ್ಜಾಗಿದೆ.
ಬಸ್ ಚಾಲಕ, ಕ್ಲೀನರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಸ್ ಚಾಲಕನ ಶವ ಲಾರಿ ಅಡಿಯಲ್ಲಿ ಸಿಲುಕಿದ್ದು, ಹಲವರಿಗೆ ಗಾಯಗಳಾಗಿದೆ. ಸಾವನ್ನಪ್ಪಿದವರು ವಯನಾಡು ಜಿಲ್ಲೆಯವರೆಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.
ಘಟನೆ ನಡೆದ ಬಳಿಕ ಮುಂಜಾನೆ 8 ಗಂಟೆಯವರೆವಿಗೂ ಸಂಚಾರ ಅಸ್ತವ್ಯಸ್ತ ಉಂಟಾಗಿದೆ. ಪೊಲೀಸರು ಬಂದು ಟ್ರಾಫಿಕ್ ಕ್ಲಿಯರ್ ಮಾಡಿದ್ದಾರೆ.