ಮಂಗಳೂರು: ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿ ನಿಷೇಧಿತ ಮಾದಕ ವಸ್ತುಗಳ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಸುಮಾರು 11 ಮಂದಿ ಕಾಲೇಜು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
ಸೆಪ್ಟೆಂಬರ್ 26 ರಂದು ಸಂಜೆ 7.45 ಕ್ಕೆ ರೌಂಡ್ಸ್ ಕರ್ತವ್ಯದಲ್ಲಿದ್ದ ಪೊಲೀಸರಾದ ಪುಟ್ಟರಾಮ್ ಸಿ.ಎಚ್. ಮತ್ತು ಮಲ್ಲಿಕ್ ಜಾನ್ ಅವರಿಗೆ, ಅತ್ತಾವರ ಕಾಪ್ರಿಗುಡ್ಡೆ ಮಸೀದಿ ಬಳಿಯ ಕಿಂಗ್ಸ್ ಕೋರ್ಟ್ ಅಪಾರ್ಟ್ಮೆಂಟ್ ಪ್ಲಾಟ್ ನಂ. G1 ರಲ್ಲಿ ಕೆಲವು ಯುವಕರು ಗಾಂಜಾ ಸಂಗ್ರಹಿಸಿಕೊಂಡಿರುವ ಖಚಿತ ಮಾಹಿತಿ ದೊರೆತಿತ್ತು.
ಮಂಗಳೂರು ದಕ್ಷಿಣ ಠಾಣೆಯ ಉಪನಿರೀಕ್ಷಕ ಶೀತಲ್ ಅಲಗೂರು ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಅದ್ವೈತ್ ಶ್ರೀಕಾಂತ್, ಮುಹಮ್ಮದ್ ಅಪ್ಸಿನ್, ಮುಹಮ್ಮದ್ ಸ್ವಾನೀದ್, ನಿಬಿನ್ ಟಿ ಕುರಿಯನ್, ಮುಹಮ್ಮದ್ ಕೆ.ಕೆ, ಮುಹಮ್ಮದ್ ಹನಾನ್, ಮುಹಮ್ಮದ್ ಶಾಮಿಲ್, ಅರುಣ್ ತೋಮಸ್, ಮುಹಮ್ಮದ್ ನಿಹಾಲ್ ಸಿ, ಮೊಹಮ್ಮದ್ ಜಾಸೀಲ್ ವಿ ಮತ್ತು ಸಿದಾನ್ ಪಿ ಬಂಧಿತರಾಗಿದ್ದಾರೆ. ಬಂಧಿತರು ಮಂಗಳೂರಿನ ಕಾಲೇಜುಗಳಲ್ಲಿ ದ್ವಿತೀಯ ವರ್ಷದ ಬಿಬಿಎ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಕಾರ್ಯಾಚರಣೆಯಲ್ಲಿ ಒಟ್ಟು 12 ಕೆ.ಜಿ. 264 ಗ್ರಾಂ ಗಾಂಜಾ (ಅಂದಾಜು ಮೌಲ್ಯ ರೂ. 2,45,280), 7 ಪ್ಯಾಕೇಟ್ಗಳು, 2 ಡಿಜಿಟಲ್ ತೂಕ ಮಾಪಕ (ರೂ. 2,000) ಹಾಗೂ 11 ಮೊಬೈಲ್ ಫೋನ್ಗಳು (ರೂ. 1,05,000) ಸೇರಿ ಒಟ್ಟು ರೂ. 3,52,280 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಂಗಳೂರು ಸೆಂಟ್ರಲ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಪ್ರತಾಪ್ ಸಿಂಗ್ ಥೋರಟ್ ಮಾರ್ಗದರ್ಶನದಲ್ಲಿ, ಮಂಗಳೂರು ದಕ್ಷಿಣ ಠಾಣಾ ನಿರೀಕ್ಷಕ ಗುರುರಾಜ್, ಉಪನಿರೀಕ್ಷಕರು ಶೀತಲ್ ಅಲಗೂರು ಹಾಗೂ ಮಾರುತಿ ಪಿ, ಮತ್ತು ಸಿಬ್ಬಂದಿ ತಂಡ ಈ ಕಾರ್ಯಾಚರಣೆ ಯಶಸ್ವಿಯಾಗಿ ನಡೆಸಿದ್ದಾರೆ ಎಂದು ಮಂಗಳೂರು ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.