ಬೆಂಗಳೂರು: ವ್ಯಾಪಾರದ ವಿಚಾರಕ್ಕೆ ಪಕ್ಕದ ಬಟ್ಟೆ ಅಂಗಡಿ ಮಾಲಿಕನ ಕೊಲೆಗೆ ಸುಪಾರಿ ನೀಡಿದ್ದ ಟೆಕ್ಸ್ ಟೈಲ್ಸ್ ಅಂಗಡಿ ಮಾಲಿಕನನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮುದ್ದಣ್ಣ ಲೇಔಟ್ ನಿವಾಸಿ ವೇನರಾಮ್ (43) ಬಂಧಿತ ಆರೋಪಿ. ಟೆಕ್ಸ್ ಟೈಲ್ಸ್ ಪಕ್ಕದ ಬಟ್ಟೆ ಅಂಗಡಿ ಮಾಲಿಕ ನೇಮರಾಮ್(42) 5 ಲಕ್ಷ ರೂ.ಗೆ ಸುಪಾರಿ ನೀಡಿದ್ದ ವ್ಯಕ್ತಿ. ಸುಪಾರಿ ಪಡೆದ ರಾಜಸ್ಥಾನ ಮೂಲದ ವಿನೋದ್ ಜಾಟ್ ಎಂಬಾತನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
ಬಾಗಲಗುಂಟೆಯ ಮುದ್ದಣ್ಣ ಲೇಔಟ್ ನ ಸಿಡೇದಹಳ್ಳಿಯಲ್ಲಿ ನೇಮರಾಮ್ ಹ್ಯಾಪಿ ಟೆಕ್ಸ್ಟೈಲ್ಸ್ ಎಂಬ ಬಟ್ಟೆ ಅಂಗಡಿ ಇಟ್ಟು ಕೊಂಡಿದ್ದು, ಪಕ್ಕದಲ್ಲೇ ಆರೋಪಿ ವೇನರಾಮ್ ಕೂಡ ಹೈ ಫ್ಯಾಷನ್ಸ್ ಟೆಕ್ಸ್ಟೈಲ್ಸ್ ಎಂಬ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದಾನೆ. ನೇಮರಾಮ್ ಅಂಗಡಿಯಲ್ಲಿ ಉತ್ತಮವಾಗಿ ವ್ಯಾಪಾರ ಆಗುತ್ತಿತ್ತು. ಹೀಗಾಗಿ ಆರೋಪಿ ವೇನರಾಮ್, ದೂರುದಾರ ನೇಮರಾಮ್ ಅಂಗಡಿಯಲ್ಲಿ ಕಳಪೆ ಗುಣಮಟ್ಟದ ಬಟ್ಟೆಗಳಿವೆ ಎಂದು ಅಪಪ್ರಚಾರ ಮಾಡುತ್ತಿದ್ದ ಆದರೂ ನೇಮರಾಮ್ ಸುಮ್ಮನಿದ್ದರು ಎಂದು ಪೊಲೀಸರು ಹೇಳಿದರು.
ಈ ಮಧ್ಯೆ ನೇಮರಾಮ್, ವೇನರಾಮ್ನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕೆಲಸಗಾರನಿಗೆ ಹೆಚ್ಚಿನ ಸಂಬಳ ಕೊಟ್ಟು ತನ್ನ ಅಂಗಡಿಗೆ ಸೇರಿಸಿಕೊಂಡಿದ್ದ. ಅದರಿಂದ ಕೋಪಗೊಂಡಿದ್ದ ಆರೋಪಿ, ರಾಜಸ್ಥಾನ ಮೂಲದ ವಿನೋದ್ ಜಾಟ್ ಎಂಬಾತನಿಗೆ ನೇಮರಾಮ್ನ ಹತ್ಯೆಗೆ 5 ಲಕ್ಷ ರೂ.ಗೆ ಸುಪಾರಿ ನೀಡಿದ್ದ. ಅದರಂತೆ ಆರೋಪಿಗಳು ಜುಲೈ 9ರಂದು ರಾತ್ರಿ ಅಂಗಡಿ ವ್ಯಾಪಾರ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ನೇಮರಾಮ್ ಮೇಲೆ ಎರಡು ಬೈಕ್ಗಳಲ್ಲಿ ಬಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಬಳಿಕ ಸ್ಥಳೀಯರ ನೆರವು ಪಡೆದು ಪ್ರಾಣ ಉಳಿಸಿಕೊಂಡು ಮನೆಗೆ ಹೋಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದರು.
ಈ ಮಧ್ಯೆ ವಿನೋದ್ ಜಾಟ್ ಆ.8ರಂದು ನೇಮರಾಮ್ಗೆ ಕರೆ ಮಾಡಿ, ನಿನ್ನ ಕೊಲೆಗೈಯಲು 4 ತಿಂಗಳಿಂದ ಸಂಚು ರೂಪಿಸಲಾಗಿದೆ. ವೇನರಾಮ್ ನನಗೆ 5 ಲಕ್ಷ ರೂ.ಗೆ ನಿನ್ನ ಹತ್ಯೆಗೆ ಸುಪಾರಿ ನೀಡಿದ್ದಾನೆ. ನಿನ್ನ ಮಕ್ಕಳನ್ನು ಅಪಹರಣಕ್ಕೂ ಸೂಚಿಸಿದ್ದಾನೆ ಎಂದಿದ್ದ. ಅಲ್ಲದೆ, ವೇನರಾಮ್ ಜತೆಗಿನ ವಾಟ್ಸ್ಆ್ಯಪ್ ಚಾಟ್ ಗಳನ್ನು ನೇಮರಾಮ್ಗೆ ಕಳುಹಿಸಿದ್ದ. ಈ ಮಾಹಿತಿಯನ್ನು ತನ್ನ ಸಂಬಂಧಿಕರಿಗೆ ತಿಳಿಸಿ, ಬಳಿಕ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.
ತಲೆಮರೆಸಿಕೊಂಡಿರುವ ರಾಜಸ್ಥಾನ ಮೂಲದ ವಿನೋದ್ ಜಾಟ್ಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.