ಬಂಟ್ವಾಳ : ಸುಳ್ಳು ದೂರು ನೀಡಿದ ಹಾಗೂ ಫೇಸ್ಬುಕ್ನಲ್ಲಿ ಸುಳ್ಳು ಸುದ್ದಿ ಹರಡಿದ ವ್ಯಕ್ತಿಗಳಿಬ್ಬರ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸಜೀಪ ಮುನ್ನೂರು ಗ್ರಾಮದ ನಂದಾವರ ನಿವಾಸಿ ಉಮ್ಮರ್ ಫಾರೂಕ್ (48) ನೀಡಿದ್ದ ದೂರು ಸುಳ್ಳು ಎಂದು ಪತ್ತೆಯಾಗಿರುವುದರಿಂದ ಪೊಲೀಸರು ಆತನ ವಿರುದ್ಧವೇ ಪ್ರಕರಣ ದಾಖಲಿಸಿದ್ದಾರೆ. ಇದಲ್ಲದೆ, ಈ ಕುರಿತು ಫೇಸ್ಬುಕ್ನಲ್ಲಿ ಸುಳ್ಳು ಸುದ್ದಿ ಹರಡಿದ ಇಬ್ಬರ ವಿರುದ್ಧವೂ ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮೂಲ ಮಾಹಿತಿ ಪ್ರಕಾರ, ಜೂನ್ 13ರಂದು ಉಮ್ಮರ್ ಫಾರೂಕ್ ನೀಡಿದ ದೂರಿನ ಆಧಾರದ ಮೇಲೆ ಅ.ಕ್ರ 68/2025 ಅಡಿ ಪ್ರಕರಣ ದಾಖಲಾಗಿತ್ತು. ತನಿಖೆ ನಂತರ ದೂರು ಸುಳ್ಳು ಎಂದು ತೀರ್ಮಾನಿಸಿ ನ್ಯಾಯಾಲಯಕ್ಕೆ ʻಬಿ ಅಂತಿಮ ವರದಿʼ ಸಲ್ಲಿಸಲಾಗಿತ್ತು. ಆದರೆ ಸುಳ್ಳು ದೂರು ನೀಡಿದ್ದಕ್ಕಾಗಿ ಉಮ್ಮರ್ ಫಾರೂಕ್ ಮೇಲೆಯೇ ಅ.ಕ್ರ 128/2025 ಅಡಿ ಕಲಂ 192, 353(1)(B), 230(1), 248(A) BNS ಪ್ರಕರಣ ದಾಖಲಿಸಲಾಗಿದ್ದು, ಆತನು ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾನೆ.
ಇದರ ನಡುವೆ, ಅಶ್ರಫ್ ತಲಪಾಡಿ ತನ್ನ ಫೇಸ್ಬುಕ್ ಖಾತೆಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಸುದ್ದಿ ಹರಡಿರುವುದನ್ನು ಪೊಲೀಸರು ಪತ್ತೆಹಹಚ್ಚಿದ್ದಾರೆ. ಅಲ್ಲದೆ, ರಿಯಾಜ್ ಕಡಂಬು ಎಂಬಾತನು ಕೂಡ ತನಿಖೆಯಲ್ಲಿದ್ದ ವಿಷಯದ ನೋಟೀಸಿನ ಅರ್ಥ ತಿಳಿಯದೆ, ಸಂಬಂಧವಿಲ್ಲದ ಘಟನೆಗಳನ್ನು ಹೋಲಿಕೆ ಮಾಡಿ, ಧರ್ಮದ ಆಧಾರದಲ್ಲಿ ಸಂಬಂಧ ಕಲ್ಪಿಸಿ, ಪೊಲೀಸ್ ಇಲಾಖೆಯನ್ನು ಗುರಿಯಾಗಿಸಿಕೊಂಡು ಆಗಸ್ಟ್ 30ರಂದು ಫೇಸ್ಬುಕ್ನಲ್ಲಿ ತಪ್ಪು ಮಾಹಿತಿ ಪೋಸ್ಟ್ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.