ಸೆ.11: ಸಂತ ಮದರ್ ತೆರೇಸಾರವರ ನೆನಪಿನಲ್ಲಿ ಜಿಲ್ಲಾಮಟ್ಟದ ವಿಚಾರ ಸಂಕಿರಣ

ಮಂಗಳೂರು: ಸಂತ ಮದರ್ ತೆರೇಸಾ ವಿಚಾರ ವೇದಿಕೆ ಮರಿಗಳೂರು ಇದರ ಆಶ್ರಯದಲ್ಲಿ ʻಪ್ರೀತಿ ಹರಡಲಿ ಎಲ್ಲೆಡೆ’ ಎಂಬ ಘೋಷವಾಕ್ಯದೊಂದಿಗೆ ಮಾನವೀಯತೆಯ ಪ್ರತಿರೂಪ ಸಂತ ಮದರ್ ತೆರೇಸಾರವರ 28ನೇ ಸಂಸ್ಕರಣಾ ದಿನಾಚರಣೆಯ ಅಂಗವಾಗಿ ಸೆ.11ರಂದು ಗುರುವಾರ ಬೆಳಿಗ್ಗೆ 10ಕ್ಕೆ ನಗರದ ಕುದ್ಮುಲ್ ರಂಗರಾವ್ ಮರಭವನದಲ್ಲಿ ʻಸಹಬಾಳ್ವೆಗೆ ಎದುರಾಗಿರುವ ಅಪಾಯಗಳು, ಪ್ರಜಾಪ್ರಭುತ್ವದ ಮುಂದಿರುವ ಸವಾಲುಗಳು’ ಎಂಬ ವಿಷಯದಲ್ಲಿ ದ.ಕ. ಜಿಲ್ಲಾ ಮಟ್ಟದ ವಿಚಾರ ಸಂಕಿರಣವು ಜರುಗಲಿದೆ.

ವಿಚಾರ ಸಂಕಿರಣವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಇದರ ಅಧ್ಯಕರಾದ ಪ್ರೊ. ಪುರುಷೋತ್ತಮ ಬಿಳಿಮಲೆಯವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಾಡಿನ ಖ್ಯಾತ ಸಾಹಿತಿಗಳಾದ ಡಾ. ಕೆ. ಶರೀಫಾ ಹಾಗೂ ಮಂಗಳೂರು ಧರ್ಮಪ್ರಾಂತ್ಯದ ವಿಶ್ರಾಂತ ಧರ್ಮಾಧ್ಯಕ್ಷರಾದ ಅತೀ ವಂ. ಡಾ| ಎಲೋಶಿಯಸ್ ಪೌಲ್ ಡಿ’ಸೋಜರವರು ಭಾಗವಹಿಸಲಿದ್ದಾರೆ ಎಂದು ಸಂತ ಮದರ್ ತೆರೇಸಾ ವಿಚಾರ ವೇದಿಕೆಯ ಅಧ್ಯಕ್ಷರಾದ ರೋಯ್ ಕ್ಯಾಸ್ಟಲಿನೋ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು.

ಅಂದು ಬೆಳಿಗ್ಗೆ 8.30ಕ್ಕೆ ಏಕತಾರಿ ಹಾಡುಗಾರರಾದ ನಾದ ಮಣಿನಾಲ್ಕೂರುರವರಿಂದ ʻಪ್ರೀತಿಯ ಸಿಂಚನ’ ಎಂಬ ʻಸೌಹಾರ್ದ ಗಾಯನʼ ಕಾರ್ಯಕ್ರಮ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಅವಿಭಜಿತ ದ.ಕ. ಜಿಲ್ಲೆಯ ಮೂಲನಿವಾಸಿಗಳಾದ ಕೊರಗ ಸಮುದಾಯದ ಎಳಿಗೆಗಾಗಿ ಅವಿಶ್ರಾಂತವಾಗಿ ಶ್ರಮಿಸಿದ ಹಿರಿಯ ಚೇತನ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಜಿಲ್ಲಾ ನಾಯಕರಾದ ಹಾಗೂ ಡಾ. ಬಾಬು ಜಗಜೀವನ್ ರಾಮ್ ಪ್ರಶಸ್ತಿ ವಿಜೇತರಾದ ಕರಿಯ ಕೆ. ಇವರನ್ನು ಸಾರ್ವಜನಿಕವಾಗಿ ಸನ್ಮಾನಿಸಲಾಗುವುದು.

ಪ್ರೀತಿ ಮತ್ತು ಸೇವೆಯ ಮೂಲಕ ಜಗತ್ತಿಗೆ ಮಹಾತಾಯಿ ಎಂದು ಗುರುತಿಸಿಕೊಂಡಿರುವ ಸಂತ ಮದರ್ ತೆರೇಸಾರವರ ವಿಚಾರ ಧಾರೆಯನ್ನು ಇಂದಿನ ಯುವಪೀಳಿಗೆಗೆ ತಿಳಿಸಿಕೊಡುವ ಮಹತ್ತರ ಜವಾಬ್ದಾರಿ ಸಮಾಜದ ಮೇಲಿದೆ. ಕಳೆದ 8 ವರ್ಷಗಳ ಹಿಂದೆ ಆಸ್ತಿತ್ವಕ್ಕೆ ಬಂದ ಸಂತ ಮದ‌ರ್ ತೆರೇಸಾ ವಿಚಾರ ವೇದಿಕೆಯಲ್ಲಿ ಸರ್ವಧರ್ಮದ ಸೌಹಾರ್ದ ಪ್ರಿಯ ಜನತೆ, ವಿದ್ಯಾರ್ಥಿ, ಯುವಜನ, ಮಹಿಳಾ, ದಲಿತ, ಆದಿವಾಸಿ, ರೈತ, ಕಾರ್ಮಿಕ ಸಂಘಟನೆಗಳ ನಾಯಕರು, ಮಧ್ಯಮವರ್ಗದ ನೌಕರರು, ಸಾಹಿತಿಗಳು, ಪ್ರಗತಿಪರ ಚಿಂತಕರು, ಶಿಕ್ಷಣ ತಜ್ಞರು, ವಕೀಲರು, ವೈದ್ಯರು, ಬುದ್ದಿಜೀವಿಗಳನ್ನೊಳಗೊಂಡ ಜಾತ್ಯಾತೀತ ನೆಲೆಗಟ್ಟಿನ ಮನಸ್ಸುಗಳು ಸೌಹಾರ್ದ ತಂಡವಾಗಿ ವಿವಿಧ ಹಂತದ ಕಾರ್ಯಕ್ರಮಗಳನ್ನು ವರ್ಷವಿಡೀ ಆಯೋಜಿಸಲಾಗುತ್ತದೆ. ಪ್ರತಿಯೊಂದು ಧರ್ಮದ ಹಬ್ಬಗಳು ಸರ್ವಜನತೆಯ ಹಬ್ಬವಾಗಲಿ ಎಂಬ ಆಶಯದೊಂದಿಗೆ ಸೌಹಾರ್ದ ದೀಪಾವಳಿ, ಸೌಹಾರ್ದ ಕ್ರಿಸ್‌ಮಸ್, ಸೌಹಾದ್ ಇಫ್ತಾರ್ ಕೂಟ ಹಾಗೂ ನಾಡಹಬ್ಬ ದಸರಾವನ್ನು ಸಾಮರಸ್ಯ ದಸರವನ್ನಾಗಿ ಆಚರಿಸಲಾಗುತ್ತಿದೆ.

ಪತ್ರಿಕಾಗೋಷ್ಠಿಯಲ್ಲಿ ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ್‌ ಅಧ್ಯಕ್ಷ ಸಂತೋಷ್‌ ಡಿ’ಸೋಜ, ಸಂತ ಮದರ್ ತೆರೇಸಾ ವಿಚಾರ ವೇದಿಕೆ ಉಪಾಧ್ಯಕ್ಷ ಇಲಿಯಾಸ್ ಫೆರ್ನಾಂಡಿಸ್, ರೆಹಮಾನ್‌ ಖಾನ್‌ ಕುಂಜತ್ತಬೈಲ್,‌ ದಲಿತ ಸಂಘಟನೆಯ ಯುವನಾಯಕ ರಾಕೇಶ್‌ ಕುಂದರ್‌, ಮಂಜುಳಾ ನಾಯಕ್‌, ಸುಮತಿ ಎಸ್.‌ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

error: Content is protected !!