ಉಡುಪಿ: ಮಣಿಪಾಲ – ಅಲೆವೂರು ರಸ್ತೆಯ ಮಂಚಿ ಇಳಿಜಾರಿನ ತಿರುವಿನಲ್ಲಿ ಬೈಕ್ ಉರುಳಿ ಬಿದ್ದು ಸಹ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಶನಿವಾರ(ಸೆ.6) ತಡರಾತ್ರಿ ಸಂಭವಿಸಿದೆ.
ಕಟಪಾಡಿ ನಿವಾಸಿ ಮೋಹನ್ (33) ಮೃತಪಟ್ಟವರು. ಬೈಕ್ ಸವಾರ ಪ್ರದೀಪ್ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ಅವರು ಶನಿವಾರ ತಡರಾತ್ರಿ ಕಾಪುವಿನಿಂದ ಮಣಿಪಾಲ ಕಡೆಗೆ ಹೋಗಿ ಹಿಂದಿರುಗಿ ಬರುತ್ತಿದ್ದ ವೇಳೆ ಅವಘಡ ಸಂಭವಿಸಿತು. ನಿಯಂತ್ರಣ ತಪ್ಪಿದ ಬೈಕ್ ರಸ್ತೆಯಿಂದ ಕೆಳಗೆ ಜಾರಿ ಬಿದ್ದಿದೆ. ಮೋಹನ್ ಅವರು ಪೊದೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಮೃತಪಟ್ಟರು. ರವಿವಾರ ಬೆಳಗ್ಗಿನ ವರೆಗೆ ಈ ಘಟನೆ ಯಾರ ಅರಿವಿಗೆ ಬಂದಿರಲಿಲ್ಲ ಎನ್ನಲಾಗುತ್ತಿದೆ.
ವೆಲ್ಡಿಂಗ್ ವೃತ್ತಿ ಮಾಡಿಕೊಂಡಿದ್ದ ಮೋಹನ್ ಹೆತ್ತವರನ್ನು ಅಗಲಿದ್ದಾರೆ. ವರ್ಷದ ಹಿಂದೆಯಷ್ಟೇ ಅವರ ಸಹೋದರಿ ಅನಾರೋಗ್ಯದಿಂದ ಸಾವನ್ನಪ್ಪಿದ್ದಳು.