ಕೈ ಸರಕಾರದಿಂದ ಹಬ್ಬಗಳ ಆಚರಣೆಗೆ ಮನಸೋ-ಇಚ್ಛೆ ನಿಯಮ: ಚೌಟ ಖಂಡನೆ

ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವು ಪೊಲೀಸ್ ಇಲಾಖೆಯ ಮೂಲಕ ಹಬ್ಬಗಳ ಆಚರಣೆಗೆ ಮನಸೋ-ಇಚ್ಛೆ ನಿಯಮಗಳನ್ನು ಹೇರಿ ಹಿಂದೂಗಳ ಭಾವನೆಗಳನ್ನು ಘಾಸಿಗೊಳಿಸುವ ಹುನ್ನಾರ ಮಾಡುತ್ತಿದೆ ಎಂದು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಆರೋಪಿಸಿದ್ದಾರೆ.

ತುಳುನಾಡು ದೈವಾರಾಧನೆ, ಧಾರ್ಮಿಕ ಆಚರಣೆಗಳು, ಸಾಂಸ್ಕೃತಿಕ ಮುಂತಾದ ಶ್ರೀಮಂತ ಆಚರಣೆಗೆ ಹೆಸರುವಾಸಿಯಾಗಿದೆ. ಕೋಲ, ನೇಮ, ಯಕ್ಷಗಾನ, ಬ್ರಹ್ಮಕಲಶದಂಥ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತವೆ. ಆದರೆ, ಪೊಲೀಸರು ಇತ್ತೀಚೆಗೆ ಹಲವೆಡೆ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದಲ್ಲಿ ಧ್ವನಿವರ್ಧಕ ಬಳಕೆ ಮಾಡಿರುವುದಕ್ಕೆ ಆಯೋಜಕರು ಹಾಗೂ ಸೌಂಡ್ ಸಿಸ್ಟಮ್‌ನವರ ಮೇಲೆ ಪ್ರಕರಣ ದಾಖಲಿಸಿರುವುದು ನಿಜಕ್ಕೂ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಬ್ಬ-ಹರಿದಿನಗಳನ್ನು ಸಂತೋಷ, ಭಕ್ತಿ-ಭಾವದಿಂದ ಆಚರಿಸುತ್ತಿರಬೇಕಾದರೆ, ಪೊಲೀಸರಿಗೆ ಈ ರೀತಿ ಏಕಾಏಕಿ ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡುವ ರೀತಿಯ ನಿಯಮಗಳನ್ನು ರೂಪಿಸುವುದಕ್ಕೆ ನಿರ್ದೇಶನಗಳನ್ನು ಕೊಟ್ಟವರು ಯಾರು ಎಂದು ಪ್ರಶ್ನಿಸಿದ್ದಾರೆ.

ಪೊಲೀಸರು ಈಗಾಗಲೇ ಕೆಲವೆಡೆ ಧ್ವನಿವರ್ಧಕ ಮಾಲೀಕರ ಮೇಲೆ ಪ್ರಕರಣ ದಾಖಲಿಸುವುದು, ಅವರ ಸೌಂಡ್ ಸಿಸ್ಟಮ್ ವಶಪಡಿಸಿಕೊಂಡಿರುವ ಹಿನ್ನಲೆಯಲ್ಲಿ ಅವರೆಲ್ಲ ರೋಸಿ ಹೋಗಿದ್ದಾರೆ. ಅಲ್ಲದೆ, ಇನ್ನುಮುಂದೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಧ್ವನಿವರ್ಧಕ ಬಳಸುವುದಿಲ್ಲ ಎಂದು ಹೇಳಿದ್ದಾರೆ.

ಗೃಹ ಸಚಿವ ಪರಮೇಶ್ವರ್ ಅವರು ಈ ಹಿಂದೆ ಜಿಲ್ಲೆಗೆ ಬಂದಾಗಲೂ ಈ ವಿಚಾರದ ಬಗ್ಗೆ, ಇಲ್ಲಿನ ಆಚರಣೆಗಳ ಬಗ್ಗೆ ಮನವರಿಕೆ ಮಾಡಿ ಶಾಸಕರೊಡಗೂಡಿ ಈ ಬಗ್ಗೆ ಚರ್ಚೆ ನಡೆಸಿದ್ದೆವು. ಇಂದು ನಮ್ಮ ಭಾಗದ ಶಾಸಕರಾದ ಭರತ್ ಶೆಟ್ಟಿ, ವೇದವ್ಯಾಸ್ ಕಾಮತ್, ಹರೀಶ್ ಪೂಂಜಾ ಅವರು ಕೂಡ ಈ ಬಗ್ಗೆ ಸದನದಲ್ಲಿಯೂ ಧ್ವನಿಯೆತ್ತಿದ್ದಾರೆ. ಹಿಂದೂ ಸಮಾಜದ ಧಾರ್ಮಿಕ ಭಾವನೆಗಳನ್ನು ಗೌರವಿಸಿ, ಈ ಮೊದಲಿನಂತೆ ನಿರ್ಬಂಧಗಳಿಲ್ಲದೆ ಹಬ್ಬಗಳನ್ನು ಆಚರಿಸಲು ಅವಕಾಶ ನೀಡಬೇಕು. ಅದುಬಿಟ್ಟು, ಜನರ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಪ್ರಯತ್ನ ಮುಂದುವರಿಸಿದರೆ ಅದರಿಂದ ಉಂಟಾಗುವ ಪರಿಣಾಮಗಳಿಗೆ ಸಿದ್ದರಾಮಯ್ಯ ಸರಕಾರವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಚೌಟ ಎಚ್ಚರಿಸಿದ್ದಾರೆ.

ನೀವಿನ್ನು ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದರೆ ಈಗಲೇ ಡ್ರೀಮ್ ಡೀಲ್ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝

ಮಂಗಳೂರಿನಲ್ಲಿ ಮನೆ-ಫ್ಲ್ಯಾಟ್ ಖರೀದಿ, ಮಾರಾಟ ಮತ್ತು ಬಾಡಿಗೆಗೆ CITY PROPERTIES ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಬಳಸಿಕೊಳ್ಳಿ👇

error: Content is protected !!