ಮುಂಬೈ: ಕೆಫೆಯಲ್ಲಿ ಅಪ್ರಾಪ್ತ ಯುವತಿಯೊಂದಿಗೆ ಮಾತನಾಡಿದ್ದಕ್ಕೆ ಒಬ್ಬ ಯುವಕನನ್ನು ಹೊಡೆದು ಕೊಂದಿರುವ ಘಟನೆ ಮಹಾರಾಷ್ಟ್ರದ ಜಲಗಾಂವ್ನಲ್ಲಿ ನಡೆದಿದೆ. 21 ವರ್ಷದ ಸುಲೇಮಾನ್ ರಹೀಮ್ ಖಾನ್ ಕೊಲೆಯಾದ ಯುವಕ.
ಈತ ಕೆಫೆಯಲ್ಲಿ ಯುವತಿಯೊಂದಿಗೆ ಕಾಣಿಸಿಕೊಂಡಿದ್ದ. ಬಳಿಕ ಆತನನ್ನು ಥಳಿಸಿ ಕೊಲೆ ಮಾಡಲಾಗಿತ್ತು. ಈ ಘಟನೆ ಆ ಪ್ರದೇಶದಲ್ಲಿ ಕೆಲಕಾಲ ಉದ್ವಿಗ್ನತೆಯನ್ನು ಉಂಟು ಮಾಡಿತ್ತು. ಈ ಘಟನೆಗೆ ಸಂಬಂಧಿಸಿ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಎರಡು ದಿನಗಳ ಹಿಂದೆ ಸುಲೇಮಾನ್ ರಹೀಮ್ ಖಾನ್ ಎಂಬಾತ ಸ್ಥಳೀಯ ಕೆಫೆಯಲ್ಲಿ 17 ವರ್ಷದ ಯುವತಿಯ ಜತೆ ಮಾತನಾಡುತ್ತಿದ್ದ. ಇದನ್ನು ಗಮನಿಸಿದ ಕೆಲವು ಯುವಕರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಖಾನ್ ಮತ್ತು ಯುವಕರ ಗುಂಪಿನ ನಡುವೆ ವಾಗ್ವಾದ ಉಂಟಾಗಿದೆ. ಬಳಿಕ ಅವರು ಅವನನ್ನು ಹಿಂಬಾಲಿಸಿ ಬಂದು ದಾಳಿ ನಡೆಸಿದ್ದಾರೆ. ಇದರಿಂದ ಖಾನ್ ತಲೆಗೆ ತೀವ್ರ ಗಾಯವಾಗಿದ್ದು, ಕೂಡಲೇ ಮನೆಯವರು ಆತನನ್ನು ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆಯ ವೇಳೆ ಆತ ಸಾವನ್ನಪ್ಪಿದ್ದಾನೆ.
ಪೊಲೀಸ್ ನೇಮಕಾತಿಗೆ ಅರ್ಜಿ ಸಲ್ಲಿಸಲು ತಮ್ಮ ಮಗ ಜಾಮ್ನರ್ಗೆ ಹೋಗಿದ್ದ. ಮಗನನ್ನು ತುಂಬಾ ಕ್ರೂರವಾಗಿ ಥಳಿಸಿದ್ದಾರೆ. ಅವನ ದೇಹದಾದ್ಯಂತ ಗಾಯಗಳಿದ್ದವು ಎಂದು ಸುಲೇಮಾನ್ ತಂದೆ ತಿಳಿಸಿದ್ದಾರೆ. ಘಟನೆಯ ಬಳಿಕ ಜಾಮ್ನರ್ನಲ್ಲಿ ಉದ್ವಿಗ್ನತೆ ಉಂಟಾಗಿದ್ದು, ವದಂತಿಗಳನ್ನು ಹರಡದಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಸ್ಥಳದಲ್ಲಿ ಭಾರಿ ಭದ್ರತೆಯನ್ನು ನೀಡಲಾಗಿದೆ.
ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ನಾಲ್ವರು ಶಂಕಿತರನ್ನು ಬಂಧಿಸಲಾಗಿದೆ. ಇವರನ್ನು ಪೊಲೀಸ್ ಕಸ್ಟಡಿಯಲ್ಲಿ ಇರಿಸಲಾಗಿದ್ದು, ಇನ್ನೂ ಆರು ಮಂದಿ ತಲೆಮರೆಸಿಕೊಂಡಿದ್ದಾರೆ. ಪರಾರಿಯಾಗಿರುವ ಶಂಕಿತರನ್ನು ಪತ್ತೆಹಚ್ಚಲು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.