ಮಂಗಳೂರು: ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ 317ಡಿ ವತಿಯಿಂದ ಮೊಬೈಲ್ ಕಿಚನ್ ಹಾಗೂ ಲಯನ್ಸ್ ವೃಕ್ಷ ಬೀಜಾಂಕುರ ಎನ್ನುವ ಎರಡು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲೆಯ ರಾಜ್ಯಪಾಲ ಲಯನ್ ಕುಡ್ಪಿ ಅರವಿಂದ ಶೆಣೈ ಹೇಳಿದರು.
ಮಂಗಳೂರಿನ ಪ್ರೆಸ್ಕ್ಲಬ್ನಲ್ಲಿ ಮಾಹಿತಿ ನೀಡಿದ ಅವರು, ಮೊದಲ ಮೆಗಾ ಯೋಜನೆ ಅಡಿಯಲ್ಲಿ ಮೊಬೈಲ್ ಕಿಚನ್ ಎನ್ನುವ ಅಂದಾಜು ಮೊತ್ತ ರೂ.25 ಲಕ್ಷದ ಸೇವಾ ಯೋಜನೆಯನ್ನು ಹಮ್ಮಿಕೊಂಡಿದೆ. ಇದರಲ್ಲಿ ಎಲ್ಲಾ ಕ್ಲಬ್ ಗಳ ಹಾಗೂ ದಾನಿಗಳ ಸಹಕಾರದಿಂದ ಇಸ್ಕಾನ್ ವತಿಯಿಂದ ನಡೆಯುವ ಆಹಾರ ಸರಬರಾಜು ವ್ಯವಸ್ಥೆಗೆ ಮೊಬೈಲ್ ಕಿಚನ್ ನೀಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಯೋಜನೆ ಕ್ಯಾಬಿನೆಟ್ ಪದಗ್ರಹಣ ಸಮಾರಂಭದಲ್ಲಿ ಸಾಂಕೇತಿಕವಾಗಿ ಚಾಲನೆಗೊಳ್ಳಲಿದೆ ಎಂದರು.
ಎರಡನೇ ಮೆಗಾ ಯೋಜನೆ ʻಲಯನ್ಸ್ ವೃಕ್ಷ ಬೀಜಾಂಕುರ’ವು ಪರಿಸರ ಉಳಿಸುವ ಕಾರ್ಯಕ್ರಮ ಹಸಿರೇ ಉಸಿರು ಕಾರ್ಯಕ್ರಮವಾಗಿದೆ. ಪ್ರಾಥಮಿಕವಾಗಿ ಮುಡಿವು ಪರಿಸರದಲ್ಲಿ ಹಾಗೂ ಗುರುಪುರ ಕೈಕಂಬ ಪ್ರದೇಶದ ಹೆದ್ದಾರಿ ಬದಿಯಲ್ಲಿ 1000 ಗಿಡ ನೆಡುವ ಕಾರ್ಯಕ್ರಮವಾಗಿದೆ. ಇದರಲ್ಲಿ ಲಯನ್ಸ್ ಜಿಲ್ಲೆಯಲ್ಲಿ ಕನಿಷ್ಠ 10,000 ಕ್ಕಿಂತ ಮಿಕ್ಕಿ ದಾನಿಗಳ ಹಾಗೂ ಜಿಲ್ಲೆಯ ಸದಸ್ಯರ ಸಹಕಾರದಿಂದ ಪೂರ್ಣಗೊಳಿಸಲು ಈ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಪ್ರಥಮ ಚಾಲನೆಯು ಆಗಸ್ಟ್ 5ರಂದು ಸಂಘ ಸಂಸ್ಥೆಗಳ ಸಹಕಾರ ಹಾಗೂ ಲಯನ್ಸ್ ಸದಸ್ಯರ ಸಹಕಾರದೊಂದಿಗೆ ಮುಡಿವು ಪರಿಸರದಲ್ಲಿ ನಡೆಯಲಿರುವುದು ಎಂದು ಕುಡ್ಪಿ ಅರವಿಂದ ಶೆಣೈ ಎಂದು ನುಡಿದರು.
ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ 317D ಯು ಒಟ್ಟು ನಾಲ್ಕು ಕಂದಾಯ ಜಿಲ್ಲೆಗಳಾದ ದಕ್ಷಿಣ ಕನ್ನಡ, ಹಾಸನ, ಕೊಡಗು, ಚಿಕ್ಕಮಂಗಳೂರುನಲ್ಲಿ 120 ಕ್ಲಬ್ ಗಳನ್ನು ಒಳಗೊಂಡಿದೆ. ಲಯನ್ಸ್ ಮೋಟೋ “ವಿ ಸರ್ವ್” ಇದರ ಅಡಿಯಲ್ಲಿ ಅನೇಕ ಅರ್ಹ ಫಲಾನುಭವಿಗಳಿಗೆ ಲಯನ್ಸ್ ಜಿಲ್ಲೆ ಹಾಗೂ ಎಲ್ಲ ಕ್ಲಬ್ಗಳು ಒಳಗೊಂಡು ಪ್ರತಿವರ್ಷ ಕನಿಷ್ಠ ರೂ. 6 ಕೋಟಿಗಿಂತಲೂ ಹೆಚ್ಚಿನ ಸೇವೆಯನ್ನು ನೀಡುತ್ತಾ ಬಂದಿದೆ.. ಈ ವರ್ಷ ಬ್ಯೂಟಿಫುಲ್ ವರ್ಲ್ಡ್ (ಸುಂದರ ಪ್ರಪಂಚ)ಸೇವಾ ಹೆಸರಿನೊಂದಿಗೆ ರಕ್ತದಾನ, ಡ್ರಗ್ ಜಾಗೃತಿ, ಕ್ಯಾನ್ಸರ್, ಗಿಡ ಬೆಳೆಸುವುದು ಹೀಗೆ 13 ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ ಎಂದು ಅವರು ನುಡಿದರು.
ಆ.8ರಂದು ಶನಿವಾರ ಸಂಜೆ ಮಂಗಳೂರಿನ ಇಂಡಿಯಾನ ಕನ್ವೆನ್ಷನ್ ಸೆಂಟರ್ನಲ್ಲಿ ಲಯನ್ಸ್ ಜಿಲ್ಲಾ ಕ್ಯಾಬಿನೆಟ್ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ʻಅಭಿಲಾಷʼ ಅದ್ಧೂರಿಯಾಗಿ ನೆರವೇರಲಿದೆ. ಪದಗ್ರಹಣವನ್ನು ಮಾಜಿ ಅಂತಾರಾಷ್ಟ್ರೀಯ ನಿರ್ದೇಶಕ, ಲಯನ್ಸ್ ಕೌನ್ಸಿಲ್ ಆಫ್ ಇಂಡಿಯಾದ ಕಾರ್ಯದರ್ಶಿ ಪ್ರವೀಣ್ ಚಜ್ಜದ್ ನೆರವೇರಿಸಲಿದ್ದಾರೆ ಸಮಾರಂಭವನ್ನು ಜಿಲ್ಲಾ ಪುಥಮ ಲಯನ್ಸ್ ಮಹಿಳೆ ಮಮತಾ ಅರವಿಂದ ಶೆಣೈ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಅಂತಾರಾಷ್ಟ್ರೀಯ ನಿರ್ದೇಶಕರುಗಳಾದ ಕೆ. ವಂಶಿಧರ್ ಬಾಬು, ವಿ. ವಿ. ಕೃಷ್ಣ ರೆಡ್ಡಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ. ಎನ್. ರಾಜೇಂದ್ರ ಕುಮಾರ್, ಮಲ್ಟಿಪಲ್ ಕೌನ್ಸಿಲ್ ಚೇರ್ ಪರ್ಸನ್ ಮೋಹನ್ ಕುಮಾರ್ ಭಾಗವಹಿಸಲಿದ್ದಾರೆ. ಲಯನ್ಸ್ ಜಿಲ್ಲಾ ಡೈರೆಕ್ಟರಿಯನ್ನು ಪ್ರಥಮ ಉಪ ಜಿಲ್ಲಾ ಗವರ್ನರ್ ತಾರಾನಾಥ್ ಎಚ್. ಎಂ. ಬಿಡುಗಡೆಗೊಳಿಸಲಿದ್ದಾರೆ. ದ್ವಿತೀಯ ಉಪ ಜಿಲ್ಲಾ ಗವರ್ನರ್ ಕೆ. ಗೋವರ್ಧನ ಶೆಟ್ಟಿಯವರು ಶುಭಾಶಂಸನೆ ಮಾಡಲಿದ್ದಾರೆ. ಪದಗ್ರಹಣ ಸಮಿತಿ ಅಧ್ಯಕ್ಷ ಶ್ರೀಧರರಾಜ್ ಶೆಟ್ಟಿ, ಕಾರ್ಯದರ್ಶಿ ವಿಜಯ ವಿಷ್ಣು ಮಯ್ಯ, ಕೋಶಾಧಿಕಾರಿ ಜಯಪ್ರಕಾಶ್ ಬಿ., ಕ್ಯಾಬಿನೆಟ್ ಕಾರ್ಯದರ್ಶಿ ಚಂದ್ರೇಗೌಡ, ಆಡಿಷನಲ್ ಕ್ಯಾಬಿನೆಟ್ ಕಾರ್ಯದರ್ಶಿ ಚಂದ್ರಹಾಸ ರೈ, ಕ್ಯಾಬಿನೆಟ್ ಕೋಶಾಧಿಕಾರಿ ಬಾಲಕೃಷ್ಣ ಹೆಗ್ಡೆ, ಪಿಆರ್ಒ ಸುದರ್ಶನ್ ಪಡಿಯಾರ್, ಗವರ್ನರ್ ಕೋರ್ಡಿನೇಟರ್ ಜ್ಯೋತಿ ಶೆಟ್ಟಿ, ಕ್ಯಾಬಿನೆಟ್ ಕೋರ್ಡಿನೇಟರ್ ನ್ಯಾನ್ಸಿ ಮಸ್ಕರೇನಸ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಗವರ್ನರ್ ಲಯನ್ ಕುಡ್ಪಿ ಅರವಿಂದ ಶೆಣೈ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸುದರ್ಶನ್ ಪಡಿಯಾರ್, ಶ್ರೀಧರ್ ಶೆಟ್ಟಿ ಹರೀಶ್ ಆಳ್ವ, ಬಾಲಕೃಷ್ಣ ಶೆಟ್ಟಿ, ಜಯಪ್ರಕಾಶ್ ಉಪಸ್ಥಿತರಿದ್ದರು.