ಮಂಗಳೂರು: ಧರ್ಮಸ್ಥಳ ಕಾಡಿನಲ್ಲಿ ನಿಗೂಢ ಮನುಷ್ಯ ಸೂಚಿಸಿದ ಜಾಗದ ಪಾಯಿಂಟ್ ನಂಬರ್ ಒಂದರಲ್ಲಿ ಪತ್ತೆಯಾದ ಡೆಬಿಟ್ ಮತ್ತು ಪ್ಯಾನ್ ಕಾರ್ಡ್ನ ವಾರಸುದಾರರು ಪತ್ತೆಯಾಗಿದ್ದಾರೆ.
ಡೆಬಿಟ್ ಹಾಗೂ ಪಾನ್ ಕಾರ್ಡ್ ಬೆಂಗಳೂರು ಸಮೀಪದ ನೆಲಮಂಗಲ ತಾಲೂಕಿನ ದಾಬಸ್ಪೇಟೆ ನಿವಾಸಿಯಾಗಿದ್ದ ಸುರೇಶ್ ಮತ್ತು ಆತನ ತಾಯಿ ಸಿದ್ದಲಕ್ಷ್ಮಮ್ಮ ಎಂಬವರದ್ದು ಎಂದು ತನಿಖೆಯ ವೇಳೆ ತಿಳಿದು ಬಂದಿದೆ. ಅಲ್ಲದೆ ಧರ್ಮಸ್ಥಳದ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಸುರೇಶ್ ಕುಟುಂಬಿಕರು ಸ್ಪಷ್ಟಪಡಿಸಿದ್ದಾರೆ.
ದಾಬಸ್ಪೇಟೆಯ ನಿವಾಸಿಯಾದ ಗಂಗಮರಿಯಪ್ಪ ಹಾಗೂ ಸಿದ್ದಲಕ್ಷ್ಮಮ್ಮ ಎಂಬವರ ಪುತ್ರ ಸುರೇಶ್ ಪರ್ಸ್ನಲ್ಲಿ ಎರಡು ಪ್ಯಾನ್ ಕಾರ್ಡ್ಗಳಿದ್ದವು. ಒಂದು ಆತನದ್ದೇ ಪ್ಯಾನ್ ಕಾರ್ಡ್ ಆಗಿದ್ದರೆ ಮತ್ತೊಂದು ಇವರ ತಾಯಿ ಸಿದ್ದಲಕ್ಷ್ಮಮ್ಮರದ್ದು ಆಗಿತ್ತು. ಸುರೇಶ್ 2 ವರ್ಷಗಳ ಹಿಂದೆ ಮನೆ ಬಿಟ್ಟು ಧರ್ಮಸ್ಥಳಕ್ಕೆ ತೆರಳಿದಾಗ ಪ್ಯಾನ್ ಕಾರ್ಡ್ ಮಿಸ್ ಆಗಿದ್ದವು. ಮಾರ್ಚ್ ತಿಂಗಳಲ್ಲಿ ಜಾಂಡಿಸ್ನಿಂದಾಗಿ ಸುರೇಶ್ ಸಾವನ್ನಪ್ಪಿದ್ದರು. ಸಿದ್ದಲಕ್ಷ್ಮಮ್ಮ ಈಗಲೂ ಇದ್ದಾರೆ ಎಂದು ಸುರೇಶ್ ಕುಟುಂಬಸ್ಥರು ಪ್ರತಿಕ್ರಿಯೆ ನೀಡಿದ್ದಾರೆ.
ಅಕ್ಕ ಹೇಳಿದ್ದೇನು?
ಮೃತ ಸುರೇಶ್ ಅಕ್ಕ ರೂಪಾ ಮಾತನಾಡಿ, ತಮ್ಮ ಸಾಕಷ್ಟು ಬಾರಿ ಧರ್ಮಸ್ಥಳಕ್ಕೆ ಹೋಗುತ್ತಿದ್ದ. ಆಗ ಡೆಬಿಟ್ ಹಾಗೂ ಪಾನ್ ಕಾರ್ಡ್ ಧರ್ಮಸ್ಥಳದಲ್ಲಿ ಮಿಸ್ ಆಗಿರಬಹುದು. ಆಗ ಆತ ತಾಯಿಯ ಎಟಿಎಂ ಕಾರ್ಡ್ ಕಳೆದು ಹೋಗಿದೆ ಎಂದು ಹೇಳಿದ್ದ. ಹಾಗಾಗಿ ನಮ್ಮ ತಾಯಿ ಹೊಸ ಎಟಿಎಂ ಕಾರ್ಡ್ ತೆಗೆದುಕೊಂಡಿದ್ದರು. ಸುರೇಶ್ 2 ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ, 5 ತಿಂಗಳ ಹಿಂದೆ ಇಲ್ಲೇ ಮೃತಪಟ್ಟಿದ್ದರು. ಧರ್ಮಸ್ಥಳದ ವಿಚಾರಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.
ಅಮ್ಮ ಹೇಳಿದ್ದೇನು?
ಮೃತ ಸುರೇಶ್ ತಾಯಿ ಮಾತನಾಡಿ, ಅಲ್ಲಿ ಸಿಕ್ಕ ದಾಖಲೆಗಳು ನನ್ನದು ಹಾಗೂ ನನ್ನ ಮಗನದ್ದೇ ಆಗಿದೆ. ಈ ಹಿಂದೆ ಧರ್ಮಸ್ಥಳಕ್ಕೆ ಹೋದಾಗ ಕಳೆದು ಹೋಗಿದೆ ಎಂದು ಮಗ ಸುರೇಶ್ ಹೇಳಿದ್ದ. ಸುರೇಶ್ ಅನಾರೋಗ್ಯದಿಂದ ಮೃತ ಪಟ್ಟಿದ್ದಾನೆ. ನನ್ನ ಎಟಿಎಂ ಕಾರ್ಡ್ ಸುರೇಶ್ ಬಳಿ ಇತ್ತು, ಅಲ್ಲಿ ಹೋದಾಗ ಕಳೆದು ಹೋಗಿದೆ. ನೆಲಮಂಗಲ ತಾಲೂಕಿನ ದಾಬಸ್ ಪೇಟೆಯಲ್ಲಿ ಅನಾರೋಗ್ಯದಿಂದ ಮೃತ ಪಟ್ಟಿದ್ದಾನೆ. ಧರ್ಮಸ್ಥಳ ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.