ಮಣಿಪಾಲ: ವಿದ್ಯಾರ್ಥಿಗಳನ್ನು ಸಾಗಿಸುತ್ತಿದ್ದ ಟಿ.ಟಿ. ವಾಹನದ ಚಾಲಕ ಹೃದಯಾಘಾತದಿಂದ ಮೃತಪಟ್ಟ ಘಟನೆ ಮಣಿಪಾಲದ ಮಾರುಥಿ ವೀಥಿಕಾ ಎಂಬಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ಎದೆನೋವು ಕಾಣಿಸುತ್ತಿದ್ದಂತೆ ಚಾಲಕ ವಾಹನವನ್ನು ನಿಲ್ಲಿಸಿದ್ದರಿಂದ ಅವಘಡ ತಪ್ಪಿದೆ. ಮೃತ ಚಾಲಕ ಕಾರ್ಕಳ ನೀರೆ ಬೈಲೂರಿನ ಮೊಯ್ದಿನ್ ಬಾವ(65) ಎಂದು ತಿಳಿದುಬಂದಿದೆ.
ಘಟನೆಯ ವಿವರ: ಮೊಯ್ದಿನ್ ಬಾವ ಅವರು ಎಂದಿನಂತೆ ತನ್ನ ಟಿ.ಟಿ. ವಾಹನದಲ್ಲಿ ಪ್ರಗತಿನಗರದ ಕೇಂದ್ರ ವಿದ್ಯಾಲಯಕ್ಕೆ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದರು. ಈ ವೇಳೆ ಅವರಿಗೆ ಎದೆನೋವು ಕಾಣಿಸಿತ್ತು. ಇದೇ ಸಂದರ್ಭದಲ್ಲಿ ಮಾರುಥಿ ವೀಥಿಕಾದಲ್ಲಿ ನಡೆದು ಸಾಗುತ್ತಿದ್ದ ಸಮಾಜಸೇವಕ ನಿತ್ಯಾನಂದ ಒಳಕಾಡುವರನ್ನು ಕಂಡು, ಮೊಯ್ದೀನ್ ಬಾವಾ ವಾಹನ ನಿಲ್ಲಿಸಿ ಎದೆನೋವಿನ ವಿಚಾರವನ್ನು ಅವರಲ್ಲಿ ಹೇಳಿಕೊಂಡಿದ್ದರು.
ತಕ್ಷಣ ನಿತ್ಯಾನಂದ ಒಳಕಾಡು ಅವರು ಅಂಬುಲೆನ್ಸ್ ವಾಹನದಲ್ಲಿ ಚಾಲಕನನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಸಾಗಿಸಿದ್ದರು. ಆದರೆ ಅಷ್ಟರಲ್ಲಿ ಚಾಲಕ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.