ನವದೆಹಲಿ: ಮೂರು ತಿಂಗಳ ಹಿಂದೆ ಪಹಲ್ಗಾಂನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿ 26 ಮಂದಿಯ ಪ್ರಾಣ ಕಸಿದ ಮೂವರು ಶಂಕಿತ ಉಗ್ರರನ್ನು ಹೊಡೆದುರಳಿಸಲಾಗಿದೆ. ಅಂದಹಾಗೆ ಈ ಕಾರ್ಯಾಚರಣೆಗೆ ʻಆಪರೇಷನ್ ಮಹಾದೇವ್ʼ ಎಂದು ಹೆಸರಿಡಲಾಗಿದ್ದು, ಇದು ಯಶಸ್ವಿಯಾಗಿದೆ ಎಂದು ಸೇನೆ ಖಚಿತಪಡಿಸಿದೆ. ಎನ್ಕೌಂಟರ್ನಲ್ಲಿ ಫಿನಿಷ್ ಆದ ಉಗ್ರರು ಪಾಕಿಸ್ತಾನ ಮೂಲದವರು ಎಂದು ಭಾರತೀಯ ಸೇನೆ ಖಚಿತಪಡಿಸಿದೆ.
ಮೂವರು ಭಯೋತ್ಪಾದಕರು ಅಡಗಿರುವ ಖಚಿತ ಮಾಹಿತಿಯನ್ನು ಆಧರಿಸಿದ ಸೇನೆ, ಶ್ರೀನಗರದ ಲಿಡ್ವಾಸ್ನ ಸಾಮಾನ್ಯ ಪ್ರದೇಶದಲ್ಲಿ ಮೌಂಟ್ ಬಳಿ ಜೆ & ಕೆ ಪೊಲೀಸರು ಮತ್ತು ಸಿಆರ್ಪಿಎಫ್ ಸೇನೆ ಜಂಟಿ ಕಾರ್ಯಾಚರಣೆ ನಡೆಸಿ ಮೂವರನ್ನೂ ಎತ್ತಿಬಿಡಲಾಗಿದೆ.
ಮೌಂಟ್ ಮಹಾದೇವ್ ಬಳಿಯ ಲಿಡ್ವಾಸ್ ಪ್ರದೇಶದಲ್ಲಿ ಮೂವರು ವಿದೇಶಿ ಉಗ್ರರಿದ್ದಾರೆ ಎಂಬ ನಿರ್ದಿಷ್ಟ ಮಾಹಿತಿ ಸೇನೆಗೆ ಸಿಕ್ಕ ನಂತರ ಕಾರ್ಯಾಚರಣೆ ಆರಂಭವಾಯಿತು. ಎರಡು ದಿನಗಳ ಹಿಂದೆ ದಾಚಿಗಾಮ್ ಕಾಡಿನಲ್ಲಿ ಸೇನೆ ಪತ್ತೆ ಹಚ್ಚಿದ್ದ ಅನುಮಾನಾಸ್ಪದ ಸಂವಹನ ಸಂಕೇತದಿಂದ ಈ ಗುಪ್ತಚರ ಮಾಹಿತಿ ಬಂದಿತ್ತು. ಸ್ಥಳೀಯ ಅಲೆಮಾರಿಗಳು ಅನುಮಾನಸ್ಪದ ಚಟುವಟಿಕೆಗಳು ನಡೆಯುತ್ತಿರುವುದನ್ನು ಗಮನಿಸಿ ಈ ಪ್ರದೇಶದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳ ಇರುವಿಕೆಯ ಮಾಹಿತಿಯನ್ನು ಸೇನೆಗೆ ನೀಡಿದ್ದರು.
ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮತ್ತು ಸಿಆರ್ಪಿಎಫ್ ಜಂಟಿಯಾಗಿ ಆಪರೇಷನ್ ಮಹಾದೇವ್ ಹೆಸರಿನಲ್ಲಿ ಈ ಕಾರ್ಯಾಚರಣೆಯನ್ನು ನಡೆಸಿವೆ. ಕಾರ್ಯಾಚರಣೆಯ ಸಮಯದಲ್ಲಿ, ಉಗ್ರರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು ಆದರೆ ಸುತ್ತುವರಿಯಲ್ಪಟ್ಟರು. ಕೆಲ ಸಮಯ ಗುಂಡಿನ ಚಕಮಕಿಯ ನಂತರ, ಮೂವರನ್ನೂ ಹತ್ಯೆ ಮಾಡಲಾಯಿತು. ಆರಂಭಿಕ ಶೋಧದ ಸಮಯದಲ್ಲಿ ಎರಡು ಸುತ್ತು ಗುಂಡಿನ ಶಬ್ದ ಕೇಳಿಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭದ್ರತಾ ಪಡೆಗಳನ್ನು ತ್ವರಿತವಾಗಿ ಪ್ರದೇಶಕ್ಕೆ ಕಳುಹಿಸಲಾಯಿತು ಮತ್ತು ಶೋಧವನ್ನು ವಿಸ್ತರಿಸಲಾಯಿತು.