ಮಂಗಳೂರು: ಮೂಡಬಿದ್ರೆ ತಾಲೂಕು ತೆಂಕಮಿಜಾರು ಗ್ರಾಮ ಪಂಚಾಯತ್ನ ಪಿಡಿಒ ರೋಹಿಣಿ ಬಿ., ದ್ವಿತೀಯ ದರ್ಜೆ ಲೆಕ್ಕ ಸಹಾಯಕ ರಮೇಶ್ ಬಂಗೇರಾ ಮತ್ತು ಪಂಚಾಯತ್ ಸಿಬ್ಬಂದಿ ಸತೀಶ್ ಕರ್ತವ್ಯ ಲೋಪವೆಸಗಿ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಇವರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ಕೈಗೊಳ್ಳುವಂತೆ ತೆಂಕ ಮಿಜಾರು ಗ್ರಾಮ ಪಂಚಾಯತ್ ಸದಸ್ಯರು ಒತ್ತಾಯಿಸಿದ್ದಾರೆ.
ಮಂಗಳೂರಿನ ಪತ್ರಿಕಾಭವನದಲ್ಲಿ ಮಾತನಾಡಿದ ತೆಂಕ ಮಿಜಾರು ಗ್ರಾಮ ಪಂಚಾಯತ್ ಸದಸ್ಯೆ ಯೋಗಿನಿ, ಈ ಪಂಚಾಯತ್ನ 2023-24ನೇ ಸಾಲಿನ ಲೆಕ್ಕ ಪರಿಶೋಧನೆಯ ಅಧಿಕಾರಿಗಳ ವರದಿಯಲ್ಲಿ ಸುಮಾರು ರೂ. 1.81 ಲಕ್ಷದಷ್ಟು ಹಣದ ಕೊರತೆ ಕಂಡು ಬಂದರೂ ಇದುವರೆಗೆ ಪಂಚಾಯತ್ ಆಡಳಿತಕ್ಕೆ ಮಾಹಿತಿ ನೀಡಿಲ್ಲ. ಪಿಡಿಓ ಕೂಡ ದ್ವಿತೀಯ ದರ್ಜೆ ಸಹಾಯಕರಿಗೆ ಸೂಕ್ತ ನೋಟೀಸ್ ನೀಡದೇ, ಅದೇ ನೋಟೀಸನ್ನು ಪಂಪ್ ಆಪರೇಟರ್ಗೆ ನೀಡಿ ಎಲ್ಲ ಆರೋಪಗಳನ್ನು ಇವರ ಮೇಲೆ ಹೊರಿಸಿದ್ದಾರೆ. ಈ ಪ್ರಕರಣದಲ್ಲಿ ವಂಚಾಯತ್ ಅಭಿವೃದ್ಧಿ ಅಧಿಕಾರಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕ ಹಾಗೂ ಪಂಪ್ ಅಪರೇಟರ್ ನೇರವಾಗಿ ಅವ್ಯವಹಾರಗಳನ್ನು ಮಾಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಪಂಪ್ ಅಪರೇಟರ್ ನೋಟಿಸ್ ನೀಡಿದ ನಂತರದ 3 ತಿಂಗಳಿನಲ್ಲಿ ಸುಮಾರು 1.68. ಲಕ್ಷದಷ್ಟು ಹಣದ ಕೊರತೆ ಕಂಡುಬಂದಿದೆ. ಗ್ರಾ.ಪಂ. ನೀರಿನ ಸಮಿತಿಯ ವಸೂಲಾತಿ ಹಣ ದಿನವಹಿ ಪುಸ್ತಕದಲ್ಲಿ ನಮೂದಿಸಿರುವಂತೆ ಪಂಚಾಯತ್ ರಾಜ್ ಖಾತೆಗೆ ಜಮಾಯಾಗಿಲ್ಲ. ಪಂಚಾಯತ್ ನೀರು ಖಾತೆಯಲ್ಲಿ ಆದ ಅವ್ಯವಹಾರ ಬಗ್ಗೆ, ಪಿಡಿಓ ಗಮನಕ್ಕೆ ಬಂದಿದ್ದರೂ, 9/11 ಖಾತೆಗಳಿಗೆ ಸಂಬಂಧಿಸಿದ ಕೆಲಸದ ಜವಾಬ್ದಾರಿಯನ್ನು ಪಂಪ್ ಅಪರೇಟರ್ ಸತೀಶ್ಗೆ ನೀಡಿದ್ದಾರೆ. ಇದನ್ನು ಬಳಸಿಕೊಂಡ ಸತೀಶ್ ಕಲ್ಲಮೂಂಡೂರು ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಮಾಡಿದ ಸಾಲದ ವಿವರವನ್ನು 9/11 ಖಾತೆಯಲ್ಲಿ ಡೀಲೀಟ್ ಮಾಡಿಸಿ, ಅದೇ ಜಮೀನಿಗೆ ಸಂಬಂಧಿಸಿ ಬೆಂಜನಪದವು ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಸಾಲ ಮಾಡಿದ್ದಾರೆ.
ಮೇ 30ರ ಸಾಮಾನ್ಯ ಸಭೆಯಂದು ಕಲ್ಲಮುಂಡ್ಕೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧಿಕಾರಿಗಳು ಪಂಚಾಯತ್ ಕಚೇರಿಗೆ ಭೇಟಿ ನೀಡಿ 9/11 ಖಾತೆಯ ಪ್ರತಿ ಪಡೆದಿದ್ದರು. ಆಗ ಪಿಡಿಓ ಅವರು ಪಂಚಾಯತ್ನ ಸತೀಶ್ಗೆ ನೀಡಿದ ನೋಟೀಸ್ ಗಮನಿಸಿದಾಗ ಇದರಲ್ಲಿ ಕಲ್ಲಮುಂಡೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ದೃಢೀಕೃತ ಸಹಿ ಇಲ್ಲದೆ 9/11 ಖಾತೆಯಲ್ಲಿ ಡಿಲೀಟ್ ಮಾಡಿಸಿರುವುದು ಗಮನಕ್ಕೆ ಪಂಚಾಯತ್ ಸದಸ್ಯರ ಗಮನಕ್ಕೆ ಬಂದಿತು. ಇದಕ್ಕೆ ಇಲ್ಲಿನ ಪಿಡಿಓ ಪಂಚಾಯತ್ ಉದ್ಯೋಗಿ ಸತೀಶ್ಗೆ ಸಹಕರಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇದು ಕ್ರಿಮಿನಲ್ ಮೊಕದ್ದಮೆಯಾಗಿದ್ದು ಪ್ರಕರಣವು ಪಂಚಾಯತ್ ರಾಜ್ ವ್ಯವಸ್ಥೆ ಮೇಲೆ ಮತ್ತು ದಕ್ಷ ಅಧಿಕಾರಿಗಳ ಮೇಲೆ ಜನರಿಗೆ ಇರುವ ವಿಶ್ವಾಸಾರ್ಹತೆ ಕಳೆದುಕೊಳ್ಳುವಂತೆ ಮಾಡಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಅವರು ಮೇಲಧಿಕಾರಿಗಳನ್ನು ಒತ್ತಾಯಿಸಿದರು.
ತೆಂಕ ಮಿಜಾರು ಗ್ರಾಮ ಪಂಚಾಯತ್ ಸದಸ್ಯರಾದ ದಿನೇಶ್ ಕೆ., ಲಿಂಗಪ್ಪ ಗೌಡ ಉಪಸ್ಥಿತರಿದ್ದರು.