ದಕ್ಷಿಣ ಕನ್ನಡದಲ್ಲಿ ಸೌಹಾರ್ದತೆ, ಶಾಂತಿ ಮರುಸ್ಥಾಪನೆಗೆ ಪ್ರತಿ ತಾಲೂಕಿನಲ್ಲಿ ಸಮಿತಿ ರಚನೆ

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸೌಹಾರ್ದತೆ, ಶಾಂತಿಯ ವಾತಾವರಣ ಮರುಸ್ಥಾಪನೆ ಕಾರ್ಯದಲ್ಲಿ ಸಂಬಂಧಿಸಿದ ಜಿಲ್ಲಾಡಳಿತ ಜತೆ ಸಹಕರಿಸಲು ಪ್ರತೀ ತಾಲೂಕುಗಳಲ್ಲಿ ತಲಾ 8- 10 ಸದಸ್ಯರ ಸಮಿತಿ ರಚಿಸಲು ಜಯಶ್ರೀಕೃಷ್ಣ ಪರಿಸರ ಪೇಮಿ ಸಮಿತಿ ತೀರ್ಮಾನಿಸಿದೆ.

 

ಮುಂದಿನ ಆರು ತಿಂಗಳಲ್ಲಿ ಸಮಿತಿ ರಚನೆ ಪ್ರಕ್ರಿಯೆ ಪೂರ್ಣ ಸ್ವರೂಪ ಪಡೆದುಕೊಳ್ಳಲಿದೆ. ಗೃಹ ಸಚಿವ ಜಿ. ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಸ್ಪೆಷಲ್ ಆ್ಯಕ್ಷನ್ ಫೋರ್ಸ್ (ಎಸ್‌ಎಎಫ್) ಸ್ಥಾಪಿಸಿರುವ ಸರ್ಕಾರದ ಕ್ರಮ ಸ್ವಾಗತಾರ್ಹ ಎಂದು ಮಂಗಳೂರು ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪರಿಸರ ಪೇಮಿ ಸಮಿತಿ ಸ್ಥಾಪಕ ತೋನ್ಸೆ ಜಯಕೃಷ್ಣ ಎ.ಶೆಟ್ಟಿ ಹೇಳಿದರು.

ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ಯುವ ಜನಾಂಗದ ಉಜ್ವಲ ಭವಿಷ್ಯ ರೂಪಿಸುವ ಉದ್ದೇಶದಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೌಹಾರ್ದತೆ, ಶಾಂತಿಯ ವಾತಾವರಣ ಮರುಸ್ಥಾಪಿಸುವಂತೆ ಗೃಹಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು, ಮಂಗಳೂರು ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಅವರು ಒತ್ತಾಯಿಸಿದರು.

ಕಳೆದ ಕೆಲವು ವರ್ಷಗಳಿಂದ ಜಿಲ್ಲೆಯ ಸೌಹಾರ್ದತೆಯ ವಾತಾವರಣಕ್ಕೆ ಧಕ್ಕೆಯಾಗಿದೆ. ಕೇವಲ 25 ರಷ್ಟು ಜನರಿಂದ ಇಡೀ ಜಿಲ್ಲೆಯ ನೆಮ್ಮದಿಯ ಜೀವನಕ್ಕೆ ಸಮಸ್ಯೆಯಾಗಿದೆ. ಅಮಾಯಕರ ಹತ್ಯೆ ನಡೆದಿದೆ. ಕೆಲವು ಮನೆಗಳಲ್ಲಿ ಇದ್ದ ಓರ್ವ ಮಗನನ್ನು ಕೂಡ ಪೋಷಕರು ಕಳೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಹಣ ಹೂಡಲು ಕಂಪನಿಗಳು ಹಿಂಜರಿಯುತ್ತಿವೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಅವಿಭಜಿತ ಜಿಲ್ಲೆಯ ಜನರು ಧರ್ಮ ಬೇಧವಿಲ್ಲದೆ ಅನ್ಯೋನತೆಯಿಂದ ಬಾಳಿದವರು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಹರಡುವವರು, ದ್ವೇಷ ಭಾಷಣಗಳು ಅಶಾಂತಿಗೆ ಕಾರಣವಾಗುತ್ತಿದ್ದು, ನಮ್ಮ ರಾಜಕೀಯೇತರ ಸಂಘಟನೆಯ ಮೂಲಕ ಶಾಂತಿ ಸ್ಥಾಪಿಸಲು ಕ್ರಮ ವಹಿಸಲಾಗುವುದು ಎಂದು ಸಮಿತಿಯ ರಾಜ್ಯ ಸಂಯೋಜಕ ಕೆ.ಪಿ. ಜಗದೀಶ್ ಅಧಿಕಾರಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಜಿಲ್ಲಾ ಅಧ್ಯಕ್ಷ ಹರೀಶ್ ಕುಮಾರ್ ಎಂ. ಶೆಟ್ಟಿ, ಜಡಿಲ್ಲಾ ಉಪಾಧ್ಯಕ್ಷರಾದ ಅನುಪ್ರಕಾಶ್ ಶೆಟ್ಟಿ, ನಾಗೇಶ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿಗಳಾದ ಸುರೇಂದ್ರ ಮೆಂಡನ್,ಜಿ.ಟಿ. ಆಚಾರ್ಯ, ಸದಸ್ಯರಾದ ಶಂಕರ್ ಸುವರ್ಣ ಉಪಸ್ಥಿತರಿದ್ದರು.

 

ನೀವಿನ್ನೂ ಡ್ರೀಮ್ ಡೀಲ್ ಗ್ರೂಪ್ ಸೇರಿಲ್ಲವೇ? ಹಾಗಾದ್ರೆ ಈಗಲೇ ಗ್ರೂಪ್ ಜಾಯಿನ್ ಆಗಿ ಖಚಿತ ಬಹುಮಾನಗಳನ್ನು ಗೆಲ್ಲಿರಿ🤝
https://chat.whatsapp.com/KNFvpivMSm9KnMzmbPMYGj

error: Content is protected !!