ʻಡಿ ಬಾಸ್‌ʼ ಬಂಧನಕ್ಕೆ 1 ವರ್ಷ!

ʻಡಿ ಬಾಸ್‌ʼ ಬಂಧನಕ್ಕೆ 1 ವರ್ಷ!2024ರ ಜೂನ್ 11ರಂದು ಅಭಿಮಾನಿಗಳ ಡಿʼ ಬಾಸ್‌ ಎಂದೇ ಹೆಸರು ಪಡೆದಿರುವ ನಟ ದರ್ಶನ್ ತೂಗುದೀಪ ಅವರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದರು. ಇದೇ ಪ್ರಕರಣದಲ್ಲಿ ದರ್ಶನ್‌ ಗೆಳತಿ ಪವಿತ್ರಾ ಗೌಡ ಸೇರಿದಂತೆ 13 ಜನರನ್ನು ಪೊಲೀಸರು ಬಂಧಿಸಿದ್ದರು. ಇಂದು ಘಟನೆಗೆ 1 ವರ್ಷ ತುಂಬಿದೆ. ಚಿತ್ರದುರ್ಗದ ರೇಣುಕಾಸ್ವಾಮಿ ಎಂಬಾತ ಸೋಷಿಯಲ್‌ ಮೀಡಿಯಾದಲ್ಲಿ ಪವಿತ್ರಾ ಗೌಡಗೆ ಕಿರುಕುಳ ನೀಡಿದ್ದ. ಇದರಿಂದ ರೊಚ್ಚಿಗೆದ್ದಿದ್ದ ದರ್ಶನ್‌ ಮತ್ತಾತನ ಟೀಂ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆಸಿ, ಪಟ್ಟಣಗೆರೆಯ ಶೆಡ್‌ನಲ್ಲಿ ಮಾರಣಾಂತಿಕವಾಗಿ ಹಲ್ಲೆಗೈದು ಕೊಲೆ ಮಾಡಿದ್ದ.
ಕೊಲೆಯಾದ ಬಳಿಕ ರೇಣುಕಾಸ್ವಾಮಿ ಶವವನ್ನು ಮೋರಿಯ ಬಳಿ ಎಸೆಯಲಾಗಿತ್ತು. ಪ್ರಕರಣ ದಾಖಲಾಗುತ್ತಲೇ ದರ್ಶನ್ ಗ್ಯಾಂಗ್‌ನ ಕೆಲವರು ಪೊಲೀಸರಿಗೆ ಶರಣಾಗಿ ಹಣದ ವಿಚಾರಕ್ಕೆ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದರು. ಆದರೆ ಪೊಲೀಸರು ಮತ್ತಷ್ಟು ತನಿಖೆ ನಡೆಸಿದಾಗ ದರ್ಶನ್‌ ಸ್ನೇಹಿತೆ ಪವಿತ್ರಾ ಗೌಡಳಿಗಾಗಿ ಕೊಲೆ ನಡೆದಿದ್ದು ಘಟನಾಸ್ಥಳದಲ್ಲಿ ದರ್ಶನ್‌ ಹಾಗೂ ಪವಿತ್ರಾ ಗೌಡ ಇಬ್ಬರೂ ಇದ್ದಿದ್ದಾಗಿ ಒಪ್ಪಿಕೊಂಡಿದ್ದರು.
ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಎ1 ಆರೋಪಿಯಾಗಿದ್ದರೆ, ದರ್ಶನ್ ಎ2 ಆರೋಪಿಯಾಗಿದ್ದರು. ಒಟ್ಟು 17 ಆರೋಪಿಗಳ ವಿರುದ್ಧ ದೋಷಾರೋಪಣೆ ದಾಖಲಾಗಿತ್ತು. ಜೂನ್ 11ರಂದು 13 ಜನರ ಬಂಧನವಾದರೆ, ಉಳಿದ ನಾಲ್ವರನ್ನು ನಂತರ ಬಂಧಿಸಲಾಯಿತು. ದರ್ಶನ್‌ರನ್ನು ಆರಂಭದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿತ್ತು. ಆದರೆ, ಅವರು ಜೈಲಿನಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವ ವಿಚಾರ ತಿಳಿದ ಬಳಿಕ, ಅವರನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಯಿತು. 2024ರ ಡಿಸೆಂಬರ್ 13ರಂದು ದರ್ಶನ್ ಸೇರಿದಂತೆ ಏಳು ಜನರಿಗೆ ಜಾಮೀನು ದೊರೆತಿತ್ತು. ಸದ್ಯ, 17 ಆರೋಪಿಗಳೂ ಜಾಮೀನಿನ ಮೇಲೆ ಹೊರಗಿದ್ದಾರೆ. ಆದರೆ, ಏಳು ಆರೋಪಿಗಳ ಜಾಮೀನನ್ನು ಪೊಲೀಸರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ಇತ್ತೀಚೆಗೆ ಡೆವಿಲ್‌ ಸಿನಿಮಾ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ಹೋಗಲು ದರ್ಶನ್‌ ಗೆ ಕೋರ್ಟ್‌ ಅನುಮತಿಯನ್ನೂ ನೀಡಿದೆ.

error: Content is protected !!