ಮಂಗಳೂರು: ಆಕಸ್ಮಿಕವಾಗಿ ಉಟ್ಟ ಬಟ್ಟೆಗೆ ಬೆಂಕಿ ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟ ಮಹಿಳೆ ಮೇರಿಹಿಲ್ ಗುರುನಗರದ ಸರೋಜಿನಿ (64) ಎಂದು ತಿಳಿದು ಬಂದಿದೆ. ರಕ್ಷಿಸಲು ಮುಂದಾದ ಪುತ್ರ ಅಕ್ಷಯ್ (20) ಗೂ ಬೆಂಕಿಯಿಂದ ಸುಟ್ಟ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಪೋಸ್ಟ್ ಮಾಸ್ಟರ್ ಆಗಿ ಕೆಲಸ ಮಾಡುತ್ತಿದ್ದ ಮಹಿಳೆಯ ಗಂಡ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಆ ಬಳಿಕ ಮಹಿಳೆ ಮಾನಸಿಕ ಅಸ್ವಸ್ಥತೆಗೆ ಒಳಗಾಗಿದ್ದರು. ಮಹಿಳೆ ಮನೆಯಲ್ಲಿ ನಿರಂತರವಾಗಿ ಶಕ್ತಿ ದೇವತೆಗಳ ಆರಾಧನೆ ಮಾಡುತ್ತಿದ್ದರು. ಅದರಂತೆ ಮಂಗಳವಾರ ರಾತ್ರಿ ವೇಳೆ ಆರಾಧನೆ ಮಾಡುತ್ತಿದ್ದ ವೇಳೆ ಬಟ್ಟೆಗೆ ಬೆಂಕಿ ತಗುಲಿದೆ. ಈ ಸಂದರ್ಭ ಪುತ್ರ ಆಕೆಯನ್ನು ರಕ್ಷಿಸಲು ಮುಂದಾಗಿದ್ದು, ಆತನಿಗೂ ಬೆಂಕಿಯಿಂದ ಸುಟ್ಟ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಷಯ ತಿಳಿದ ನೆರೆಹೊರೆಯವರು ಮನೆಗೆ ಧಾವಿಸಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.
ಈ ಕುರಿತು ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.