ಬೆಂಗಳೂರು: ಪತ್ನಿ ಮತ್ತು ಬಾಯ್ ಫ್ರೆಂಡ್ ನ ಅಕ್ರಮ ಸಂಬಂಧ ಕಣ್ಣಾರೆ ಕಂಡ ಪತಿರಾಯ ಆಕೆಯ ರುಂಡ ಕಡಿದು ಬೈಕ್ನಲ್ಲೇ ಹಿಡಿದುಕೊಂಡು ಸೂರ್ಯನಗರ ಠಾಣೆಗೆ ಬಂದು ಸರೆಂಡರ್ ಆಗಿರುವ ಘಟನೆ ಬೆಳಕಿಗೆ ಬಂದಿದೆ.
ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಹೀಲಲಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹೆನ್ನಾಗರ ನಿವಾಸಿ 28 ವರ್ಷದ ಶಂಕರ್ ಎಂಬಾತ ಪತ್ನಿಯ ರುಂಡ ಕಡಿದು ಪೊಲೀಸ್ ವಶವಾಗಿದ್ದಾನೆ. ಶಂಕರ್ ಹಾಗೂ ಮಾನಸ ಪರಸ್ಪರ ಪ್ರೀತಿಸಿ 5 ವರ್ಷಗಳ ಹಿಂದೆ ಮದುವೆಯಾಗಿದ್ರು. ಈ ದಂಪತಿ ತಿಂಗಳ ಹಿಂದಷ್ಟೇ ಹೀಲಲಿಗೆ ಗ್ರಾಮದ ಬಾಡಿಗೆ ಮನೆಗೆ ಶಿಫ್ಟ್ ಆಗಿದ್ರು. ಜೂನ್ 3ರಂದು ರಾತ್ರಿ ಕೆಲಸ ನಿಮಿತ್ತ ಹೊರಗಡೆ ತೆರಳಿದ್ದ ಶಂಕರ್ ಮರುದಿನ ಬರುವುದಾಗಿ ಹೇಳಿದ್ದ. ಆದರೆ ಮನೆಯಲ್ಲಿ ಹೆಂಡತಿ ಒಬ್ಬಳೇ ಇರುತ್ತಾಳೆ ಎಂದು ತಡರಾತ್ರಿಯೇ ಮನೆಗೆ ಬಂದಿದ್ದ. ಈ ವೇಳೆ ಪತ್ನಿ ರೆಡ್ ಹ್ಯಾಂಡ್ ಆಗಿ ಬಾಯ್ ಫ್ರೆಂಡ್ ಜೊತೆ ಸಿಕ್ಕಿಬಿದ್ದಿದ್ದು ಶಂಕರ್ ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾನೆ. ಬಳಿಕ ಆಕೆಯನ್ನು ಬಾಯ್ ಫ್ರೆಂಡ್ ಜೊತೆಯೇ ಕಳುಹಿಸಿದ್ದಾನೆ. ಆದ್ರೆ ಪತ್ನಿ ಮತ್ತೆ ಮನೆಗೆ ಬಂದು ಗಂಡ ಶಂಕರ್ಗೆ ಕಿರಿಕಿರಿ ಮಾಡಿದ್ದಳೆನ್ನಲಾಗಿದೆ. ನಿನ್ನೆ ರಾತ್ರಿಯೂ ಗಲಾಟೆ ಮಾಡಿದ್ದು ಈ ವೇಳೆ ಕೋಪಗೊಂಡ ಶಂಕರ್ ಆಕೆಯ ತಲೆ ಕಡಿದು ಪೊಲೀಸರ್ ಠಾಣೆಗೆ ತಂದಿದ್ದಾನೆ. ದೂರು ದಾಖಲಾಗಿದ್ದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.