ಉಳ್ಳಾಲ: ದೇರಳಕಟ್ಟೆಯ ನಾಟೆಕಲ್ಲಿನ ಕಣಚೂರು ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜನ್ನು ಬಾಂಬ್ ಮೂಲಕ ಉಡಾಯಿಸುವುದಾಗಿ ಇಂದು ಬೆಳಗ್ಗೆ 11 ಗಂಟೆಗೆ ಅನಾಮಧೇಯ ಫೋನ್ ಕರೆ ಬಂದಿದ್ದು, ಎಲ್ಲರೂ ಬೆಚ್ಚಿಬೀಳುವಂತಾಯಿತು.
ಇಂದು ಬೆಳಗ್ಗೆ 8.15ರ ಹೊತ್ತಿಗೆ ಆಸ್ಪತ್ರೆಯ ಹೆರಿಗೆ ವಿಭಾಗದ ಲ್ಯಾಂಡ್ಲೈನಿಗೆ ಕರೆ ಬಂದಿದ್ದು, ಪಿಜಿ ವಿದ್ಯಾರ್ಥಿನಿಯೋರ್ವಳು ಕರೆಯನ್ನ ಸ್ವೀಕರಿಸಿದ್ದಳು. ಅತ್ತಲಿನಿಂದ ಇಂಗ್ಲೀಷಲ್ಲಿ ಮಾತನಾಡಿದ ವ್ಯಕ್ತಿಯೋರ್ವ ಬೆಳಗ್ಗೆ 11 ಗಂಟೆಗೆ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜನ್ನು ಬಾಂಬ್ ಮೂಲಕ ಉಡಾಯಿಸುತ್ತೇನೆ. ಎಲ್ಲರನ್ನು ಕೂಡಲೇ ಆಸ್ಪತ್ರೆಯಿಂದ ಹೊರಗೆ ಕಳುಹಿಸುವಂತೆ ಬೆದರಿಕೆ ಹಾಕಿದ್ದಾನೆ. ಇದೇ ರೀತಿ ನಾಲ್ಕೈದು ಬಾರಿ ಕರೆ ಮಾಡಿ ಕೊನೆಗೆ ಬ್ಯಾರಿ ಭಾಷೆಯಲ್ಲೂ ಬೆದರಿಕೆ ಹಾಕಿದ್ದಾನೆ.
ಹೆದರಿದ ಆಸ್ಪತ್ರೆ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದಲ್ಲದೆ, ಬಾಂಬು ನಿಷ್ಕ್ರಿಯ ದಳ ಮತ್ತು ಶ್ವಾನ ದಳವನ್ನ ಕರೆಸಿ ಇಡೀ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಕ್ಯಾಂಪಸ್ ಜಾಲಾಡಿದಾಗ ಏನೂ ಪತ್ತೆಯಾಗಲ್ಲಿಲ್ಲ. ಆದ ಕಾರಣ ಇದು ಹುಸಿ ಬಾಂಬು ಕರೆ ಎಂದು ಪೊಲೀಸರು ನಿರ್ಧಾರಕ್ಕೆ ಬಂದಿದ್ದಾರೆ.
ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕರೆ ಮಾಡಿದ ಭೂಪನ ನಂಬರ್ ಪತ್ತೆಹಚ್ಚಿ ಸೆರೆ ಹಿಡಿಯುವುದಾಗಿ ತಿಳಿಸಿದ್ದಾರೆ.