ಐಪಿಎಲ್‌ ಪಂದ್ಯಾಟದ ಕೆಲವೇ ಗಂಟೆಗಳ ಮುನ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸಿಲಿಂಡರ್‌ ಸ್ಫೋಟ

ಅಹಮದಾಬಾದ್: ಐಪಿಎಲ್ ಫೈನಲ್ ಪಂದ್ಯ ನಡೆಯಲು ಇನ್ನೇನು ಕೆಲವೇ ಗಂಟೆಗಳು ಬಾಕಿಯಿರುವಾಗಲೇ ನರೇಂದ್ರ ಮೋದಿ ಕ್ರೀಡಾಂಗಣದ ಹೊರಗೆ ಸಿಲಿಂಡರ್ ಸ್ಫೋಟಗೊಂಡಿದೆ.

ಇಂದು ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ತಂಡದ ನಡುವೆ ಜಿದ್ದಾಜಿದ್ದಿನ ಹೋರಾಟ ನಡೆಯಲಿದ್ದು, ಈ ಸಲವಾದ್ರೂ ಕಪ್‌ ನಮ್ದಾಗುತ್ತಾ ಅಂತ ಆರ್‌ಸಿಬಿ ಅಭಿಮಾನಿಗಳು ಕಾತರಿಂದ ಕಾಯುತ್ತಿದ್ದಾರೆ. ಈ ನಡುವೆ ಸಿಲಿಂಡರ್‌ ಸ್ಫೋಟಗೊಂಡಿದ್ದರೂ ಪಂದ್ಯಾಟ ನಿಗದಿಪಡಿಸಿದಂತೆ ನಡೆಯಲಿದೆ ಎಂದು ಬಿಸಿಸಿಐ ಹೇಳಿದೆ.

ಸ್ಟೇಡಿಯಂನ ಗೇಟ್ ನಂಬರ್ 1ರ ಬಳಿ ಘಟನೆ ನಡೆದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟನೆಯಿಂದ ಕೆಲಹೊತ್ತು ಆತಂಕ ಮನೆಮಾಡಿತ್ತು. ಘಟನೆ ನಡೆದ ತಕ್ಷಣವೇ ಬೆಂಕಿಯನ್ನು ನಂದಿಸಲಾಯಿತು. ಕ್ರೀಡಾಂಗಣದ ಹೊರಗಿನ ಫುಟ್‌ಪಾತ್‌ನಲ್ಲಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವವರ ನಿರ್ಲಕ್ಷ್ಯದಿಂದಾಗಿ ಸಿಲಿಂಡರ್ ಸ್ಫೋಟಗೊಂಡಿರಬಹುದು ಎಂದು ಶಂಕಿಸಲಾಗಿದೆ.

ಫೈನಲ್ ಪಂದ್ಯಕ್ಕೂ ಮುನ್ನ ಅದ್ಧೂರಿ ಸಮಾರೋಪ ಸಮಾರಂಭ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ. ಆಪರೇಷನ್ ಸಿಂಧೂರಕ್ಕೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಸಮಾರಂಭವನ್ನು ಭಾರತೀಯ ಸೇನೆಗೆ ಸಮರ್ಪಿಸಲಾಗುತ್ತದೆ. ಖ್ಯಾತ ಗಾಯಕ ಶಂಕರ್ ಮಹದೇವನ್ ಸೇರಿದಂತೆ ಅನೇಕರು ಪ್ರದರ್ಶನ ನೀಡಲಿದ್ದಾರೆ. ಆರ್‌ಸಿಬಿ ತಂಡ 4ನೇ ಬಾರಿಗೆ ಫೈನಲ್ ಪ್ರವೇಶಿಸಿದೆ. ಈ ಮೊದಲು 2009, 2011 ಹಾಗೂ 2016ರಲ್ಲಿ ಫೈನಲ್ ಪ್ರವೇಶಿಸಿದ್ದರೂ ಕಪ್ ಗೆದ್ದಿರಲಿಲ್ಲ. ಇದೀಗ ಮತ್ತೆ ಫೈನಲ್ ಪ್ರವೇಶಿಸಿದ್ದು, ಪಂಜಾಬ್ ಜೊತೆ ಸೆಣಸಾಡಲಿದೆ. ಈ ರೋಚಕ ಪಂದ್ಯ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

error: Content is protected !!