ಮಳಲಿ: ಮಂಗಳೂರು ತಾಲೂಕಿನ ಮಳಲಿ(ಮಣೇಲ್) ದೇವರಗುಡ್ಡೆಯ ಪುರಾತನ ಶ್ರೀ ಸೂರ್ಯನಾರಾಯಣ ದೇವಸ್ಥಾನದ ಜೀರ್ಣೋದ್ದಾರಕ್ಕೆ, ಪೊಳಲಿ ಶ್ರೀ ಸುಬ್ರಮಣ್ಯ ತಂತ್ರಿಯವರ ಪೌರೋಹಿತ್ಯದಲ್ಲಿ ಮೇ 30ರ ಶುಕ್ರವಾರ ಬೆಳಿಗ್ಗೆ 8:23ಕ್ಕೆ ಮಿಥುನ ಲಗ್ನ ಸುಮುಹೂರ್ತದಲ್ಲಿ ಶಿಲಾನ್ಯಾಸ ನಡೆಯಿತು.
ಆಶೀರ್ವಚನ ನೀಡಿದ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ತುಳು ನಾಡು ದೈವದೇವರನ್ನು ನಂಬಿಕೊಂಡು ಆರಾಧಿಸಿಕೊಂಡು ಬಂದ ನಾಡು. ಮಳಲಿ ದೇವರಗುಡ್ಡೆಯ ಪುರಾತನ ದೇವಸ್ಥಾನ ನಶಿಸಿ ಹೋದರೂ ಈಗ ಎಲ್ಲರೂ ಸೇರಿ ಜೀರ್ಣೋದ್ದಾರದ ಮಹಾಕಾರ್ಯಕ್ಕೆ ಮುಂದಾಗಿರುವುದು ಸಂತಸದ ವಿಚಾರ. ಇಂತಹ ಪುಣ್ಯಕಾರ್ಯದಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿದೆ, ಆದ್ದರಿಂದ ನಾವೆಲ್ಲರೂ ಒಟ್ಟಾಗಿ ಜಾತಿ, ಮತ, ಭೇದ ಮರೆತು ಜೀರ್ಣೋದ್ದಾರ ಕಾರ್ಯದಲ್ಲಿ ಕೈ ಜೋಡಿಸೋಣ ಎಂದರು.
ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಗಂಜಿಮಠ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ ಯಂ., ಸಮಿತಿಯ ಅಧ್ಯಕ್ಷ ಭಾಸ್ಕರ ಕುಲಾಲ್, ಸಂಚಾಲಕ ಭಾಸ್ಕರ ಭಟ್, ಉದಯಕುಮಾರ್ ಆಳ್ವ ಉಳಿಪಾಡಿ ಗುತ್ತು, ಪ್ರೇಮಚಂದ್ರ ನಾಯಕ್, ರಾಮಚಂದ್ರ ಅತಿಕಾರಿಬೆಟ್ಟು, ಪದ್ಮನಾಭ ದೇವರಗುಡ್ಡೆ, ಮೋಹನ ದೇವರ ಗುಡ್ಡೆ ಭಕ್ತಾದಿಗಳು ಉಪಸ್ಥಿತರಿದ್ದರು.
ದೇವಸ್ಥಾನದ ಶಿಲಾನ್ಯಾಸದ ಮುಂಚಿನ ಐದು ದಿನಗಳ ಕಾಲ ಶ್ರೀದೇವರ ಸಾನಿಧ್ಯ ವೃದ್ಧಿಗಾಗಿ ವಿವಿಧ ತಂಡಗಳಿಂದ ಭಜನೆ ನಡೆಯಿತು.