ಮಂಗಳೂರು: ವಾಮಂಜೂರು ಕೆತ್ತಿಕಲ್ ಗುಡ್ಡವನ್ನು ಅಗೆದು ರಾಷ್ಟ್ರೀಯ ಹೆದ್ದಾರಿ 169 ಅನ್ನು ಅಗಲ ಮಾಡಲಾಗುತ್ತಿದೆ. ಈ ನಡುವೆ ಗುಡ್ಡ ಕುಸಿಯದಂತೆ ನಿರ್ಮಿಸಿದ್ದ ತಡೆಗೋಡೆ ಜೋರು ಮಳೆಯ ಪರಿಣಾಮ ಜಾರಿದ್ದು, ಗುಡ್ಡ ಕುಸಿಯುವ ಭೀತಿ ಎದುರಾಗಿದೆ.
ಕಳೆದ ವರ್ಷ ಕೆತ್ತಿಕಲ್ ಗುಡ್ಡವನ್ನು ಅವೈಜ್ಞಾನಿಕವಾಗಿ ಅಗೆದು ರಸ್ತೆ ಅಗಲ ಮಾಡಲಾಗಿತ್ತು. ಇದರಿಂದ ಗುಡ್ಡ ಕುಸಿಯುವ ಭೀತಿ ಎದುರಾಗಿತ್ತು. ಕಳೆದ ವರ್ಷ ಮಳೆಗಾಲದಲ್ಲಿ ಗುಡ್ಡ ಕುಸಿಯುವ ಹಂತ ತಲುಪಿದ್ದು, ಅಲ್ಲಲ್ಲಿ ರಮಣೀಯ ಜಲಪಾತಗಳು ಉಂಟಾಗಿದ್ದವು.
ಈ ಹಿನ್ನೆಲೆಯಲ್ಲಿ ಗುಡ್ಡ ಕುಸಿಯದಂತೆ ಕಬ್ಬಿಣದ ತಡೆಬೇಲಿ ನಿರ್ಮಿಸಿ ಕಾಂಕ್ರಿಟ್ ಸುರಿಯಲಾಗುತ್ತು. ಅದು ಉರುಳಿ ಬೀಳದಂತೆ ದೊಡ್ಡ ದೊಡ್ಡ ಮೊಳೆಗಳನ್ನು ಜಡಿಯಲಾಗಿತ್ತು. ಈ ಬಾರಿ ಏನೂ ಆಗುವುದಿಲ್ಲ ಎಂದು ಮಳೆಗೆ ಸವಾಲು ಹಾಕಿದ್ದ ಹೆದ್ದಾರಿ ಇಲಾಖೆಗೆ ಸೆಡ್ಡು ಹೊಡೆಯುವಂತೆ ಈ ಬಾರಿ ಅಷ್ಟು ಭದ್ರವಾಗಿ ಅಳವಡಿಸಿದ್ದ ತಡೆಗೋಡೆಯೇ ಜಾರಿ ಬಿದ್ದಿದೆ.
ಇದರಿಂದ ಇದಕ್ಕೆ ವಿಯೋಗಿಸಿದ್ದ ಕೋಟಿಗಟ್ಟಲೆ ಹಣ ನೀರಿಗೆ ಹೋಮ ಮಾಡಿದಂತಾಗಿದೆ.