ಮಂಗಳೂರು: ಬಂಟ್ವಾಳ ತಾಲೂಕಿನ ಕೊಳತ್ತಮಜಲು ಎಂಬಲ್ಲಿ ನಡೆದಿರುವ ಅಬ್ದುಲ್ ರಹೀಂ ಎಂಬ ಅಮಾಯಕ ಕೂಲಿ ಕಾರ್ಮಿಕನನ್ನು ದುಷ್ಕರ್ಮಿಗಳು ಹತ್ಯೆಗೈದಿರುವುದು ರಾಜ್ಯ ಸರಕಾರ, ಗೃಹ ಇಲಾಖೆ ಮತ್ತು ಪೊಲೀಸ್ ಇಲಾಖೆಗಳ ಸಂಪೂರ್ಣ ನಿಷ್ಕ್ರಿಯತೆಗೆ ಉದಾಹರಣೆಯಾಗಿದೆ ಎಂದು ಎಸ್.ಕೆ.ಎಸ್.ಎಸ್.ಎಫ್ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಅನೀಸ್ ಕೌಸರಿ ಪತ್ರಿಕಾಗೋಷ್ಟಿಯಲ್ಲಿ ಆರೋಪಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಸೌಹಾರ್ದತೆ ನಶಿಸುತ್ತಿದೆ. ವಿವಿಧ ಧರ್ಮಗಳ ಜನರ ಮಧ್ಯೆ ದ್ವೇಷ ಹರಡುವ ಕೆಲಸವಾಗುತ್ತಿದೆ. ಸರಕಾರ, ಗೃಹ ಇಲಾಖೆಗೆ ಎಲ್ಲಾ ಗೊತ್ತಿದ್ದೂ ಪ್ರತಿಭಟನೆ, ಪ್ರಚೋದನಕಾರಿ ಭಾಷಣಕ್ಕೆ ಅವಕಾಶ ನೀಡುವ ಮೂಲಕ ಇಂತ ಅಮಾನುಷ ಕೃತ್ಯಗಳಿಗೆ ಕಾರಣವಾಗುತ್ತಿದೆ. ರಹೀಮ್ ಹತ್ಯೆಯಲ್ಲಿ ಯಾರೇ ಭಾಗಿಯಾಗಿರಲಿ ಅವರನ್ನು ಪೊಲೀಸರು ಕೂಡಲೇ ಬಂಧಿಸಬೇಕು ಅವರ ಜೊತೆ ದ್ವೇಷ ಭಾಷಣ ಮಾಡುವವರನ್ನು ಕೂಡಾ ಬಂಧಿಸಬೇಕು ಎಂದರು.
ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಎಲ್ಲಾ ಧರ್ಮಗಳ ನಾಯಕರು ಒಂದಾಗಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಯಾರೋ ಒಬ್ಬರು ಮಾಡಿದ ತಪ್ಪಿಗೆ ಶಾಂತಿಯುತ ಸಮಾಜ ಬಲಿಯಾಗುವುದು ನಿಲ್ಲಬೇಕು. ರಾಜ್ಯ ಸರಕಾರ ನಿಷ್ಕ್ರಿಯವಾಗಿದ್ದು ಇನ್ನಾದರೂ ಇದಕ್ಕೆಲ್ಲ ಅಂತಿಮ ಚುಕ್ಕಿ ಇಡಲು ಮುಂದಾಗಬೇಕು ಎಂದರು.
ಮೃತ ರಹೀಮ್ ಕುಟುಂಬಕ್ಕೆ ರಾಜ್ಯ ಸರಕಾರ 50 ಲಕ್ಷ ರೂ. ಪರಿಹಾರ ಕೊಡಬೇಕು, ಅವನ ಜೊತೆಗಿದ್ದ ಖಲಂದರ್ ಎನ್ನುವ ಯುವಕನಿಗೂ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು ಕೊಲೆಯಿಂದ ಪಾರಾಗಿದ್ದಾನೆ. ದ.ಕ ಜಿಲ್ಲೆಯಲ್ಲಿ ಕೋಮು ಪ್ರೇರಿತ ಕೊಲೆಗಳ ಸರಣಿ ಮುಂದುವರಿಯುತ್ತಿದ್ದು ಇದು ಸಾರ್ವಜನಿಕರನ್ನು ಭಯಭೀತರಾಗಿಸಿದೆ. ಜನ ಸಾಮಾನ್ಯರ ವಿಶೇಷವಾಗಿ ದಿನಕೂಲಿ ಕೆಲಸ ಮಾಡಿ ಬದುಕುವವರ ಬದುಕಿನ ದಾರಿಯನ್ನು ಇದು ಕಸಿಯುತ್ತಿದೆ.
ಕಾನೂನಿನ ಭಯವಿಲ್ಲದೆ ಕೋಮುವಾದಿ ಶಕ್ತಿಗಳು ನಿರಂತರ ದ್ವೇಷ ಭಾಷಣಗಳನ್ನು ನಡೆಸುತ್ತಿರುವುದರ ಪರಿಣಾಮ ಫಲವಾಗಿ ರಹೀಮನ ಹತ್ಯೆ ನಡೆದಿದೆ. ಈ ದುಷ್ಕೃತ್ಯದ ಕೊಲೆಗಾರರು ಮತ್ತು ಸಂಚು ರೂಪಿಸಿದವರು ಮತ್ತು ಪ್ರಚೋದನಕಾರಿ ಭಾಷಣ ನಡೆಸಿದವರನ್ನು ಅತಿ ಕ್ಷಿಪ್ರವಾಗಿ ಬಂಧಿಸಿ ಕಠಿಣ ಶಿಕ್ಷೆ ಜಾರಿಗೊಳಿಸಬೇಕು. ಇಲ್ಲದಿದ್ದರೆ SKSSF ಸಂಘಟನೆಯು ಜಿಲ್ಲೆಯಾದ್ಯಂತ ಉಗ್ರ ಪ್ರತಿಭಟನೆಯನ್ನು ನಡೆಸಲಿದೆ ಎಂದು ಹೇಳಿದರು.
ಮೃತ ಅಬ್ದುಲ್ ರಹೀಂ ಜಾತ್ಯಾತೀತ ತತ್ವವನ್ನು ಅಳವಡಿಸಿಕೊಂಡು ಬದುಕಿದಂತಹ ವ್ಯಕ್ತಿಯಾಗಿದ್ದು ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾದವನಲ್ಲ. ದಕ್ಷಿಣ ಕನ್ನಡ ಜಿಲ್ಲೆಯ 500 ರಷ್ಟು ಮೊಹಲ್ಲಾ ಗಳಿಗೆ ನೇತೃತ್ವ ನೀಡುತ್ತಿರುವ SKSSF ಎನ್ನುವ ಧಾರ್ಮಿಕ ಯುವಜನ ಸಂಘಟನೆಯ ಕಾರ್ಯಕರ್ತ ಮತ್ತು ಸ್ಥಳೀಯ ಮೊಹಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ನಿರ್ವಹಿಸುತ್ತಿದ್ದ. ಜೊತೆಗೆ ತನ್ನ ಪಾಡಿಗೆ ದುಡಿದು ಕುಟುಂಬ ಸಾಕುತ್ತಿದ್ದ. ಎಲ್ಲಾ ಧರ್ಮೀಯರೊಂದಿಗೆ ಸೌಹಾರ್ದಯುತ ಸಂಬಂಧ ಹೊಂದಿದ್ದ ಅಮಾಯಕ ಅಬ್ದುಲ್ ರಹೀಂ ಕುಟುಂಬಕ್ಕೆ ಸರ್ಕಾರದ ವತಿಯಿಂದ 50 ಲಕ್ಷ ರೂ. ಪರಿಹಾರ ಧನ ತಕ್ಷಣ ಮಂಜೂರು ಮಾಡಬೇಕಾಗಿಯೂ ಈ ಮೂಲಕ ಸರಕಾರವನ್ನು ಆಗ್ರಹಿಸುತ್ತಿದ್ದೇವೆ.
ಮೃತ ಅಬ್ದುಲ್ ರಹೀಂ ಸ್ಮರಣಾರ್ಥ ಜಿಲ್ಲೆಯ 100 ಕೇಂದ್ರಗಳಲ್ಲಿ ರಕ್ತದಾನ ಹಾಗೂ 300 ಶಾಖಾ ಕೇಂದ್ರಗಳಲ್ಲಿ ಪ್ರಾರ್ಥನಾ ಸಂಗಮ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ರಾಜ್ಯ ಸಮಿತಿ ಅಧ್ಯಕ್ಷ ರಫೀಖ್ ಅಹ್ಮದ್ ಹುದವಿ ಮುಪ್ತಿ, ಕೋಶಾಧಿಕಾರಿ ಸಯ್ಯದ್ ಅಮೀರ್ ತಂಜಳ್ ಕಿನ್ಯ, ಪ್ರ.ಕಾರ್ಯದರ್ಶಿ ಓ.ಪಿ.ಅಶ್ರಫ್, ಕಾರ್ಯಕಾರಿ ಸದಸ್ಯ ಖಾಸಿಂ ದಾರಿಮಿ, ರಿಯಾಜ್ ರಹ್ಮಾನಿ ಮತ್ತಿತರರು ಉಪಸ್ಥಿತರಿದ್ದರು.
ವಿಡಿಯೋ ವೀಕ್ಷಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ: