ಮಂಗಳೂರು: ಬಂಟ್ವಾಳ ತಾಲೂಕಿನ ಕುರಿಯಾಳ ಗ್ರಾಮದ ಈರಾಕೋಡಿ ಎಂಬಲ್ಲಿ ಕೊಳತ್ತಮಜಲು ಜುಮಾ ಮಸೀದಿ ಕಾರ್ಯದರ್ಶಿ, ಪಿಕಪ್ ಚಾಲಕ ಅಬ್ದುಲ್ ರಹ್ಮಾನ್( 32) ಹತ್ಯೆ ಮತ್ತು ಕಲಂದರ್ ಶಾಫಿ ಮೇಲಿನ ಕೊಲೆಯತ್ನ ಪ್ರಕರಣ ಖಂಡಿಸಿ ಇಂದು ಮಂಗಳೂರಿನಲ್ಲಿ ಅಘೋಷಿತ ಬಂದ್ ಉಂಟಾಗಿದ್ದು, ಬಸ್ ಸಂಚಾರ ವಿರಳಗೊಂಡಿದೆ.
ಸುರತ್ಕಲ್- ಮಂಗಳೂರು ಮಧ್ಯೆ ಸಂಚರಿಸುವ ಸಿಟಿ ಬಸ್ಗಳ ಸಂಚಾರ ಬಹುತೇಕ ಮೊಟಕುಗೊಂಡಿದ್ದು, 15 ನಂಬರ್ ಬಸ್ ಸಂಚಾರ ಸ್ಥಗಿತಗೊಂಡಿದೆ. ಇಂದು ಸುಮಾರು 9ರ ಸುಮಾರಿಗೆ ಸುರತ್ಕಲ್ ಸೂರಜ್ ಹೋಟೆಲ್ ಸಮೀಪ ಮಂಗಳೂರು- ಸುರತ್ಕಲ್- ಹಳೆಯಂಗಡಿ- ಕಿನ್ನಿಗೋಳಿ- ಕಟೀಲ್ಗೆ ಸಂಚರಿಸುವ ನಂದಿನಿ ಎನ್ನುವ ಬಸ್ಗೆ ಕಲ್ಲು ತೂರಾಟ ನಡೆಸಲಾಗಿತ್ತು. ಇದರ ಮುಂದುವರಿದ ಭಾಗವಾಗಿ ಸುರತ್ಕಲ್ನಲ್ಲಿ ಸಿಟಿ ಬಸ್ಗಳ ಸಂಚಾರಕ್ಕೆ ತಡೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಅಲ್ಲದೆ ಮಂಗಳೂರು ಸುರತ್ಕಲ್ ಕಾಟಿಪಳ್ಳಕ್ಕೆ ಸಂಚರಿಸುವ 15 ನಂಬರ್ನ ಬಸ್ ಸಂಚಾರವನ್ನು ನಿಲ್ಲಿಸಲಾಗಿದೆ. ಈ ಬಸ್ಸನ್ನೇ ನಂಬಿ ಸುರತ್ಕಲ್ನಿಂದ ಮಂಗಳೂರಿಗೆ ಬಂದ ನಾಗರಿಕರು ಕಂಗಾಲಾಗಿದ್ದು, ಮಂಗಳೂರಿನ ಅಲ್ಲಲ್ಲಿ ಬಸ್ಗಾಗಿ ಕಾಯುತ್ತಿದ್ದಾರೆ. ಮಂಗಳೂರಿನಿಂದ ಉಳಿದೆಡೆಗೆ ಸಂಚರಿಸುವ ಬಸ್ಗಳು ವಿರಳವಾಗಿದೆ. ಆದರೆ ಮಂಗಳೂರಿನಿಂದ ಸುರತ್ಕಲ್ ಮಾರ್ಗವಾಗಿ ಕಾರ್ಕಳ ಉಡುಪಿಗೆ ಬಸ್ಗಳು ಸಂಚರಿಸುತ್ತಿವೆ.
ಇನ್ನು ಬಿ.ಸಿ.ರೋಡ್ ನಿಂದ ಪೊಳಲಿ ಮಾರ್ಗವಾಗಿ ಗುರುಪುರ ಕೈಕಂಬ, ಮಂಗಳೂರು, ಬಜ್ಪೆ, ಕಟೀಲು, ಕಿನ್ನಿಗೋಳಿಗೆ ಸಂಚರಿಸುವ ಬಸ್ಗಳ ಸಂಚಾರ ಸ್ಥಗಿತಗೊಂಡಿದೆ. ಇಲ್ಲಿ ಬೆಳಗ್ಗಿನಿಂದಲೇ ಸಂಚಾರ ಸ್ಥಗಿತಗೊಂಡಿದ್ದು, ಸಾರ್ವಜನಿಕರು ತನ್ನ ಕೆಲಸವನ್ನು ಸ್ಥಗಿತಗೊಳಿಸಿ ಮನೆಯಲ್ಲಿಯೇ ಬಾಕಿಯಾಗಿದ್ದಾರೆ.
ಮಂಗಳೂರು ನಗರ- ಹೊರವಲಯ ವ್ಯಾಪ್ತಿಯಲ್ಲಿ ಬೆಳಿಗ್ಗೆ ಬಸ್ ಸಂಚಾರ ಎಂದಿನಂತೆಯೇ ಇತ್ತು. ಆದರೆ ಸುರತ್ಕಲ್ನಲ್ಲಿ ಬಸ್ಗೆ ಕಲ್ಲು ತೂರಾಟ ನಡೆದ ಬಳಿಕ ದಿಢೀರ್ ಇಷ್ಟೆಲ್ಲಾ ಬೆಳವಣಿಗೆಗಳು ನಡೆದಿದೆ. ಎಂದಿನಂತೆ ಇಂದೂ ಇರಬಹುದು, ಯಾವುದೇ ಬಂದ್ ನಡೆಯದು ಎಂಬ ನಿರೀಕ್ಷೆಯಲ್ಲಿ ಬಂದಿರುವ ಜನರು ಇದರಿಂದ ಕಂಗಾಲಾಗಿದ್ದಾರೆ. ಮುಂದೇನಾಗಬಹುದೆಂಬ ಆತಂಕದಿಂದಲೇ ದಿನ ದೂಡುತ್ತಿದ್ದಾರೆ.
ಅಬ್ದುಲ್ ರಹ್ಮಾನ್ ಹತ್ಯೆ ಪ್ರಕರಣಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಯಾವುದೇ ಸಂಘಟನೆ, ವಿವಾದದಲ್ಲಿ ಸಿಲುಕದ ಅಮಾಯಕ ವ್ಯಕ್ತಿಯನ್ನು ಕೊಲೆಗೈದಿರುವುದು ಜನತೆಯ ದುಃಖಕ್ಕೆ ಕಾರಣವಾಗಿದೆ. ಇದು ಹೀಗೆಯೇ ಮುಂದುವರಿದರೆ ಜನಸಾಮಾನ್ಯರ ಗತಿ ಏನು? ದಕ್ಷಿಣ ಕನ್ನಡ ಜಿಲ್ಲೆ ಎತ್ತ ಸಾಗುತ್ತಿದೆ? ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.