ಮುಂಬೈ: ಅಪಘಾತವಾಗಿದ್ದ ಕಾರನ್ನು ತೆರವು ಮಾಡುತ್ತಿದ್ದವರ ಮೇಲೆ ಟ್ರಕ್ ಹರಿದು ಆರು ಜನರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಿನ್ನೆ ರಾತ್ರಿ 11:30ರ ಸುಮಾರಿಗೆ ಸಂಭವಿಸಿದೆ.
ಸೋಮವಾರ ರಾತ್ರಿ 8:30ರ ಸುಮಾರಿಗೆ ದೀಪಕ್ ಅಟ್ಕರೆ ಚಲಾಯಿಸಿಕೊಂಡು ಹೋಗುತ್ತಿದ್ದ ಕಾರು, ಬೀಡ್ ಗ್ರಾಮದಿಂದ 100 ಕಿ.ಮೀ ದೂರದಲ್ಲಿರುವ ರಾಷ್ಟ್ರೀಯ ಹೆದ್ದಾರಿ-52ರ ಡಿವೈಡರ್ ಬಳಿ ಅಪಘಾತಕ್ಕೀಡಾಯಿತು. ಅವಘಡವನ್ನು ನೋಡಿದ ಕೆಲವರು ಕಾರನ್ನು ರಸ್ತೆಯಿಂದ ತೆಗೆಯುತ್ತಿದ್ದರು. 11:30ರ ಸುಮಾರಿಗೆ ವೇಗವಾಗಿ ಬಂದ ಟ್ರಕ್, ತೆರವುಗೊಳಿಸುತ್ತಿದ್ದವರ ಮೇಲೆ ಹಾದು ಹೋಗಿದೆ. ಪರಿಣಾಮ ಆರು ಜನರು ಸಾವನ್ನಪ್ಪಿದ್ದು, ಒಬ್ಬರು ಗಾಯಗೊಂಡಿದ್ದಾರೆ.
ಸದ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ ಹಾಗೂ ಟ್ರಕ್ ಚಾಲಕನನ್ನು ಪತ್ತೆ ಹಚ್ಚುವಲ್ಲಿ ನಿರತರಾಗಿದ್ದಾರೆ