“ನಂದಿನಿ ನದಿ ಮಲಿನ ಮಾಡಿದವರಿಗೆ ತಕ್ಕ ಉತ್ತರ ಕೊಡುತ್ತೇನೆ!”

ಮೂಲ್ಕಿ: ನಂದಿನಿ ನದಿಯ ಮಾಲಿನ್ಯಕ್ಕೆ ಕಾರಣರಾದವರಿಗೆ ತಕ್ಕ ಶಾಸ್ತಿ ಮಾಡುವುದಾಗಿ ಇಲ್ಲಿನ ಚೇಳ್ಯಾರು ಖಂಡಿಗೆ ಧರ್ಮರಸು ಶ್ರೀ ಉಳ್ಳಾಯ, ಪರಿವಾರ ದೈವಗಳ ನೇಮೋತ್ಸವ ಸಂದರ್ಭ ದೈವ ಅಭಯ ನೀಡಿದೆ.
ಖಂಡಿಗೆ ಚೇಳ್ಯಾರು ಧರ್ಮರಸು ಶ್ರೀ ಉಳ್ಳಾಯ ದೈವಸ್ಥಾನದ ವಾರ್ಷಿಕ ಜಾತ್ರೆ ಸಂದರ್ಭ ಸಂಪ್ರದಾಯದಂತೆ ಮೀನು ಹಿಡಿಯುವ ಕಾರ್ಯಕ್ರಮ ನಡೆಯುತ್ತದೆ. ಪ್ರಸ್ತುತ ನಂದಿನಿ ನದಿಯಲ್ಲಿ ತ್ಯಾಜ್ಯ ನೀರು ಹರಿಯುವುದರ ಜೊತೆಗೆ ಕಳೆ ತುಂಬಿದ್ದರಿಂದ ಮೀನು ಹಿಡಿಯಲು ಬರುವ ಭಕ್ತರ ಸಂಖ್ಯೆ ಕಡಿಮೆಯಾಗಿದೆ. ನದಿಯಲ್ಲಿ ಮೀನಿನ ಸಂತತಿ ಕೊರತೆ ಕಂಡು ಬಂದಿದ್ದು ಇದೇ ರೀತಿ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಸಂಪ್ರದಾಯ ಮಾಯವಾಗುವ ಆತಂಕವಿದೆ.
ಈ ಹಿನ್ನೆಲೆಯಲ್ಲಿ ಈ ಬಾರಿ ದೈವಗಳ ನೇಮೋತ್ಸವ ಸಂದರ್ಭ ನಂದಿನಿ ನದಿ ಮಾಲಿನ್ಯ ದಿಂದ ಜಾತ್ರೆ ಪ್ರಯುಕ್ತ ಖಂಡಿಗೆ ಮೀನು ಹಿಡಿಯುವ ಜಾತ್ರೆ ನಿಂತು ಹೋಗುವ ಪರಿಸ್ಥಿತಿ ಬಂದಿರುವ ಬಗ್ಗೆ ಆಡಳಿತ ಸಮಿತಿ, ನಂದಿನಿ ನದಿ ಸಂರಕ್ಷಣಾ ಸಮಿತಿ ಪದಾಧಿಕಾರಿಗಳು ದೈವದಲ್ಲೇ ನಿವೇದಿಸಿದರು.
ಈ ಬಗ್ಗೆ ಅಭಯ ನೀಡಿದ ಉಳ್ಳಾಯ ದೈವ, ತನ್ನ ಸವಾರಿಯ ನಂದಿನಿ ನದಿ ಉಳಿಸಿಯೇ ಸಿದ್ಧ. ನದಿ ಮಾಲಿನ್ಯ ಕಾರಣರಾದವರಿಗೆ ತಕ್ಕ ಶಾಸ್ತಿ ಮಾಡುತ್ತೇನೆ ಎಂದು ಅಭಯ ನೀಡಿದೆ.
ಕಳೆದ ವರ್ಷ ಕೂಡ ಈ ಬಗ್ಗೆ ದೈವಕ್ಕೆ ಮೊರೆ ಹೋಗಿದ್ದು ಬಳಿಕ ನಂದಿನಿ ನದಿ ಸಂರಕ್ಷಣ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಪ್ರತಿಭಟನಾ ಸ್ಥಳಕ್ಕೆ ಲೋಕಾಯುಕ್ತರು ಭೇಟಿ ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಸಂಬಂಧ ಪಟ್ಟ ಇಲಾಖೆಗಳಿಗೆ ಆದೇಶ ನೀಡಿದ್ದರು.
ನಂತರ ನದಿಯ ಕೊಳೆ ತೆಗೆಯುವ ಕಾರ್ಯ ಆರಂಭಗೊಂಡಿತ್ತು. ದೈವಸ್ಥಾನದಲ್ಲಿ ನಂದಿಗೋಣ, ಕುಮಾರ ಸಿರಿಗಳ ಭೇಟಿ, ನಾಗದೇವರಿಗೆ ಭಕ್ತಾದಿಗಳಿಂದ ತಂಬಿಲ, ಬಾಕಿಮಾರು ಗದ್ದೆಯಲ್ಲಿ ಚೆಂಡು, ಜಾರಂದಾಯ ಬಂಟ, ಕೊಡಮಣಿತ್ತಾಯ ದೈವಗಳಿಗೆ ಜೋಡಿ ನೇಮೋತ್ಸವ, ಬಾಕಿಲ್ ದಾಂತಿ ಕೊಡಬ್ಬು ದೈವಸ್ಥಾನದ ಕೋಡಬ್ಬು ಮತ್ತು ಧೂಮಾವತಿ ದೈವದ ಭೇಟಿ, ಉಳ್ಳಾಯ ಹಾಗೂ ಪರಿವಾರ ದೈವಗಳಿಗೆ ಸಾಮೂಹಿಕ ಹೂವಿನ ಪೂಜೆ, ಸಾರ್ವಜನಿಕ ಅನ್ನ ಸಂತರ್ಪಣೆ, ಧ್ವಜಾರೋಹಣ, ಖಂಡಿಗೆ ಬೀಡಿಗೆ ಭಂಡಾರ ನಿರ್ಗಮನ ನಡೆದವು.
ಪ್ರಮುಖರಾದ ಶ್ರೀಪತಿ ಭಟ್ ಭಟ್ರಚಾವಡಿ, ವೇದ ಮೂರ್ತಿ ಹಳೆಯಂಗಡಿ ರಂಗನಾಥ ಭಟ್, ಆಡಳಿತ ಸಮಿತಿ ಗೌರವಾಧ್ಯಕ್ಷ ತೋಕೂರು ಗುತ್ತು ಉದಯ ಕುಮಾರ್ ಶೆಟ್ಟಿ ಅಧ್ಯಕ್ಷ ಖಂಡಿಗೆಬೀಡು ಡಯಾನಂದ ಬಿ. ಶೆಟ್ಟಿ ಕಾರ್ಯದರ್ಶಿ ಚರಣ್ ಕುಮಾರ್ ಶೆಟ್ಟಿ ಕೋಶಾಧಿಕಾರಿ ಸುಧಾಕರ ಪಿ. ಶೆಟ್ಟಿ ಮತ್ತಿತರರು ಹಾಜರಿದ್ದರು

error: Content is protected !!