ಪುತ್ತೂರು: ಕೊರತಿ ದೈವದ ಜೊತೆ ವಾಗ್ವಾದ ನಡೆಸಿ ಸುದ್ದಿಯಾಗಿದ್ದ ಪುತ್ತೂರಿನ ಉದ್ಯಮಿ, ಸುಳ್ಯ ತಾಲೂಕಿನ ಕಲ್ಮಡ್ಕದ ನಿವಾಸಿ ಎಡಕ್ಕಾನ ರಾಜರಾಮ್ ಭಟ್ ಎಂಬವರಯ ಮಸ್ಕತ್ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ
ಪುತ್ತೂರಿನಲ್ಲಿ ಪುತ್ತಿಲ ಪರಿವಾರ ಸಂಘಟನೆ ಹುಟ್ಟಿಕೊಂಡಾಗ ಅದರ ಜೊತೆಗೆ ಗುರುತಿಸಿಕೊಂಡಿದ್ದ ಇವರು, ಇತ್ತೀಚೆಗೆ ‘ಭಾರತೀಯ ಜನಹಿತ ಪರಿವಾರ’ ಎಂಬ ಸಂಘಟನೆಯನ್ನು ರೂಪಿಸಲು ಯತ್ನಿಸಿದ್ದರೂ ಯಶಸ್ವಿಯಾಗಿರಲಿಲ್ಲ. ಮೂರು ತಿಂಗಳ ಹಿಂದೆ ತಮ್ಮ ಸ್ವಗ್ರಾಮದಲ್ಲಿ ಕೊರತ್ತಿ ದೈವದೊಂದಿಗೆ ವಾಗ್ವಾದ ನಡೆಸುತ್ತಿದ್ದ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇವರ ವಿರುದ್ಧ ಸಾರ್ವಜನಿಕರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು.
ಇತ್ತೀಚೆಗೆ ದ ಸುಹಾಸ್ ಶೆಟ್ಟಿ ಅವರ ಸಾವಿನಿಂದ ತೀವ್ರ ಆಘಾತಕ್ಕೆ ಒಳಗಾಗಿದ್ದ ರಾಜಾರಾಮ್ ಭಟ್ ಅವರು, ಈ ಕುರಿತು ವಿಡಿಯೋವೊಂದನ್ನು ಹರಿಬಿಟ್ಟು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಸುಹಾಸ್ ಶೆಟ್ಟಿಯವರ ಫೋಟೋವನ್ನೇ ತಮ್ಮ ಡಿಪಿಯನ್ನಾಗಿಸಿಕೊಂಡಿದ್ದರು
ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಹಿಂದೂಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಇವರು, ಕಳೆದ ರಾಜ್ಯ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪುತ್ತೂರು ಕ್ಷೇತ್ರದಲ್ಲಿ ಅರುಣ್ ಪುತ್ತಿಲ ಅವರು ಪಕ್ಷೇತರರಾಗಿ ಸ್ಪರ್ಧಿಸಿದಾಗ ಅವರ ಜೊತೆ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದರು.
ಚುನಾವಣೆಯ ಬಳಿಕವೂ ಅರುಣ್ ಪುತ್ತಿಲ ಅವರು ‘ಪುತ್ತಿಲ ಪರಿವಾರ’ ಎಂಬ ಸಾಮಾಜಿಕ ರಾಜಕೀಯ ಸಂಘಟನೆಯನ್ನು ಸ್ಥಾಪಿಸಿದಾಗ, ಅದರ ಜೊತೆಯೂ ಗುರುತಿಸಿಕೊಂಡಿದ್ದರು.