ಕಲಬುರಗಿ: ರಸ್ತೆ ಮೇಲೆ ಅಡ್ಡ ಬಂದ ನಾಯಿ ಜೀವ ಉಳಿಸುವ ಪ್ರಯತ್ನದಲ್ಲಿ ಟವೆರಾ ಕಾರು ರಸ್ತೆ ಬದಿಯ ಕಲ್ಲಿನ ಕಂಬಗಳಿಗೆ ಅಪ್ಪಳಿಸಿ ಒಂದೇ ಕುಟುಂಬದ ಮೂವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಅಫಜಲಪುರ ತಾಲೂಕಿನ ಗೊಬ್ಬೂರು ಗ್ರಾಮದ ಬಳಿ ನಡೆದಿದೆ.
ಕಲಬುರಗಿಯ ಮಿಲ್ಲತ್ ನಗರದ ಆಯೇಷಾ(70), ಅಜ್ಮೇರಾ(30), ಜೈನಬ್(2) ಮೃತ ದುರ್ದೈವಿಗಳು. ಮಹಾರಾಷ್ಟ್ರ ಗಡಿಭಾಗದ ಹೈದ್ರಾ ದರ್ಗಾದಲ್ಲಿ ನಡೆಯುತ್ತಿದ್ದ ಸಂಬಂಧಿಕರ ಮಗುವಿನ ಜಾವಳ ಕಾರ್ಯಕ್ರಮಕ್ಕೆ ಟವೆರಾ ಕಾರಿನಲ್ಲಿ ಕುಟುಂಬ ಸಮೇತರಾಗಿ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಮಿಲ್ಲತ್ ನಗರದಿಂದ ಹೊರಟಿದ್ದ ಕಾರು ಗೊಬ್ಬೂರು ಬಳಿ ಬರುತ್ತಿದ್ದಂತೆಯೇ ನಾಯಿ ಅಡ್ಡ ಬಂದಿದೆ.
ಈ ವೇಳೆ ನಾಯಿಯ ಪ್ರಾಣ ಕಾಪಾಡಲು ಹೋದ ಚಾಲಕ ರಸ್ತೆ ಬದಿಗೆ ಕಾರು ಇಳಿಸಿದ್ದಾನೆ. ಕಾರು ನಿಯಂತ್ರಣ ತಪ್ಪಿ ಅಲ್ಲೇ ಪಕ್ಕದಲ್ಲಿದ್ದ ಕಲ್ಲಿನ ಕಂಬಗಳಿಗೆ ರಭಸವಾಗಿ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಕಾರು ನಜ್ಜುಗುಜ್ಜಾಗಿ, ಮೂವರು ಕೊನೆಯುಸಿರೆಳೆದಿದ್ದಾರೆ. ದೇವಲಗಾಣಗಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ದೇವಲಗಾಣಗಾಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.